
ದೊಡ್ಡಬಳ್ಳಾಪುರ: ನಗರದ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪೊಲೀಸ್ ಪೆರೇಡ್ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳ ಖಾಸಗಿ ದ್ವಿಚಕ್ರ ವಾಹನಗಳ ದಾಖಲಾತಿಗಳನ್ನು ಡಿವೈಎಸ್ಪಿ ಟಿ.ರಂಗಪ್ಪ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಸಾರ್ವಜನಿಕರ ವಾಹನಗಳ ತಪಾಸಣೆ ನಡೆಸುವ ಸಿಬ್ಬಂದಿಗಳು ಬಳಸುವ ಖಾಸಗಿ ವಾಹನಗಳ ಎಲ್ಲಾ ದಾಖಲಾತಿಗಳು ಸರಿಯಾಗಿರಬೇಕು. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದಲ್ಲಿನ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಬಳಸುತ್ತಿರುವ ವಾಹನಗಳ ದಾಖಲಾತಿ, ಚಾಲನ ಪರವಾನಿಗಿ, ವಾಹನದ ವಿಮೆ ಮತ್ತಿತರೆ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ದಾಖಲಾತಿಗಳು ಸರಿ ಇಲ್ಲದ ಸಿಬ್ಬಂದಿಗೆ 15 ದಿನಗಳ ಕಾಲ ಗಡುವು ನೀಡಲಾಗಿದೆ ಎಂದರು.
ಪೊಲೀಸರು ಸೇರಿದಂತೆ ಎಲ್ಲರ ವಾಹನಗಳು ಅಪಘಾತಕ್ಕೆ ಒಳಗಾಗುವುದು ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗಾಯಗೊಂಡಾಗ ಪರಿಹಾರ ಪಡೆಯಲು ಅಥವಾ ತಮ್ಮ ಕುಟುಂಬದವರು ಪರಿಹಾರ ಪಡೆಯಲು ದಾಖಲಾತಿಗಳು ಇಲ್ಲದೆ ನ್ಯಾಯಾಲಯಕ್ಕೆ ಅಲೆದಾಡುವುದನ್ನು ನೋಡಿದ್ದೇವೆ. ಮೋಟಾರು ವಾಹನದ ಎಲ್ಲಾ ಕಾನೂನುಗಳನ್ನು ತಿಳಿದವರೇ ತಪ್ಪುಮಾಡಿದಾಗ ನ್ಯಾಯಾಲಯದಲ್ಲು ಸಹ ನ್ಯಾಯಪಡೆಯುವುದು ಕಷ್ಟವಾಗಲಿದೆ ಎಂದರು.
1992ರ ಪೊಲೀಸ್ ಕಾನೂನಿನ ಅಡಿಯಲ್ಲಿ ಪೆಟ್ಟಿ ಕೇಸ್ಗಳನ್ನು ದಾಖಲು ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ರೀತಿಯಲ್ಲಿ ದೂರುಗಳನ್ನು ದಾಖಲಿಸಿದರೆ ದೊಡ್ಡ ಮಟ್ಟದ ಅಪರಾಧಗಳನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರು ನೆಮ್ಮದಿಯಿಂದ ದಿನ ನಿತ್ಯದ ಬದುಕನ್ನು ನಡೆಸಲು ಸಹಕಾರಿಯಾಗಲಿದೆ. ಪೊಲೀಸ್ ಕೆಲಸದ ಕಾರ್ಯವೈಖರಿ ಬದಲಾಗಬೇಕಿದೆ. ಜನ ಸ್ನೇಹಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಾರ್ವಜನಿಕ ವಲಯದಲ್ಲಿ ಪೊಲೀಸರ ಬಗ್ಗೆ ಗೌರವ ಮೂಡಲು ಸಾಧ್ಯ. ಆನ್ಲೈನ್ ಗೇಮ್ಗಳು ಸೇರಿದಂತೆ ಮಟ್ಕ, ಜೂಜು, ಗಾಂಜಾ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳಿಗು ದೊಡ್ಡಬಳ್ಳಾಪುರ ಉಪವಿಭಾಗದಲ್ಲಿ ಅವಕಾಶ ಇಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಬೀಟ್ ಪೊಲೀಸ್ ಸಿಬ್ಬಂದಿ ಮೇಲಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸುವ ಮೂಲಕ ಇಂತಹ ಕೃತ್ಯಗಳಲ್ಲಿ ತೊಡಗಿರುವವರ ಹಾಗೂ ಇಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವವ ವಿರುದ್ಧ ದೂರು ದಾಖಲಿಸಿ ರೌಢಿ ಶೀಟರ್ ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ಎಲ್ಲಾ ಠಾಣೆಗಳ ಸಬ್ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

