ಬೆಂಗಳೂರು: ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳು ಗಂಭೀರತೆಯನ್ನು ಅರಿತು ಕಟ್ಟೆಚ್ಚರ ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತರ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಆಯ್ಕೆ ಪ್ರಕ್ರಿಯೆ ಹರಾಜು ಮೂಲಕ ನಡೆಯುತ್ತಿರುವ ಬಗ್ಗೆ ವರದಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂತಹ ಪ್ರಕ್ರಿಯೆಗಳು ನಡೆಯದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಈ ಕುರಿತು ಅರಿವು ಮೂಡಿಸಿ ಎಂದು ತಿಳಿಸಿದರು.
ಮತಪತ್ರಗಳನ್ನು ಮುದ್ರಣಕ್ಕೆ ಕಳುಹಿಸುವ ಮುನ್ನ ತಹಶೀಲ್ದಾರ್ಗಳು ಲೋಪದೋಷ ರಹಿತತೆ ಕುರಿತು ಖಾತರಿ ಪಡಿಸಿಕೊಳ್ಳಬೇಕು ಎಂದರಲ್ಲದೆ, ಮತಪತ್ರಗಳು, ಲಕೋಟೆ, ನಮೂನೆ, ಲೇಖನ ಸಾಮಾಗ್ರಿಗಳು, ಕೋವಿಡ್-19 ಸಾಮಾಗ್ರಿಗಳು, ಮತಗಟ್ಟೆ ಸಾಮಾಗ್ರಿಗಳ ಹಂಚಿಕೆ ಹಾಗೂ ವಿತರಣೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಚಿಹ್ನೆಗಳನ್ನು ಅಂತಿಮಗೊಳಿಸಿದ ನಂತರ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರೊಂದಿಗೆ ಸಭೆ ನಡೆಸಿ ಚಿಹ್ನೆ ವಿತರಿಸಲು ತಿಳಿಸಿದರಲ್ಲದೆ ಚುನಾವಣೆಯಲ್ಲಿ ಪಾಲಿಸಬೇಕಾದ ಸದಾಚಾರ ಸಂಹಿತೆ ಕುರಿತು ಅಭ್ಯರ್ಥಿಗಳಿಗೆ ತಿಳಿಸಬೇಕು, ಅಲ್ಲದೆ ಇತ್ತೀಚೆಗೆ ಪ್ರಕಟಗೊಳಿಸಿರುವ ಅಂತಿಮ ಮತದಾರ ಪಟ್ಟಿಯಲ್ಲಿನ ಮತದಾರರು ಮತದಾನ ಮಾಡಲು ಅರ್ಹರೆಂದು ತಿಳಿಸಿದರು.
ಚುನಾವಣೆ ಸಂಬಂಧಿತ ದೂರುಗಳ ಸಲ್ಲಿಸುವ ಕಂಟ್ರೋಲ್ ರೂಮ್ 24×7 ಅತ್ಯಂತ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಮೂರು ಪಾಳಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ತಿಳಿಸಿದರು.
ಕೋವಿಡ್-19 ಸೋಂಕಿತ ಮತದಾರರಿಗೆ ಮತದಾನದ ದಿನದ ಕೊನೆಯ ಒಂದು ಗಂಟೆಗೆ ಮತದಾನಕ್ಕೆ ಅವಕಾಶ ನೀಡಲಾಗುವುದು. ಈ ಸಂದರ್ಭದಲ್ಲಿ ಮತಗಟ್ಟೆಯ ಸಿಬ್ಬಂದಿಗಳು ಪಿಪಿಇ ಕಿಟ್ ಹಾಗೂ ಅಗತ್ಯ ಮುನ್ಬೆಚ್ಚರಿಕಾ ಕ್ರಮ ಕೈಗೊಳ್ಳಲು ತಿಳಿಸಿದರು.
ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ವೃತ್ತಾಕಾರದ ಅಥವಾ ಚೌಕಾಕಾರದ ಗುರುತುಗಳನ್ನು ಹಾಕಬೇಕು ತಿಳಿಸಿದರಲ್ಲದೆ, ಮತದಾರರ ಉಷ್ಣಾಂಶ ಪರೀಕ್ಷೆ ಮಾಡುವುದು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಕಲ್ಲಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ರಾಪಂ ಚುನಾವಣೆ ಸಂಬಂಧ ವಿವಿಧ ತಂಡಗಳಾದ ಜಿಲ್ಲಾ ಮಟ್ಟದ ಸದಾಚಾರ ನೀತಿ ಸಂಹಿತೆ ತಂಡ, ವಾಹನ ನಿರ್ವಹಣೆ, ಚುನಾವಣೆ ಸಂಬಂಧ ಎಲ್ಲಾ ಸಾಮಗ್ರಿಗಳ ಹಂಚಿಕೆ ಮತ್ತು ನಿರ್ವಹಣೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಮತಪತ್ರಗಳ ಮುದ್ರಣ, ಪರಿಶೀಲನೆ ಹಾಗೂ ಹಂಚಿಕೆ ಮಾಡುವ ಸಂಪೂರ್ಣ ನಿರ್ವಹಣೆ, ಮತದಾರರಲ್ಲಿ ಜಿಲ್ಲಾ ಸಮಿತಿಯಿಂದ ಜಾಗೃತಿ ಮೂಡಿಸುವ ಬಗ್ಗೆ, ಕಂಟ್ರೋಲ್ ರೂಮ್ ನಿರ್ವಹಣೆ, ಮತಗಟ್ಟೆಗಳಿಗೆ ಹಾಗೂ ಚುನಾವಣಾಧಿಕಾರಿಗಳ ಕಚೇರಿ ಮೂಲಭೂತ ಸೌಕರ್ಯ ಪರಿಶೀಲನೆ ಮತ್ತು ಒದಗಿಸುವ ಬಗ್ಗೆ,ಕೋವಿಡ್-19 ನಿರ್ವಹಣೆ, ಮತಗಟ್ಟೆ ಸಿಬ್ಬಂದಿ ನೇಮಕಾತಿ, ಅಂಚೆ ಮತ ಪತ್ರಗಳ ನಿರ್ವಹಣೆ, ಚುನಾವಣಾ ವೀಕ್ಷಕರಿಗೆ ನೋಡಲ್ ಅಧಿಕಾರಿ ಹಾಗೂ ಲೈಸನ್ ಆಫೀಸರ್, ತರಬೇತಿ ನಿರ್ವಹಣೆ, ಮತ ಎಣಿಕಾ ಕೇಂದ್ರ ಸಿದ್ಧಪಡಿಸುವ ಮೇಲ್ವಿಚಾರಣೆ, ಮತಪೆಟ್ಟಿಗೆಗಳ ಸಂಪೂರ್ಣ ಉಸ್ತುವಾರಿ ಹಾಗೂ ನಿರ್ವಹಣೆ, ಚುನಾವಣೆಗೆ ಸಂಬಂಧಿಸಿದ ಸೇರಿದಂತೆ ಇನ್ನಿತರ ತಂಡಗಳನ್ನು ರಚಿಸಿ, ಅಧಿಕಾರಿಗಳನ್ನು ನೇಮಿಸಲಾಗಿದೆ.
