ದೊಡ್ಡಬಳ್ಳಾಪುರ: ಮನೆ ಅಂಗಳದಲ್ಲಿ ಅಲಂಕಾರಕ್ಕಾಗಿ ಹೂವಿನ ಸಸಿಗಳನ್ನು ಮಾತ್ರ ಬೆಳೆಸದೇ ಔಷಧೀಯ ಗುಣವುಳ್ಳ ಸಸಿಗಳನ್ನು ಬೆಳೆಸಿದರೆ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಕ್ಕೆ ಬರುತ್ತವೆ ಎಂದು ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ ಹೇಳಿದರು.
ಅವರು ನಗರದ ಮಹಿಳಾ ಸಮಾಜ ಕಸ್ತೂರ ಬಾ ಶಿಶು ವಿಹಾರದಲ್ಲಿ ನಡೆದ ಔಷಧಿ ಸಸ್ಯಗಳ ಬಳಕೆ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರೊನಾ ಸಂದರ್ಭದಲ್ಲಿ ಬಹುತೇಕ ಜನರ ಆರೋಗ್ಯ ಸುಧಾರಣೆಯಾಗಿರುವುದೇ ಮನೆ ಮದ್ದಿನಿಂದ. ಲಾಕ್ಡೌನ್ ಸಂದರ್ಭದಲ್ಲಿ ಬಹುತೇಕ ಜನ ತಮ್ಮ ಸುತ್ತಮುತ್ತಲು ದೊರೆಯುತ್ತಿದ್ದ ಔಷಧೀಯ ಸಸ್ಯಗಳಿಂದಲೇ ಆರೋಗ್ಯವಂತರಾಗಿದ್ದನ್ನು ಕಂಡಿದ್ದೇವೆ. ಕೊರೊನಾ ನಮ್ಮ ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಬದಲಾಣೆಗಳಿಗೆ ಕಾರಣವಾದಂತೆ ಔಷಧಿಯ ಸಸ್ಯಗಳ ಬಳಕೆಯು ಹೆಚ್ಚಾಗುವಂತೆ ಮಾಡಿದೆ. ಮಹಿಳೆಯರು ಬಿಡುವಿನ ವೇಳೆಯಲ್ಲಿ ಮನೆ ಅಂಗಳ,ಮನೆಯ ತಾರಸಿಯಲ್ಲೂ ಸಹ ಔಷಧಿಯ ಸಸಿಗಳನ್ನು ಬೆಳೆದುಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದರು.
ಸಂಪನ್ಮೂಲ ವ್ಯಕ್ತಿ ಟಿ.ಡಿ.ಯು.ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಹಾಗೂ ಆಯುರ್ವೇದಿಕ್ ಫಿಜಿಷಿಯನ್ ಡಾ.ಕೆ.ಸುಬ್ರಹ್ಮಣ್ಯಕುಮಾರ್ ಮಾತನಾಡಿ, ಔಷಧಿಯ ಸಸ್ಯಗಳ ಗುಣಲಕ್ಷಣಗಳನ್ನು ತಿಳಿದುಕೊಂಡರೆ ಸಸ್ಯಗಳನ್ನು ಗುರುತಿಸಲು ಮತ್ತು ಬಳಸಲು ಅನುಕೂಲವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಔಷಧಿಗಿಡಗಳನ್ನು ಮಹಿಳೆಯರಿಗೆ ಪರಿಚಯಿಸುವ ಮೂಲಕ ಅವುಗಳ ಬಳಕೆ ಕುರಿತು ಮಾಹಿತಿ ನೀಡಿದರು. ಹಾಗೆಯೇ ಲೆಮನ್ ಗ್ರಾಸ್ನಲ್ಲಿ ಟೀ ತಯಾರಿಸಿ ಪ್ರಾತ್ಯೇಕ್ಷಿಕೆ ನೀಡಿದರು.
ಮಹಿಳಾ ಸಮಾಜದ ಉಪಾಧ್ಯಕ್ಷೆ ಕವಿತಾ, ಖಜಾಂಚಿ ಯಶೋಧ, ನಿರ್ದೇಶಕಿ ಗಿರಿಜಾ, ಮಹಿಳಾ ಸಮಾಜದ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

