
ದೊಡ್ಡಬಳ್ಳಾಪುರ: ಪ್ರತಿನಿತ್ಯ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ದ ಪಿವಿಸಿ ಸ್ವಾಭಿಮಾನ ಸಂಘಟನೆಯ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು. (ವಿಡಿಯೋ ನೋಡಿ)
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಮುನಿಆಂಜನಪ್ಪ, ಕಳೆದ ಏಳು ವರ್ಷಗಳಿಂದಲೂ ಕೇಂದ್ರದಲ್ಲಿ ಆಡಳಿತದ ನಡೆಸುತ್ತಿರುವ ಎನ್.ಡಿ.ಎ. ಸರ್ಕಾರ ಕೈಗೊಂಡ ನೋಟು ಅಮಾನೀಕರಣದ ನಂತರ ಬಡವರ ಬದುಕು ಬೀದಿಪಾಲಾದದ್ದು ಒಂದೆಡೆಯಾದರೆ, ಮಧ್ಯಮವರ್ಗದ ಜನತೆಯ ಪಾಡು ಹೇಳತೀರದಾಗಿದೆ. ಜನತೆಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ವೇಳೆಯಲ್ಲಿಯೇ ಕೋವಿಡ್ 19 ಕರೊನ ವೈರಸ್ ಮಾರಿಯಿಂದ ನಷ್ಟ ಅಷ್ಟಿಷ್ಟಲ್ಲ. ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಮತ್ತು ನಿರುದ್ಯೋಗಿಗಳ ಪಾಡು ಹಾಗೂ ವಲಸೆ ಕಾರ್ಮಿಕರ ಬದುಕು ವರ್ಣಿಸಲು ಅಸಾಧ್ಯವಾಗಿದೆ. ಸುಳ್ಳು ಹೇಳಿ ಮತ ಪಡೆದವರು ಅಧಿಕಾರಕ್ಕೆ ಬಂದ ನಂತರ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ವೈಫಲ್ಯತೆ ಕಂಡಿದ್ದಾರೆ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿ ಯುವ ಜನತೆಗೆ ಕೇಂದ್ರ ಸರ್ಕಾರದ ಮೇಲೆ ಯಾವುದೇ ವಿಶ್ವಾಸವಿಲ್ಲದಿರುವುದು ಸಾಬೀತುಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಹನುಮಣ್ಣ ಗೂಳ್ಯ ಮಾತನಾಡಿ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪ್ರತಿನಿತ್ಯವೂ ದೇಶದಾದ್ಯಂತ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆ ಮಾಡಿ ಬಡ ಮಧ್ಯಮವರ್ಗದವರನ್ನು ಜೀವ ಹಿಂಡುತ್ತಿದೆ. ನೂರಾರು ಕೋಟಿ ಜನಸಂಖ್ಯೆ ಇರುವ ಬಡವರ ಹಿತ ಕಾಪಾಡದೆ ಕೇಂದ್ರ ಸರ್ಕಾರ ಮೌನ ತಾಳಿರುವ ಕಾರಣದಿಂದ ತೈಲ ಕಂಪನಿಗಳು ನಿತ್ಯವೂ ಸುಲಿಗೆ ಕಾರ್ಯದಲ್ಲಿ ನಿರತವಾಗಿವೆ. ಕಣ್ಣು,ಬಾಯಿ,ಕಿವಿ ಮುಚ್ಚಿಕೊಂಡಿರುವ ಕೇಂದ್ರ ಸರ್ಕಾರ ಬಡವರ ಜೇಬಿಗೆ ಕೈ ಹಾಕಿ ಹಗಲು ದರೋಡೆಯಲ್ಲಿ ಮಗ್ನರಾಗಿರುವುದು ಸುಳ್ಳೇನಲ್ಲ.
ಸ್ಥಳೀಯ ಮಾರಾಟ, ತೆರಿಗೆ ,ವ್ಯಾಟ್ ಆಧಾರದ ಮೇರೆಗೆ ರಾಜ್ಯ ಸರ್ಕಾರಗಳು ಸಹ ಬಡವರ ಹಿತರಕ್ಷಣೆಗೆ ಮುಂದಾಗದೆ ಜನವಿರೋಧಿ ಧೋರಣೆ ತಾಳಿವೆ ರಾಜ್ಯ ಅಲ್ಲದೆ ದೇಶದಾದ್ಯಂತ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದರೂ ಸಹ ಪರಿಗಣಿಸದೆ ಕ್ಷುಲ್ಲಕ ರಾಜಕೀಯದ ಮಧ್ಯೆ ಜನರ ಜೀವನದ ಜೊತೆ ಚೆಲ್ಲಾಟವಾಡುವ ಕಾರ್ಯತಂತ್ರವನ್ನು ಮುಂದುವರಿಸುತ್ತಿರುವುದರಿಂದ ಜನತೆಯ ಜೀವನದ ಮೇಲೆ ಕಾರ್ಮೋಡ ಕವಿಯುತ್ತಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಕರೊನಾ ವೈರಸ್ ಸಂಕಷ್ಟದ ಮಧ್ಯೆ ನಲುಗಿಹೋಗಿರುವ ಆರ್ಥಿಕತೆಯಿಲ್ಲದೆ ಕಂಗಾಲಾಗಿರುವ ಜನತೆ. ಪ್ರತಿನಿತ್ಯ ತೈಲಬೆಲೆ ಏರಿಕೆ ಮಾಡುತ್ತಿರುವುದರಿಂದ ನಾಡಿನ ಜನರು ಕೇಂದ್ರ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ಮತ್ತು ಅಸಮರ್ಪಕ ಆಡಳಿತ ವಿರುದ್ಧ ಜನತೆ ಸಿಡಿದೇಳುವ ಮುಂಚೆ ತೈಲ ಬೆಲೆ ಏರಿಕೆಯನ್ನು ತಕ್ಷಣದಿಂದಲೇ ತಡೆಗಟ್ಟುವುದು ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದರು.
ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು, ಅರುಳ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಾಕೋಳು ಚನ್ನಮರಿಯಪ್ಪ, ದೊಡ್ಡಬಳ್ಳಾಪುರ ಶಾಖ ಅಧ್ಯಕ್ಷ ಪುನೀತ್ ಕುಮಾರ್, ಉಪಾಧ್ಯಕ್ಷ ವಡ್ಡರಹಳ್ಳಿ ರಾಜಶೇಖರ್ ಪ್ರಧಾನ ಕಾರ್ಯದರ್ಶಿ ಮುನಿರಾಜ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರತ್ನಮ್ಮ, ಯಲಹಂಕ ತಾಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಮುಖಂಡರಾದ ವಸಂತಮ್ಮ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

