ದೊಡ್ಡಬಳ್ಳಾಪುರ: ಕೊವಿಡ್ ಸಂದರ್ಭದಲ್ಲಿ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರಿಗೆ ಹಾಗೂ ವಾದ್ಯಗೋಷ್ಟಿ ಕಲಾವಿದರು ತೀವ್ರ ಸಂಕಷ್ಟಕ್ಕೀಡಾಗಿದ್ದರೂ ಸರ್ಕಾರ ಯಾವುದೇ ನೆರವು ನೀಡಲಿಲ್ಲ. ಈ ದಿಸೆಯಲ್ಲಿ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರಿಗೆ ಇಎಸ್ಐ ಸೌಲಭ್ಯ ನೀಡುವುದು, ಹಾಗೂ ವಸತಿ ಯೋಜನೆಗಳಲ್ಲಿ ವಸತಿ ಕಲ್ಪಿಸುವುದು ಸೇರಿದಂತೆ ಸರ್ಕಾರ ಸೌಲಭ್ಯಗಳನ್ನು ನೀಡಬೇಕಿದೆ ಎಂದು ಅಖಿಲ ಕರ್ನಾಟಕ ವಾದ್ಯಗೋಷ್ಟಿ ಕಲಾವಿದರ ಸಂಘದ ರಾಜ್ಯ ಅಧ್ಯಕ್ಷ ಆರ್.ಶಂಕರ್ ಒತ್ತಾಯಿಸಿದರು.
ನಗರದ ಕಾವೇರಿ ಭವನದಲ್ಲಿ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಚೈನಾ ಸೌಂಡ್ ಸಿಸ್ಟಮ್ ಪ್ರಭಾವದಿಂದಾಗಿ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರಿಗೆ ಕೆಲಸ ಕಡಿಮೆ ಆಗುತ್ತಿದ್ದು, ಇದಕ್ಕೆ ಆದ್ಯತೆ ನೀಡಬಾರದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರನ್ನು ಯಾವುದೇ ಸೌಲಭ್ಯ ನೀಡಲು ಪರಿಗಣಿಸುತ್ತಿಲ್ಲ. ಈ ನಿಟ್ಟಿನಲ್ಲಿ ನಾವೇ ಸಂಘಟಿತರಾಗಿ ನಮ್ಮ ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಸಂಘಕ್ಕೆ ಸದಸ್ಯರಾಗುವ ಮೂಲಕ ರಾಜ್ಯ ಸಂಘದಿಂದ ನೀಡಲಾಗುವ 2 ಲಕ್ಷದವರೆಗಿನ ಅಪಘಾತ ವಿಮೆ, ವೈದ್ಯಕೀಯ ವೆಚ್ಚದ ನೆರವುಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗೂ ಶೇ.1ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಜ.18ರಂದು ಪ್ರತಿಭಟನೆ: ವಿವಿಧ ವೃತ್ತಿಗಳಿಗೆ ಅನುಮತಿ ನೀಡಿರುವಂತೆ ಧ್ವನಿವರ್ಧಕ ಮತ್ತು ದೀಪಾಲಂಕಾರ ತಂತ್ರಜ್ಞರಿಗೆ ತಮ್ಮ ವೃತ್ತಿಯನ್ನು ಮಾಡಲು ವಿಪುಲ ಅವಕಾಶ ನೀಡಬೇಕು. ಜಾತ್ರೆ ಉತ್ಸವಗಳಿಗೆ ಅನುಮತಿ ನೀಡಬೇಕು. ಇಎಸ್ಐ, ವಸತಿ ಸೌಲಭ್ಯ ಮೊದಲಾದ ನೆರವು ನೀಡಿ, ಸರ್ಕಾರ ಈ ವೃತ್ತಿಯಲ್ಲಿರುವವರನ್ನು ಪರಿಗಣಿಸುವಂತೆ ಒತ್ತಾಯಿಸಿ ಜ.18 ಮತ್ತು 19ರಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಿರಂತರ 24 ಗಂಟೆಗಳ ಕಾಲ, ಹಾಡು, ಮಿಮಿಕ್ರಿ ಮೊದಲಾಗಿ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಪ್ರತಿಭಟನೆ ಮಾಡಲಾಗುವುದು. ಎಲ್ಲ ಕಲಾವಿದರು ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ಧ್ವನಿವರ್ಧಕ ಮತ್ತು ದೀಪಾಲಂಕಾರ ವೃತ್ತಿಪರರರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಘಟನೆಯ ಮೂಲಕ ಸರ್ಕಾರಕ್ಕೆ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಸಂಘ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಮತ್ತು ದೀಪಾಲಂಕಾರ ಹಿರಿಯ ವೃತ್ತಿ ಪರರನ್ನು ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರದ ಮುಖಂಡರು, ಸಂಘಟನೆಯ ಪದಾಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

