
ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಮರಾಠಿ ಅಭಿವೃದ್ದಿ ಪ್ರಾಧಿಕಾರ ರಚಿಸಿರುವುದನ್ನು ಹಿಂಪಡೆಯಬೇಕು ಹಾಗೂ ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಜ.30ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ರೂಪಿಸಲಾಗಿದ್ದು, ಕನ್ನಡಕ್ಕಾಗಿ ಜೈಲಿನಲ್ಲಿರಲೂ ಸಿದ್ದ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ರಾಜಕೀಯ ಮುಖಂಡರು ಮರಾಠಿಗರ ಹಾಗೂ ಶಿವಸೇನೆಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಎಂ.ಇ.ಎಸ್, ಶಿವಸೇನೆ ಬೆಳಗಾವಿಯಿಂದ ರಾಜ್ಯದಲ್ಲಿ ಬೇರೂರಲು ಬಿಡಬಾರದು. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಮರಾಠಿ ಅಭಿವೃದ್ದಿ ಪ್ರಾಕಾರ ರಚಿಸಿರುವುದು ಖಂಡನೀಯವಾಗಿದ್ದು, ಈ ವಿರುದ್ದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು.
ಕನ್ನಡಿಗರ ಆಡಳಿತ ಬರಬೇಕು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಎಲ್ಲ ಪಕ್ಷಗಳು ರಾಜ್ಯವನ್ನು ಲೂಟಿ ಮಾಡುವಲ್ಲಿ ತೊಡಗುತ್ತಾ ಕನ್ನಡಿಗರನ್ನು ನಿರ್ಲಕ್ಷಿಸುತ್ತಿವೆ. ಕನ್ನಡಿಗರ ಶಕ್ತಿ ಉದಯವಾಗುವ ಮೂಲಕ ಹೊಸ ಶಖೆ ಆರಂಭಿಸಬೇಕಿದೆ. ರಾಜ್ಯದ ಚುನಾವಣೆಗಳಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ಸ್ಪರ್ಧೆ ಮಾಡಬೇಕು. ವಿದ್ಯಾರ್ಥಿಗಳು ಸಹ ರಾಜಕೀಯಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳ ಮುಖಂಡರನ್ನು ಚುನಾವಣೆಗೆ ಸ್ರ್ಪಸಲು ಮನವಿ ಮಾಡಿಕೊಂಡಿದ್ದೇನೆ. ರಾಜ್ಯದ ಜನತೆ ಕನ್ನಡಪರ ಕಳಕಳಿಯ ವ್ಯಕ್ತಿಗಳನ್ನು ಗೆಲ್ಲಿಸಬೇಕಿದೆ. ಅಧಿಕಾರಕ್ಕೆ ಬಂದರೆ ಕನ್ನಡಕ್ಕೆ ಕಿರೀಟ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಹಿಂದಿ ಹೇರಿಕೆ ಸಹಿಸುವುದಿಲ್ಲ ಎಂದರು.
ನಗರಸಭೆಯಲ್ಲಿ ಕನ್ನಡ ಧ್ವಜ ಹಾರಬೇಕು : ದೊಡ್ಡಬಳ್ಳಾಪುರದಲ್ಲಿ ಕನ್ನಡಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಟಿ.ಎನ್.ಪ್ರಭುದೇವ್ ಮತ್ತು ಸಂಜೀವ್ ನಾಯಕ್ ಈ ಹಿಂದೆ ದೂರವಾಗಿದ್ದರು. ಇವರನ್ನು ಒಂದು ಗೂಡಿಸಲು ನಾನು ಹಲವಾರು ಪ್ರಯತ್ನ ಮಾಡಿದ್ದೇನೆ. ಇಂದು ಇಬ್ಬರೂ ಒಂದೇ ವೇದಿಕೆಯಲ್ಲಿ ಒಂದಾಗಿರುವುದು ಸಂತಸ ತಂದಿದ್ದು, ಈ ಬಾರಿ ನಗರಸಭೆಯಲ್ಲಿ ಜೋಡೆತ್ತುಗಳಂತೆ ಕನ್ನಡ ಧ್ವಜ ಹಾರಿಸಬೇಕು ಎಂದರು.
