ಬೆಂಗಳೂರು: ಕನ್ನಡಿಗರ ಅಸ್ಮಿತೆಯ ಪ್ರತೀಕವಾದ ಕನ್ನಡ ಸಾಹಿತ್ಯ ಪರಿಷತ್ತಿನ ಪುರಾತನ ಕಟ್ಟಡಗಳು ಈಗ ಹೊಸ ರೂಪದೊಂದಿಗೆ ನವೀಕೃತಗೊಂಡಿವೆ.
ಸುಸಜ್ಜಿತವಾಗಿ ರೂಪಗೊಂಡಿರುವ ಪರಿಷತ್ತಿನ ಕೃಷ್ಣರಾಜ ಪರಿಷತ್ತಿನ ಮಂದಿರ ಲೋಕಾರ್ಪಣೆಗೆ ಸಿದ್ಧವಾಗಿದೆ. ಆಗಸ್ಟ್ 26 ಶುಕ್ರವಾರ ಸಂಜೆ 04 ಗಂಟೆಗೆ ʻಕೃಷ್ಣರಾಜ ಪರಿಷತ್ತಿನ ಮಂದಿರʼ ಹಾಗೂ ʻಆವರಣದ ನವೀಕೃತ ಕಟ್ಟಡವನ್ನುʼ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಆದಾಗ ಅದರ ಕಚೇರಿ ಪ್ರಾರಂಭವಾದದ್ದು ಬೆಂಗಳೂರಿನ ಚಾಮರಾಜ ಪೇಟೆಯ 4ನೇಯ ಮುಖ್ಯರಸ್ತೆಯ ಬಾಡಿಗೆ ಮನೆಯೊಂದರಲ್ಲಿ. ನಂತರ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪರಿಷತ್ತಿಗೆ ಸ್ವಂತ ನಿವೇಶನದ ಕನಸು ಕಂಡವರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಕರ್ಪೂರ ಶ್ರೀನಿವಾಸರಾಯರು. ಅದಕ್ಕೆ ಇಂಬು ನೀಡಿದವರು ಅಂದಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್. ಇವರ ಪ್ರಯತ್ನದಿಂದ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದ ಈಗಿನ ನಿವೇಶನ ದೊರಕಿತು. ಇದು ಮೊದಲು ವಿಶಾಲವಾದ ಬಯಲು ಪ್ರದೇಶವಾಗಿತ್ತು.
ಇಲ್ಲಿ ಭಾರತ ಸ್ವಾತಂತ್ರ್ಯ ಚಳುವಳಿಯ ಎಲ್ಲ ಸಭೆಗಳೂ ನಡೆಯುತ್ತಿದ್ದವು. ಹೀಗಾಗಿ ಜನರು ಇದನ್ನು `ಗಾಂಧಿ ಮೈದಾನ’ವೆಂದು ಕರೆಯುತ್ತಿದ್ದರು ಸರಕಾರದಿಂದ ಪ್ರಸ್ತುತ ಸ್ಥಳ ಪರಿಷತ್ತಿಗೆ ದಾನವಾಗಿ ದೊರೆಯಿತು.
