ದೊಡ್ಡಬಳ್ಳಾಪುರ: ಸರ್ವ ಧರ್ಮ ಸಮನ್ವಯತೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಾಗಿದೆ. ಯುವ ಸಮುದಾಯವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ನಾಯಕ್ ತಿಳಿಸಿದರು.
ತಾಲೂಕಿನ ಕಾಡನೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯದ ಭಾಗಿತ್ವದಲ್ಲಿ ಗ್ರಾಮೀಣ ಅಭಿವೃದ್ದಿಯನ್ನು ಸಮರ್ಪಕವಾಗಿ ಮಾಡಬಹುದಾಗಿದೆ. ನಮ್ಮ ಹಿರಿಯರು ಗ್ರಾಮಗಳ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಪಕ್ಷ, ಜಾತಿ, ಧರ್ಮವನ್ನು ಮೀರಿ ಜನರು ನಮ್ಮೂರಿನ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ನು ಗ್ರಾಮಗಳಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ. ಗ್ರಾಮಸ್ಥರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದರು.
ಗ್ರಾಮಗಳಿಗೆ ಮತ್ತು ರೈತರಿಗೆ ಅನುಕೂಲವಾಗುವ ಕೆರೆಗಳ ಅಭಿವೃದ್ದಿ, ಶುದ್ದ ಕುಡಿಯುವ ನೀರಿನ ಘಟಕಗಳು, ಸ್ವಾವಲಂಬಿ ಉದ್ಯೋಗಿಯಾಗಲು ಅರ್ಥಿಕ ನೆರವು. ಸ್ವಸಹಾಯ ಸಂಘಗಳ ಮೂಲಕ ಜನೋಪಯೋಗಿ ಕಾರ್ಯಕ್ರಮಗಳು ಮತ್ತು ಅಭಿವೃದ್ದಿ ಯೋಜನೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ನಡೆಯುತ್ತಿದೆ. ಕೋವಿಡ್ ಆತಂಕದ ನಡುವೆಯೂ ಗ್ರಾಮಾಭಿವೃದ್ದಿಯೋಜನೆಯನ್ನು ಜನರಿಗೆ ತಲುಪಿಸಲಾಗುತ್ತದೆ. ಜನರು ಸ್ವಾವಲಂಬಿಗಳಾಗಿ ಜೀವನ ನಡೆದಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಗ್ರಾಮೀಣ ಜನರಿಗೆ ನೀಡಲಾಗುತ್ತಿದೆ ಎಂದರು.
ಚನ್ನಕೇಶವಸ್ವಾಮಿ ದೇವಾಲಯದ ಅಧ್ಯಕ್ಷರಾದ ಗೋಪಾಲಯ್ಯ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನ ಹಲವಾರು ಐತಿಹಾಸಿಕ ದೇವಾಲಯಗಳನ್ನು ಧರ್ಮಸ್ಥಳ ದೇವಾಲಯ ಜೀರ್ಣೋದ್ದಾರ ಯೋಜನೆಯಲ್ಲಿ ಅಭಿವೃದ್ದಿಗೊಳಿಸಲಾಗಿದೆ. ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಕಾರಿಯಾಗಿದೆ. ಸ್ವಹಾಯ ಸಂಘಗಳ ಕಾರ್ಯವೈಖರಿ ಮತ್ತು ಗ್ರಾಮಾಭಿವೃದ್ದಿ ಯೋಜನೆಗಳಿಂದ ರಾಜ್ಯದ ಹಲವೆಡೆ ಅಭಿವೃದ್ದಿ ಕಾರ್ಯಗಳು ನಡೆದಿವೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗಳಿಂದ ರೈತರು ಮತ್ತು ಗ್ರಾಮಗಳ ಅಭಿವೃದ್ದಿ ಕಂಡಿವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ನಿರ್ದೇಶಕಿ ಸುಧಾ ಭಾಸ್ಕರ್ ನಾಯಕ್, ಮಧುರೆ ಹೋಬಳಿ ಮೇಲ್ವಿಚಾರಕರಾದ ಎಸ್.ಎಂ.ಪ್ರಕಾಶ್, ಚನ್ನಕೇಶವಸ್ವಾಮಿ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ವೆಂಕಟೇಗೌಡ, ಮಾಜಿ ಕಾರ್ಯದರ್ಶಿ ಕೆ.ಜಿ.ನಾರಾಯಣಗೌಡ, ಮಾಜಿ ಖಜಾಂಚಿ ಕೆ.ಸಿ.ನಾರಾಯಣಸ್ವಾಮಿ, ನಿವೃತ್ತ ಮುಖ್ಯ ಶಿಕ್ಷಕ ವೀರೇಗೌಡ, ಗ್ರಾಮದ ಮುಖಂಡರುಗಳಾದ ಸಿ.ಎ.ರಮೇಶ್, ಎಸ್.ಕೋದಂಡಮೂರ್ತಿ, ಎಂ.ಸಿ.ಕೆ.ಮೂರ್ತಿ ಮತ್ತು ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ವೈಕುಂಠ ಏಕಾದಶಿ ಅಂಗವಾಗಿ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳು ನಡೆದವು. ಭಜನಾ ಕಾರ್ಯಕ್ರಮದಲ್ಲಿ ಕಾಡನೂರು ಅವ್ಯಕ್ತಾಶ್ರಮದ ಕೆಂಪೇಗೌಡ, ಬೆಂಗಳೂರಿನ ಸದ್ಗುರು ಭಜನಾ ಮಂಡಲಿ, ಶನೈಶ್ವರಸ್ವಾಮಿ ಭಜನಾ ಮಂಡಲಿ, ಜೈ ಮಾರುತಿ ಭಜನಾ ಮಂಡಲಿ ಮತ್ತು ಕಾಡನೂರು ಚನ್ನಕೇಶವಸ್ವಾಮಿ ಭಜನಾ ಮಂಡಲಿಯ ಕಲಾವಿದವರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