ಗಣಿ ಲೂಟಿಕಾರರಿಗೆ ಸಿಎಂ ಬೆಂಬಲ: ಶಿವಮೊಗ್ಗದ ಗಣಿಯಲ್ಲಿ ನಡೆದ ಸ್ಪೋಟ ಕುರಿತಂತೆ ಅಕ್ರಮ ಸಕ್ರಮ ಮಡುವಂತೆ ಮುಖ್ಯಮಂತ್ರಿಗಳು ಬಾಲಿಶ ಹೇಳಿಕೆ ನೀಡಿರುವುದು ಶೋಭೆಯಲ್ಲಿ. ರಾಜ್ಯದಲ್ಲಿ ಹಿಂದೆ ಗಣಿ ಧಣಿಗಳಿಂದಲೇ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದರು.ಗಣಿ ಸ್ಪೋಟದಲ್ಲಿ ಮೃತಪಟ್ಟವರರಿಗೆ 5 ಲಕ್ಷ ರೂ ಸಾಲದು. ಹೆಚ್ಚಿನ ಪರಿಹಾರ ನೀಡಬೇಕಿದೆ ಎಂದರು.
ರೈತರ ಹೋರಾಟಕ್ಕೆ ಬೆಂಬಲ: ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ರಾಜ್ಯದಲ್ಲಿ ರೈತರ, ಕನ್ನಡಪರ ಹೋರಾಟಗಾರರ ಹೋರಾಟಗಳನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದರು.
ರಾಜ್ಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಅಧ್ಯಕ್ಷ ಸಾ.ರ.ಗೋವಿಂದು ಮಾತನಾಡಿ, ಇತ್ತೀಚೆಗೆ ಮಹಾರಾಷ್ಟ ಮುಖ್ಯಮಂತ್ರಿ ಉದ್ಪವ್ ಠಾಕ್ರೆ ನೀಡಿದ್ದ ಹೇಳಿಕೆಗೆ ವಿರೋಧಿಸುವ ನಮ್ಮ ರಾಜಕಾರಣಿಗಳು, ಮರಾಠ ಅಭಿವೃದ್ದಿ ನಿಗಮ ಹಾಗೂ ಎಂ.ಇ.ಎಸ್ ನಿಷೇಧಕ್ಕೆ ಏಕೆ ಒತ್ತಾಯಿಸುವುದಿಲ್ಲ. ಹಿಂದಿ ರಾಷ್ಟ್ರ ಭಾಷೆ, ಅದರ ನಿರ್ಲಕ್ಷ್ಯ ಬೇಡ ಎಂದು ಹೇಳಿರುವ ಸಾಹಿತಿ ದೊಡ್ಡರಂಗೇಗೌಡ ಅವರ ಹೇಳಿಕೆ ಖಂಡನೀಯವಾಗಿದ್ದು, ಈ ಹೇಳಿಕಗೆ ಅವರು ಹಿಂಪಡೆಯಬೇಕು ಇಲ್ಲವೇ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಬಿಡಬೇಕು. ರಾಜ್ಯ ಸರ್ಕಾರ ಹೋರಾಟಗಳನ್ನು ಹತ್ತಿಕ್ಕಿ ಹಿಟ್ಲರ್ ಸಂಸ್ಕೃತಿ ಮೆರೆಯುತ್ತಿದ್ದು, ಹೋರಾಟಗಾರರು ಇದಕ್ಕೆ ಹೆದರಬಾರದು ಎಂದರು.
ಸಭೆಯಲ್ಲಿ ಕನ್ನಡ ಪರ ಹೋರಾಟಗಾರರಾದ ಗಿರೀಶ್ ಗೌಡ, ಅಮೀತ್ ಚಂದ್ರು, ಟಿ.ಎನ್.ಪ್ರಭುದೇವ್, ಸಂಜೀವ್ ನಾಯಕ್, ಸು.ನರಸಿಂಹಮೂರ್ತಿ, ಡಿ.ಪಿ.ಆಂಜನೇಯ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

