ದೊಡ್ಡಬಳ್ಳಾಪುರ: ಕನ್ನಡ ನಾಟಕಗಳು, ವೃತ್ತಿ ರಂಗಭೂಮಿ ಮತ್ತು ಗ್ರಾಮೀಣ ಪ್ರದೇಶದ ಪೌರಾಣಿಕ ನಾಟಕಗಳು ಕನ್ನಡ ಭಾಷೆಯ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು (P. Govindaraju) ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯಕ್ಷಗಾನ, ದೊಡ್ಡಾಟ, ಬಯಲಾಟ ಮುಂತಾದ ಜನಪದ ಪ್ರಕಾರಗಳು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ ಎಂದರು.
ಆಧುನಿಕ ಕನ್ನಡ ರಂಗಭೂಮಿಯು ಸಾಮಾಜಿಕ ಸಮಸ್ಯೆಗಳನ್ನು, ಮೌಲ್ಯಗಳನ್ನು ಮತ್ತು ಸಾಂಸ್ಕೃತಿಕ ತಲ್ಲಣಗಳನ್ನು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತದೆ. ಕನ್ನಡ ರಂಗಭೂಮಿಯಲ್ಲಿ ನಿರಂತರ ಪ್ರಯೋಗಗಳು ನಡೆಯುತ್ತಲೇ ಇವೆ ಎಂದರು.
ಹಿರಿಯ ರಂಗಭೂಮಿ ಕಲಾವಿದ ಸುರಧೇನುಪುರ ಶಿವರಾಜು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ವೈವಿಧ್ಯಮಯ ಉಪಭಾಷೆಗಳಾಗಿ ಪ್ರಯೋಗಗೊಳ್ಳುತ್ತಿದೆ. ರಂಗಭೂಮಿ ಕಲಾವಿದರ ಕನ್ನಡ ಭಾಷೆಯ ಬಳಕೆ ಮತ್ತು ಸ್ಪಷ್ಟ ಉಚ್ಚಾರಣೆ ಅನನ್ಯವಾಗಿದೆ. ಆಧುನಿಕ ಮನರಂಜನಾ ಮಾಧ್ಯಮಗಳ ಮಧ್ಯೆ ರಂಗಭೂಮಿ ಕಲೆ ತನ್ನದೇ ಆದ ಅಸ್ತಿತ್ವವನ್ನು ಪಡೆದುಕೊಂಡಿರುವುದು ಸಂತೋಷಕರ ವಿಚಾರವಾಗಿದೆ ಎಂದರು.
ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರದ ಜಾನಪದ ಕಲಾವಿದೆ ರತ್ನಮ್ಮ ಮತ್ತು ಜಂಗಮಕೋಟೆ ರಂಗಭೂಮಿ ಕಲಾವಿದೆ ಕದಿರಮ್ಮ ಅವರನ್ನು ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದಿಂದ ಅಭಿನಂದಿಸಿದರು
ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದ ಜಯಮ್ಮ, ದೊಡ್ಡಬಳ್ಳಾಪುರ ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದ ಗೌರವ ಅಧ್ಯಕ್ಷ ಎನ್.ರಾಮಮೂರ್ತಿ, ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಕೆ.ನರಸಿಂಹಯ್ಯ, ಖಜಾಂಚಿ ಮುನಿಪಾಪಯ್ಯ ನಿರ್ದೇಶಕ ಜಿ.ರಾಮು, ವೆಂಕಟರಾಜು ಮುಂತಾದವರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ: ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತಿ.. ಹೊಸಹಳ್ಳಿಯಲ್ಲಿ ವಿಶೇಷ ಪೂಜೆ

ದೊಡ್ಡಬಳ್ಳಾಪುರ: ಭಗವಾನ್ ವಿಷ್ಣುವಿನ 4ನೇ ಅವತಾರವಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತಿಯನ್ನು (Sri Lakshmi Narasimha Swamy Jayanti) ತಾಲೂಕಿನ ಹೊಸಹಳ್ಳಿಯ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ವೈಶಾಖ ಶುದ್ಧ ಚತುರ್ದಶಿಯಂದು ಆಚರಿಸಲಾಗುವ ಈ ದಿನದ ಅಂಗವಾಗಿ, ಹೊಸಹಳ್ಳಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆ ನೆರವೇರಿಸಲಾಯಿತು.
ಪೌರಾಣಿಕ ಹಿನ್ನೆಲೆ: ಭಗವಾನ್ ವಿಷ್ಣುವು ಹಿರಣ್ಯಕಶಿಪುವಿನ ಅಟ್ಟಹಾಸವನ್ನು ಕೊನೆಗೊಳಿಸಲು ಮತ್ತು ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಸಿಂಹದ ಮುಖ ಮತ್ತು ಮನುಷ್ಯನ ದೇಹದೊಂದಿಗೆ ನರಸಿಂಹ ಸ್ವರೂಪಿಯಾಗಿ ಕಾಣಿಸಿಕೊಂಡರು.

