ಮೈಸೂರು: ಕರ್ನಾಟಕ ಪೊಲೀಸ್ ಸೇವೆಗೆ 242 ಮಂದಿ ಹೊಸತಾಗಿ ಸೇರ್ಪಡೆ ಅಗುತ್ತಿರುವುದು ಸಂತಸದ ವಿಚಾರ. ಒಟ್ಟಾರೆ ರಾಜ್ಯ ಪೊಲೀಸ್ ಸೇವೆಯಲ್ಲಿ ಶೇ 20ರಷ್ಟು ಮಹಿಳಾ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರ ಸೇವಾ ದಕ್ಷತೆ ಉತ್ತಮವಾಗಿದೆ. ಹಾಗಾಗಿ ಮಹಿಳೆಯರಿಗೆ ಪೊಲೀಸ್ ಸೇವೆಗೆ ಸೇರಲು ಇನ್ನೂ ಹೆಚ್ಚಿನ ಉತ್ತೇಜನ ಕೊಡಬೇಕಾಗಿದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್ ಹೇಳಿದರು.
ಮೈಸೂರಿನ ಪೊಲೀಸ್ ತರಬೇತಿ ಶಾಲೆಯ 5ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸ್ಟೇಬಲ್, ರೈಲ್ವೇಸ್ ಮತ್ತು ಕೆಎಸ್ಐಎಸ್ಎಫ್ ಪ್ರಶಿಕ್ಷಣಾರ್ಥಿಗಳ ಹಾಗೂ ಮೈಸೂರು ನಗರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 2 ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನವು ಮಂಗಳವಾರ ಸಿ.ಆರ್ ಕವಾಯತು ಮೈದಾನದಲ್ಲಿ ಜರುಗಿತು.
ಇದೇ ವೇಳೆ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ವಿಪುಲ್ ಕುಮಾರ್ ಅವರು ಮಾತನಾಡಿ, ಈಗಷ್ಟೇ ನೀವೆಲ್ಲರೂ ತರಬೇತಿ ಮುಗಿಸಿ ಕಾರ್ಯ ಕ್ಷೇತ್ರಕ್ಕೆ ತೆರಳಿ ಅಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ತರಬೇತಿ ಅವಧಿಯಲ್ಲಿನ ಶಿಕ್ಷಣಕ್ಕೂ ಕರ್ತವ್ಯದ ವೇಳೆಯಲ್ಲಿನ ವಾಸ್ತವ ಸ್ಥಿತಿಗೂ ಸ್ವಲ್ಪ ವ್ಯತ್ಯಾಸ ಇರಬಹುದು. ಅವೆಲ್ಲವನ್ನೂ ಅಧ್ಯಯನದ ವಿಷಯವೆಂದು ಪರಿಗಣಿಸಬೇಕು ಪೊಲೀಸ್ ಸೇವೆಗೆ ತನ್ನದೇ ಆದ ಹಿರಿಮೆಯಿದೆ. ಎಲ್ಲರಿಗೂ ಜನರ ಸೇವೆ ಮಾಡಲು ಅವಕಾಶ ಸಿಗುವುದಿಲ್ಲ. ಆದರೆ ನಮಗೆ ಅಂತಹ ಅವಕಾಶ ದೊರೆತಿರುವುದನ್ನು ಉತ್ತಮ ಅವಕಾಶ ಎಂದು ಭಾವಿಸಬೇಕು ಎಂದು ಹೇಳಿದರು.
ಪ್ರತಿಯೊಬ್ಬರಲ್ಲೂ ನಾಯಕತ್ವ ಗುಣ ಇರುತ್ತದೆ. ಆ ನಾಯಕತ್ವ ಗುಣ ಹೊರಹೊಮ್ಮಬೇಕಾದರೆ ಪೊಲೀಸರಿಗೆ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಉತ್ತಮ ಬಾಂಧವ್ಯದ ಅವಶ್ಯಕತೆ ಇರುತ್ತದೆ. ಪೊಲೀಸ್ ಠಾಣೆಗಳಲ್ಲಿ ಹುದ್ದೆಗಳು ಬೇರೆ ಬೇರೆ ಆಗಿರಬಹುದು. ಒಬ್ಬ ಸಾಮಾನ್ಯ ಪೊಲೀಸರಲ್ಲಿ ಇರಬಹುದಾದ ನಾಯಕತ್ವ ಗುಣವನ್ನು ಕಡೆಗಣಿಸಲಾಗದು. ಪೊಲೀಸ್ ಸೇವೆಗೆ ಸೇರಿದ ಮೇಲೆ ನಾವು ಯಾವ ಹುದ್ದೆಯಲ್ಲಿ ಇದ್ದೇವೆ ಎಂಬುದನ್ನು ಮರೆತು ಸಮಸ್ಯೆ ಹೊತ್ತು ಬರುವ ಜನರಿಗೆ ಸ್ಪಂದಿಸಬೇಕು. ಜನರ ಸಮಸ್ಯಗಳನ್ನು ಪರಿಹರಿಸುವುದೇ ನಮ್ಮ ಗುರಿಯಾಗಿರಬೇಕು. ಜನರ ಸಮಸ್ಯೆಗಳ ವಿಚಾರದಲ್ಲಿ ಕೇವಲ ಪ್ರತಿಕ್ರಿಯಾತ್ಮಕವಾಗಿ ಕೆಲಸ ಮಾಡಿದರೆ ಸಾಲದು. ಪ್ರಗತಿಪರವಾಗಿ ಯೋಚನೆ ಮಾಡಬೇಕು. ಸಮಸ್ಯೆ ಎದುರು ನೋಡುವ ಬದಲು ಸಮಸ್ಯೆ ಬಾರದಂತೆ ತಡೆಯುವ ಜಾಣತನ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆ ಎರಡು ದಶಕಗಳ ಹಿಂದೆ ಇದ್ದಂತೆ ಈಗಿಲ್ಲ. ಸಾಕಷ್ಟು ಸುಧಾರಣೆಗಳು ಆಗಿವೆ. ಪೊಲೀಸ್ ಸೇವಾ ಮನೋಭಾವ ಇರಲೇಬೇಕು. ಹಾಗಿದ್ದರೆ ಪೊಲೀಸ್ ಸೇವೆಗೆ ಅರ್ಥ ಬರುತ್ತದೆ. ಕಳೆದ ವರ್ಷ ಕೊರೋನಾ ಮಹಾಮಾರಿ ದೇಶದಲ್ಲಿ ಆವರಿಸಿದ ಸಂದರ್ಭ ಪೊಲೀಸರು ತೋರಿದ ಕಾರ್ಯ ವೈಖರಿ, ಮಾನವೀಯ ಪ್ರದರ್ಶನವು ಇಲಾಖೆಯ ವರ್ಚಸ್ಸನ್ನೇ ಬದಲು ಮಾಡಿದೆ. ಜನರ ದೃಷ್ಟಿಯಲ್ಲಿ ನಾವು ಮಹಾಸೇವಕರು ಎಂಬ ಭಾವನೆ ಬಂದಿದೆ. ಹಾಗಾಗಿ ಇಂದು ತರಬೇತಿ ಪಡೆದು ಕರ್ತವ್ಯಕ್ಕೆ ಹೊರಡುತ್ತಿರುವ 242 ಮಂದಿ ಮಹಿಳಾ ಪೊಲೀಸರು ಪೊಲೀಸ್ ಇಲಾಖೆಯ ಆಸ್ತಿಯಾಗಿ ಬದಲಾಗಬೇಕು. ಇಲ್ಲಿ ಕಲಿತದ್ದೂ ಸೇರಿ ನಿಮ್ಮ ಸೇವಾ ಗುಣಗಳನ್ನು ಇನ್ನಷ್ಟು ಪರಿಣಾಮಕಾರಿ ರೂಢಿಸಿಕೊಂಡು ಮುನ್ನಡೆಯುವಂತೆ ಆಶಿಸಿದರು.
ತರಬೇತಿ ಮುಗಿಸಿ ಪೊಲೀಸ್ ಸೇವೆಯ ಮುಖ್ಯ ವಾಹಿನಿಗೆ ಸಮರ್ಪಣೆ ಮಾಡಿಕೊಳ್ಳುತ್ತಿರುವ ನಿಮಗೆಲ್ಲರಿಗೂ ನನ್ನ ಶುಭಕಾಮನೆಗಳು ಎಂದು ಹುರಿದುಂಬಿಸಿದರು.
ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಶಿವರಾಜು ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಿರ್ಗಮನ ಪಥ ಸಂಚಲನದಲ್ಲಿ ಶಿಸ್ತಿನ ಹೆಜ್ಜೆ ಹಾಕುವ ಮೂಲಕ ಪ್ರಶಿಕ್ಷಣಾರ್ಥಿಗಳು ನಡೆಸಿದ ಆಕರ್ಷಕ ಫಥ ಸಂಚಲನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ 2ನೇ ತಂಡದ ಮಹಿಳಾ ಪೊಲೀಸ್ ಪ್ರಕ್ಷಣಾರ್ಥಿಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರಿನ ಎಂ. ಅನಿತಲಕ್ಷ್ಮಿ ಅವರಿಗೆ ಸರ್ವೋತ್ತಮ ಪ್ರಶಸ್ತಿಯನ್ನು ನೀಡಲಾಯಿತು.
ಬಹುಮಾನ ಪಡೆದವರು. ಒಳಾಂಗಣ ಪ್ರಶಸ್ತಿ: ಸಿ.ಆರ್. ಆಶಾ (ಪ್ರಥಮ), ಎಂ. ಅನಿತ ಲಕ್ಷ್ಮಿ (ದ್ವಿತೀಯ), ಬಿ.ಎಂ. ಪುಷ್ಪಾವತಿ (ತೃತೀಯ). ಹೊರಾಂಗಣ ಪ್ರಶಸ್ತಿ : ಸಿ.ಆರ್. ಮಮತ (ಪ್ರಥಮ), ಟಿ.ಎಸ್.ಕುಸುಮ (ದ್ವೀತಿಯ), ಪಿ. ಚೈತ್ರ (ತೃತೀಯ). ರೈಫಲ್ ಶೂಟಿಂಗ್ ಪ್ರಶಸ್ತಿ: ಸುಷ್ಮಾ ಪಟಗಾರ್ (ಪ್ರಥಮ), ಕವಿತ ಪೂಜಾರಿ (ದ್ವಿತೀಯ), ಕೆ.ಟಿ. ಅಕ್ಷತ (ತೃತೀಯ),
ಈ ವೇಳೆ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣೀದೇವಿ ಮಾಲಗತ್ತಿ, ಕೆಎಸ್ಆರ್ಪಿ ಕಮಾಡೆಂಟ್ ಜನಾರ್ದನ್, ಮೌಂಟೇನ್ ಕಮಾಡೆಂಟ್ ನಾಗರಾಜು ಇತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

