ನವದೆಹಲಿ: ದೇಶ ಸೇವೆಯ ವೇಳೆ ತಮ್ಮ ಜೀವ ಬಲಿದಾನ ಮಾಡಿದರೆ ಅಗ್ನಿವೀರರಿಗೆ 1 ಕೋಟಿ ರೂ. ಪರಿಹಾರ ಸಿಗಲಿದೆ. ಅಲ್ಲದೆ ಭವಿಷ್ಯದಲ್ಲಿ ಇದರ ಸಂಖ್ಯೆಯೂ ರೂ.1.25 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ರಕ್ಷಣಾ ಸಚಿವಾಲಯದ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ತಿಳಿಸಿದ್ದಾರೆ.

ಈ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ, ಜುಲೈ 24 ರಂದು ಪರೀಕ್ಷೆ ನಡೆಯಲಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಅಗ್ನಿವೀರರ ಮೊದಲ ಬ್ಯಾಚ್ ನೇಮಕವಾಗಲಿದೆ. ಇದರಲ್ಲಿ 25,000 ಯುವಕರನ್ನು ಅಯ್ಕೆ ಮಾಡಲಾಗುವುದು. 2023ರ ಫೆಬ್ರವರಿಯಲ್ಲಿ 2ನೇ ಬ್ಯಾಚ್ ನೇಮಕವಾಗಲಿದ್ದು ಇದರಲ್ಲಿ 40,000 ಜನರನ್ನು ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ, ಅಗ್ನಿವೀರರಿಗೆ ಘೋಷಣೆ ಮಾಡುತ್ತಿರುವ ಮೀಸಲಾತಿಗಳನ್ನು ಈ ಮೊದಲೇ ಯೋಜಿಸಲಾಗಿತ್ತು, ಅಗ್ನಿಪಥ್ ಆಕಾಂಕ್ಷಿಗಳು ತಾವು ಹಿಂಸಾಚಾರದಲ್ಲಿ ಭಾಗವಹಿಸಿಲ್ಲ ಎಂದು ಲಿಖಿತ ಪ್ರತಿಜ್ಞೆ ನೀಡಬೇಕು ಎಂದು ಹೇಳಿದ್ದಾರೆ.
ಇಂದು ಅತಿಹೆಚ್ಚು ಸೈನಿಕರು 30ರ ವಯೋಮಾನದಲ್ಲಿದ್ದಾರೆ. ಆದರೆ ಸೇನೆಯ ಮೂರೂ ವಿಭಾಗಗಳಿಂದ ಪ್ರತಿ ವರ್ಷವೂ ಸುಮಾರು 17,600 ಮಂದಿ ಅವಧಿಗೆ ಮುನ್ನವೇ ನಿವೃತ್ತಿ ಪಡೆಯುತ್ತಿದ್ದಾರೆ. ನಿವೃತ್ತಿ ಬಳಿಕ ಏನು ಮಾಡುತ್ತೀರಿ? ಎಂದು ಯಾರೂ ಕೂಡ ಅವರನ್ನು ಕೇಳಲು ಹೋಗಿಲ್ಲ. ಅಗ್ನಿವೀರರು ಕೂಡ ಹಾಲಿ ಸೇವೆಯಲ್ಲಿರುವ ಸಾಮಾನ್ಯ ಸೈನಿಕರಂತೆಯೇ ಸಿಯಾಚಿನ್ ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಅದೇ ಭತ್ಯೆ ಪಡೆಯಲಿದ್ದಾರೆ. ಸೇವಾ ಪರಿಸ್ಥಿತಿಗಳಲ್ಲಿ ಅವರ ನಡುವೆ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ನೇಮಕಾತಿ ಪ್ರಮಾಣದಲ್ಲಿ ಹೆಚ್ಚಳ: 4-5 ವರ್ಷಗಳಲ್ಲಿ ತಮ್ಮ ಸೈನಿಕರ ನೇಮಕಾತಿ 50 – 60,000 ಆಗಲಿದೆ. ಕ್ರಮೇಣ 90,000 ದಿಂದ 1 ಲಕ್ಷಕ್ಕೆ ಏರಿಕೆಯಾಗಲಿದೆ. ಯೋಜನೆಯನ್ನು ವಿಶ್ಲೇಷಣೆಗೆ ಒಳಪಡಿಸಲು ಸಣ್ಣ ಪ್ರಮಾಣದಲ್ಲಿ ಆರಂಭ ಮಾಡುತ್ತಿದೆ ಎಂದು ವಿವರಿಸಿದ್ದಾರೆ.
ಅಗ್ನಿಪಥ್ ಯೋಜನೆ ವಿರುದ್ಧ ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಮಧ್ಯೆ, ಯೋಜನೆ ಕುರಿತು ಮನವರಿಕೆ ಮಾಡಿಕೊಡಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ. ಕೆಲವು ವಿನಾಯಿತಿ ಮತ್ತು ಸವಲತ್ತುಗಳನ್ನು ಘೋಷಿಸಿದ್ದ ಗೃಹ ಸಚಿವಾಲಯ, ಪ್ರತಿಭಟನಾಕಾರರ ಆಕ್ರೋಶವನ್ನು ತಣ್ಣಗಾಗಿಸಲು ಪ್ರಯತ್ನಿಸಿದೆ. ಆದರೆ ಪ್ರತಿಭಟನೆಯ ಕಿಚ್ಚು ಕಡಿಮೆಯಾಗಿಲ್ಲ ಈ ಹಿನ್ನೆಲೆಯಲ್ಲಿ ಯೋಜನೆಯಲ್ಲಿರುವ ವಿವಿಧ ಸೌಲಭ್ಯ ಹಾಗೂ ಮೀಸಲಾತಿ ಬಗೆಗೆ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….