1931ನೆಯ ಇಸವಿ ಏಪ್ರಿಲ್ 12ರಂದು ಕಟ್ಟಡದ ಶಂಕುಸ್ಥಾಪನೆ ನೆರವೇರಿತು. ಪರಿಷತ್ತಿನ ಆಗಿನ ಉಪಾಧ್ಯಕ್ಷರು, ಇಂಜಿನಿಯರ್ ಆಗಿದ್ದ ಕರ್ಪೂರ ಶ್ರೀನಿವಾಸರಾಯರು ಕಟ್ಟಡದ ವಿನ್ಯಾಸ ಮತ್ತು ರಚನೆಗೆ ಗಮನ ಕೊಟ್ಟಿದ್ದು ಮಾತ್ರವಲ್ಲದೆ, ಕಟ್ಟಡ ನಿರ್ಮಾಣಕ್ಕೆ ಹಣ ಸಂಗ್ರಹಿಸಿದರು. ಕಟ್ಟಡ ನಿಧಿಗಾಗಿ ಶ್ರೀಮನ್ ಮಹಾರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು ಮೂರು ಸಾವಿರ ರೂಪಾಯಿಗಳನ್ನು, ಅಂದು ಪರಿಷತ್ತಿನ ಅಧ್ಯಕ್ಷರಾಗಿದ್ದ ರಾಜಬಂಧು ಎಂ.ಕಾಂತರಾಜ ಅರಸ್ ಅವರು ಐದು ಸಾವಿರ ರೂಪಾಯಿಗಳನ್ನು ಉದಾರವಾಗಿ ದಾನ ನೀಡಿದರು. ಪರಿಷತ್ತು ಪ್ರತ್ಯೇಕವಾಗಿ ಸುಮಾರು ಎರಡೂವರೆ ಸಾವಿರ ರೂಪಾಯಿಗಳನ್ನು ಸಂಗ್ರಹ ಮಾಡಿತು. ಸರ್ ಮಿರ್ಜಾ ಇಸ್ಮಾಯಿಲ್ ಸರಕಾರದಿಂದ 15,286 ರೂಪಾಯಿಗಳನ್ನು ಮಂಜೂರು ಮಾಡಿಸಿದರು.
ವಾಸ್ತವದಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ಕಟ್ಟಡದ ಮೂಲ ಸ್ವರೂಪ ಈಗಿರುವಂತೆ ಇರಲಿಲ್ಲ. ಸಭಾಂಗಣದಲ್ಲಿ ಮೂರು ವಿಶಾಲ ಕೊಠಡಿಗಳಾಗಿ ರೂಪಿಸಲಾಗಿತ್ತು. ಸರ್ ಮಿರ್ಜಾ ಇಸ್ಮಾಯಿಲ್ ಅವರು ಒಮ್ಮೆ ನಗರ ಪ್ರರ್ಶಸನಕ್ಕೆ ಬಂದಾಗ ಇದನ್ನು ಕಂಡು ಪರಿಷತ್ತು ಬರೀ ಕಚೇರಿ ಆಗದೆ, ಅದು ಬಹು ಸಂಖ್ಯೆಯಲ್ಲಿ ಸರ್ವ ಜನಿಕರು ಸೇರುವ ಸಾಂಸ್ಕೃತಿಕ ಚಟುವಟಿಕೆ ತಾಣವಾಗಬೇಕು ಎಂದು ಸೂಚಿಸಿದರು. ಹೀಗಾಗಿ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ ರೂಪುಗೊಂಡಿತು.
ಕಟ್ಟಡ ನಿರ್ಮಾಣಕ್ಕೆ ಕರ್ಪೂರ ಶ್ರೀನಿವಾಸರಾಯರು, ಬೆಳ್ಳಾವೆ ವೆಂಕಟನಾರಾಯಣಪ್ಪನವರು, ಕಾರ್ಯನಿರ್ವಾಹಕ ಅಭಿಯಂತರರಾದ ಎ.ತಾಂಡೋಣಿರಾಯರ ಸೇವೆ ಸ್ಮರಣೀಯ. ಈ ಮೂವರು ಕಟ್ಟಡ ನೂರಾರು ವರ್ಷಗಳ ಕಾಲ ಸ್ಥಿರವಾಗಿ ನಿಲ್ಲುವಂತೆ ಬುನಾದಿ ಹಾಕಿದ್ದರು.
ಕರ್ಪೂರ ಶ್ರೀನಿವಾಸರಾಯರು, ಬೆಳ್ಳಾವೆ ವೆಂಕಟನಾರಾಯಣಪ್ಪನವರು ಕಟ್ಟಡ ರೂಪಿಸುವಲ್ಲಿ ಸಾಕಷ್ಟು ಶ್ರಮಿಸಿದರು. 1933 ಮೇ 26ರ ಶುಕ್ರವಾರದಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರ ಮಂದಿರ ಅಧಿಕೃತವಾಗಿ ಉದ್ಘಾಟನೆ ಮಾಡಿದ್ದರು.
