ದೊಡ್ಡಬಳ್ಳಾಪುರ: ಕುವೆಂಪು 20ನೇ ಶತಮಾನದ ದೈತ್ಯ ಪ್ರತಿಭೆ. ಬೇಂದ್ರೆ ಕುವೆಂಪುರವರನ್ನು ಯುಗದ ಕವಿ, ಜಗದ ಕವಿ ಎಂದು ಕರೆದಿದ್ದಾರೆ. ಜಿ.ಎಸ್.ಶಿವರುದ್ರಪ್ಪ ಕ್ರಾಂತಿಕಾರಿಕವಿ ಎಂದು ಕರೆದಿರುವುದು ಔಚಿತ್ಯ ಪೂರ್ಣವಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಚಂದ್ರಪ್ಪ ತಿಳಿಸಿದರು.
ತಾಲೂಕಿನ ಕೊನಘಟ್ಟ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ರನ್ನನಂತೆ ಶಕ್ತಿ ಕವಿ. ಹರಿಹರನಂತೆ ಪ್ರಯೋಗಶೀಲ ಕವಿ. ಅವರ ಸಾಹಿತ್ಯದಲ್ಲಿ ಕಾರ್ಲ್ಮಾಕ್ರ್ಸ್ ಸಮತಾವಾದವಿದೆ. ಗಾಂಧೀಜಿಯ ಅಹಿಂಸಾ ತತ್ವವಿದೆ. ಅರವಿಂದರ ಪೂರ್ಣ ದೃಷ್ಟಿ ಇದೆ. ಕುವೆಂಪು ಸಮಾಜದಲ್ಲಿನ ಸಮಕಾಲೀನ ಸತ್ಯಗಳಿಗೆ ಸಾಹಿತ್ಯದ ಮೂಲಕ ನ್ಯಾಯ ಒದಗಿಸಿದ್ದಾರೆ. ಯಾವ ಕವಿ ಭೂತ ವರ್ತಮಾನಗಳ ಆಧಾರದ ಮೇಲೆ ಭವಿಷ್ಯತ್ತನ್ನು ರೂಪಿಸುತ್ತಾನೋ ಆತನೆ ದಾರ್ಶನಿಕ ಕವಿ. ಕುವೆಂಪು ಸಾಹಿತ್ಯದಲ್ಲಿ ಪ್ರಕೃತಿಯ ಸೊಬಗಿನ ಜೊತೆಗೆ ಸಮಾಜದ ಏರು-ಪೇರುಗಳು ಪ್ರತಿಬಿಂಬಿತವಾಗಿ ವಿದ್ಯಾರ್ಥಿಗಳು ಕುವೆಂಪು ಸಾರಿದ ವಿಶ್ವಮಾನವ ಪ್ರಜ್ಞೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದೆಂದರು.
ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿ, ವಿವೇಕಾನಂದರು ಬಾಲ್ಯ ಜೀವನದಿಂದಲೇ ಅತ್ಯಂತ ಸೂಕ್ಷ್ಮಮತಿಯಾಗಿದ್ದವರು. ದರಿದ್ರದೇವೋಭವ ಮುಖ್ಯವೆಂದು ಸಾರಿದವರು. ಹಿಂದೂ ಧರ್ಮದಲ್ಲಿದ್ದ ಮೂಢಾಚಾರಗಳನ್ನು ಖಂಡಿಸಿದವರು. ಮನುಷ್ಯನಿಗೆ ಕಾಯಿಲೆಗಳು ಬರುವಂತೆ ಸಮಾಜಕ್ಕೂ ಜಾಡ್ಯಗಳು ಬಡಿಯುತ್ತವೆ ಅವೇ ಮೂಢನಂಬಿಕೆಗಳು, ಅವು ಮೈಮೇಲಿನ ಹುಣ್ಣುಗಳಂತೆ ಇರುತ್ತವೆ. ಅವುಗಳನ್ನು ಕತ್ತರಿಸಿ ಹಾಕಬೇಕು. ನಾನು ಪವಿತ್ರ ನೀ ನನ್ನ ಮುಟ್ಟಬೇಡ ಎಂಬ ಅಸ್ಪೃಶ್ಯತೆಯು ಬೇಡ. ಎಂಬ ಜಾತ್ಯಾತೀತ ಮನೋಭಾವದವರಾಗಿದ್ದವರು. ಸರ್ವಧರ್ಮಸಮನ್ವಯಿ. ಭಾರತದ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಸಾರಿದವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಜಿ.ದಯಾನಂದ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ಮಾತುಗಳನ್ನು ಕೇಳುವುದಷ್ಟೇ ಅಲ್ಲ. ತಾವು ಶಿಸ್ತು ಮತ್ತು ಶ್ರದ್ಧೆಯಿಂದ ಓದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಗಿಡಕ್ಕೆ ಪೋಷಕಾಂಶಗಳನ್ನು ಕೊಟ್ಟು ಬೆಳೆಸುವಂತೆ ಶೈಕ್ಷಣಿಕ ಪೋಷಕಾಂಶಗಳನ್ನು ಬಳಸಿಕೊಂಡು ಉತ್ತಮ ಪ್ರೆಜೆಗಳಾಗಿ ಬೆಳೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