ಚುನಾವಣೆ ಕುರಿತ ತರಬೇತಿಗಳು ಪರಿಣಾಮಕಾರಿಯಾಗಿರಲಿ ಎಂದರಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಂಡು ತರಬೇತಿ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ತಹಶೀಲ್ದಾರ್ಗಳಿಗೆ ಹೇಳಿದರಲ್ಲದೆ ಪಂಚಾಯಿತಿವಾರು ತರಬೇತಿ ನಿಡಲು ಹೆಚ್ಚು ಮಾಸ್ಟರ್ ಟ್ರೈನರ್ಸ್ಗಳನ್ನು ನಿಯೋಜಿಸಬೇಕು ಅಲ್ಲದೆ, ಮತ ಎಣಿಕೆ ಕೇಂದ್ರಕ್ಕೆ ಸೂಕ್ತ ಬಂದೋಬಸ್ತ್ ಮಾಡುವಂತೆ ಪೊಲೀಸ್ ಇಲಾಖೆಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಅವರು ಮಾತನಾಡಿ ನೆಲಮಂಗಲ ಹಾಗೂ ಹೊಸಕೋಟೆ ಸೂಕ್ಷ್ಮ ಕ್ಷೇತ್ರಗಳಾಗಿದ್ದು, ಇಲ್ಲಿ ಹೆಚ್ಚು ರೌಡಿಶೀಟರ್ ಗಳಿರುವ ಕಾರಣ ಅತಿಹೆಚ್ಚು ನಿಗಾವಹಿಸಬೇಕು ಪೊಲೀಸ್ ಇಲಾಖೆಯವರು ರಾತ್ರಿ ಗಸ್ತು ಹೆಚ್ಚಿಸಬೇಕು ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಕೆಲವು ಸಮುದಾಯ ಅಭ್ಯರ್ಥಿಗಳಿಗೆ ಬೆದರಿಕೆಗಳು ಬರುವ ಸಾಧ್ಯತೆ ಇರುವುದರಿಂದ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.
ಮತಗಟ್ಟೆಗಳಾಗಿ ಆಯ್ಕೆಯಾಗಿರುವ ಶಾಲೆ, ಅಂಗನವಾಡಿ ಕೇಂದ್ರಗಳು ಕೋವಿಡ್-19 ಹಿನ್ನೆಲೆ ಇದುವರೆಗೂ ತೆರೆಯದಿರುವ ಕಾರಣ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರು, ದೀಪ, ಬಾಗಿಲು, ಕಿಟಕಿ ವ್ಯವಸ್ಥೆ ಸರಿಯಾಗಿದೆಯೇ ಎಂದು ಪರಿಶೀಲಿಸಲು ತಿಳಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಗಳು ಅತ್ಯಂತ ತುರುಸಿನ ಹಾಗೂ ಬಿರುಸಿನ ಚುನಾವಣೆಗಳಾಗಿರುವ ಕಾರಣ ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದರು. ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಕುರಿತ ಜಾಗೃತಿ ಮೂಡಿಸುವ ಬ್ಯಾನರ್, ಪೋಸ್ಟರ್ಸ್ ಪ್ರದರ್ಶಿಸಲು ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಹಣಾಧಿಕಾರಿಗಳು ಕ್ರಮವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರವಿ.ಡಿ.ಚನ್ನಣ್ಣನವರ್ ಅವರು ಮಾತನಾಡಿ ಚುನಾವಣೆ ನಿಷ್ಪಕ್ಷಪಾತ, ಶಾಂತಿಯುತ ಹಾಗೂ ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೆಲಮಂಗಲ ಹಾಗೂ ಹೊಸಕೋಟೆ ವ್ಯಾಪ್ತಿಯಲ್ಲಿ ಹೆಚ್ಚು ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿರುವುದರಿಂದ ಜಿಲ್ಲೆಗಳಲ್ಲಿ ರೌಡಿಶೀಟರ್ಗಳ ಪರೇಡ್ ನಡೆಸಲಾಗಿದೆ ಹಾಗೂ ರೌಡಿಶೀಟರ್ಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಸೂಚನೆ ನೀಡಲಾಗಿದ್ದು, ನಾಲ್ಕು ಜನರನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಮತದಾರರಿಗೆ ಬೆದರಿಕೆ ಬಂದಲ್ಲಿ ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ವಾಹನ ಸೇವೆಯನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಕೋರಿದಾಗ, ಜಿಲ್ಲಾಧಿಕಾರಿ ಅವರು ಅಗತ್ಯದ ವಾಹನಗಳನ್ನು ಪೂರೈಸುವಂತೆ ಸಾರಿಗೆ ಇಲಾಖೆ ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್. ಕೆ.ನಾಯಕ, ಉಪ ವಿಭಾಗಾಧಿಕಾರಿ ಅರುಳ್ಕುಮಾರ್, ಡಿವೈಎಸ್ಪಿ ರಂಗಪ್ಪ ಸೇರಿದಂತೆ ತಹಶೀಲ್ದಾರಗಳು, ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