ಕಳೆದ ಒಂಬತ್ತು ದಶಕಗಳಿಂದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಹಲವು ಚಾರಿತ್ರಿಕ ಘಟನೆಗಳಿಗೆ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ ಸಾಕ್ಷಿಯಾಗಿದೆ. ನಾಡಿನ ಭವ್ಯ ಪರಂಪರೆಯನ್ನು ಅದು ಶ್ರೀಮಂತಗೊಳಿಸಿದೆ. ಆದರೆ ಕಾಲನ ಹೊಡೆತಕ್ಕೆ ಸಿಕ್ಕಿ ಇದು ಶಿಥಿಲಾವಸ್ಥೆಯನ್ನು ತಲುಪಿತ್ತು. ಇದನ್ನು ಗಮನಿಸಿದ ನಾಡಿನ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರು ಪರಿಷತ್ತು ಮಂದಿರವನ್ನು ನವೀಕರಣಗೊಳಿಸುವಂತೆ ಸೂಚಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತನ್ನು ʻಜನಸಾಮಾನ್ಯರ ಪರಿಷತ್ತನ್ನಾಗಿಸುವʼ ಕನಸು ಕಂಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಮಾರ್ಗದರ್ಶನದಲ್ಲಿ ಸಂಪೂರ್ಣ ಅತ್ಯಾಧುನಿಕ ತಂತ್ರಜ್ಞಾನಗನೊಳಗೊಂಡ ಸುಸಜ್ಜಿತ ಸಭಾಭವನ ಸೇರಿದಂತೆ `ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ’ ಸಂಪೂರ್ಣ ನವೀಕರಣಗೊಂಡು ಸಿದ್ಧವಾಗಿದೆ.
ಕಾಕತಾಳಿಯವೋ ಎಂಬಂತೆ (1933 ಮೇ 26ರ) 26 ನೇ ತಾರೀಕು ಶುಕ್ರವಾರವೇ ಈ ಪರಿಷತ್ ಮಂದಿರ ಉದ್ಘಾಟಣೆಯಾಗಿತ್ತು. ನವೀಕರಣ ಕಾಮಗಾರಿ ಆರಂಭ ಮಾಡಿದ್ದು, ಇದೇ ಮಾರ್ಚ್ 18. ಆ ದಿನವೂ ಸಹ ಶುಕ್ರವಾರವಾಗಿತ್ತು. ಈಗ ನವೀಕರಣಗೊಂಡ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ ಹಾಗೂ ಆವರಣ ಲೋಕಾರ್ಪಣೆಯಾಗುತ್ತಿರುವುದು ಸಹ 26 ನೇ ತಾರಿಕು ಶುಕ್ರವಾರವೇ ಎನ್ನುವುದು ವಿಶೇಷವಾಗಿದೆ. ಮಾರ್ಚ್ 18 ರಂದು ಕಾಮಗಾರಿ ಆರಂಭಮಾಡಿ ಕೇವಲ 05 ತಿಂಗಳ ಕಾಲದೊಳಗೆ ನವೀಕರಣ ಪೂರ್ತಿ ಮಾಡಲಾಗಿದೆ.
ಪ್ರಸ್ತುತ `ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ’ ಸಂಪರ್ಣ ನವೀಕರಣಗೊಂಡಿದೆ. ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಹವಾನಿಯಂತ್ರಿತ ಸಭಾಂಗಣ, ಸುಸಜ್ಜಿತ ಆಸನ ವ್ಯವಸ್ಥೆ, ಸಮರ್ಪಕ ಧ್ವನಿ, ಬೆಳಕಿನ ವಿನ್ಯಾಸ ಹೀಗೆ ಹೊಸ ಕಾಲಘಟ್ಟಕ್ಕೆ ತಕ್ಕಂತೆ ರೂಪುಗೊಂಡಿದೆ. ಆದರೆ ಪರಂಪರೆಯ ಲಕ್ಷಣಗಳನ್ನು ಕೂಡ ಬಳಸಿಕೊಂಡಿದೆ. ನಿನ್ನೆ ಮತ್ತು ನಾಳೆಗಳ ನಡುವಿನ ಸೇತುವೆಯಂತಿರುವ ಇದು ಆಧುನಿಕ ಕಾಲಕ್ಕೆ ಇತಿಹಾಸವನ್ನು ಜೋಡಿಸುವ ಮಹತ್ತರ ಕಾರ್ಯವನ್ನು ಮಾಡಿದೆ.
ಜನಸಾಮಾನ್ಯರ ಕೈಗೆ ಎಟುಕುವಂತೆ, ಸಾಂಸ್ಕೃತಿಕ ಲೋಕಕ್ಕೆ ಪೂರಕವಾಗುವಂತೆ, ಪರಂಪರೆಗೆ ರೂಪಕವಾಗುವಂತೆ ರೂಪುಗೊಂಡಿರುವ ಇದು ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತು ಎನಿಸಿಕೊಳ್ಳುವಂತೆ ವಿನ್ಯಾಸಗೊಂಡಿದೆ. `ಶ್ರೀ ಕೃಷ್ಣರಾಜ ಪರಿಷತ್ತು ಮಂದಿರ’ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ,
ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಸಂಪನ್ಮೂಲದ ಜೊತೆಗೆ ಖಾಸಗಿ ಸಂಸ್ಥೆಗಳ ಸಾರ್ವಜನಿಕ ಹಿತಾಸಕ್ತಿ ನಿಧಿ ಹಾಗೂ ಸರಕಾರದ ಅನುದಾನಗಳನ್ನು ಬಳಸಿಕೊಂಡು ಸರಿ ಸುಮಾರು 1.95 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಹಾಗೂ ಆವರಣ ಸಂಪೂರ್ಣ ಆಧುನಿಕ ರೀತಿಯಲ್ಲಿ ನವೀಕರಣ ಮಾಡಲಾಗಿದೆ.
ಅತೀ ಸುಸಜ್ಜಿತ ಸಭಾಭವನ ಹೊಂದಿರುವ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ 128 ಆಸನಗಳು, 10 ಗಣ್ಯರ (ವಿಐಪಿ) ಆಸನಗಳು ಸೇರಿದಂತೆ ಪ್ರತ್ಯೇಕ ಸೋಫಾಗಳನ್ನು ಹೊಂದಿರುವ ಸಭಾಭವನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬಾಡಿಗೆ ಆಧಾರದಲ್ಲಿ ನೀಡಲಾಗುವುದು. ನಿಯಮಾನುಸಾರ ಬಾಡಿಗೆ ನಿರ್ಧರಿಸಲು ಸಮಿತಿಯೊಂದನ್ನು ರಚಿಸಿ ಆ ಸಮಿತಿ ನಿಗದಿ ಮಾಡಿರುವ ಠೇವಣಿ ಹಾಗೂ ಬಾಡಿಗೆಯನ್ನು ವಿಧಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ.
ಲೋಕಾರ್ಪಣೆ: ಶ್ರೀಕೃಷ್ಣರಾಜ ಪರಿಷನ್ಮಂದಿರ ಕಟ್ಟಡ ನರ್ಮಾ ಣಗೊಂಡು ಒಂಬತ್ತು ದಶಕಗಳೆ ಕಳೆದಿದ್ದು ಈ ಕಟ್ಟಡ ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಲಿದೆ. ಪಾರ್ಲಿಮೆಂಟ್ ಸೆಂಟ್ರಲ್ ಹಾಲ್ನಷ್ಟೇ ಮಹತ್ವವನ್ನು ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ ಹೊಂದಿದೆ. ಇಂಥಹ ಐತಿಹಾಸಿಕ ಕಟ್ಟಡದ ನವೀನ ರೂಪವನ್ನು ಅಗಸ್ಟ್ 26 ಶುಕ್ರವಾರ ಸಂಜೆ 04 ಗಂಟೆಗೆ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವ ಆರ್.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್, ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರು ಭಾಗವಹಿಸಲಿದ್ದಾರೆ.
ವಿಶೇಷ ಅಥಿತಿಗಳಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಅವರು ಭಾಗವಹಿಸಲಿದ್ದಾರೆ.
ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜೇಂದ್ರ ಪರಿಷತ್ತಿನ ಮಂದಿರ ಹಾಗೂ ಆವರಣ ನವೀಕರಣ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕನ್ನಡಾಭಿಮಾನಿಗಳು, ಕನ್ನಡಿಗರೆಲ್ಲರೂ ಭಾಗವಹಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮನವಿ ಮಾಡಿದ್ದಾರೆ
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….