ಚಿಕ್ಕಬಳ್ಳಾಪುರ: ನ್ಯಾಯ ಅರಸಿ ಬರುವ ದುರ್ಬಲರಿಗೆ, ಅಸಹಾಯಕರಿಗೆ, ಹಾಗೂ ಮಹಿಳೆಯರಿಗೆ ಕಾನೂನು ಅರಿವು ಮತ್ತು ನೆರವು ನೀಡುವ ಮಹತ್ತರ ಕಾರ್ಯವನ್ನು ಪ್ಯಾನೆಲ್ ವಕೀಲರು ವೃತ್ತಿಪರತೆಯಿಂದ ಮಾಡುತ್ತಿರುವುದು ಶ್ಲಾಘನೀಯ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ರಾಜಶೇಖರ್ ಅವರು ತಿಳಿಸಿದರು.
ಅವರು ಬುಧವಾರ ನಗರದ ನ್ಯಾಯಾಲಯದ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘವು ಆಯೋಜಿಸಲಾಗಿದ್ದ ಪ್ಯಾನೆಲ್ ವಕೀಲರಿಗೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಸಮಾಜದ ಕಟ್ಟ ವ್ಯಕ್ತಿಗೂ ಸಹ ನ್ಯಾಯ ಒದಗಿಸುವ ಮೂಲಕ ಪ್ರಸ್ತುತ ಸಮಾಜದಲ್ಲಿನ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾಡಳಿತಕ್ಕೆ ಅಭಿನಂದನೆ: ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ ಹೋಬಳಿಯ ಕಮ್ಮಗಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಣುಮಾಕಲಹಳ್ಳಿಯಲ್ಲಿ ವಾಸವಿದ್ದ ಅಸಹಾಯಕಿ ಆದಿಲಕ್ಷ್ಮಮ್ಮ ಎಂಬ ವೃದ್ಧೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವು ಸೂಕ್ತ ಚಿಕಿತ್ಸೆ ನೀಡಿ ಹಾಗೂ ಪುನರ್ವಸತಿ ಕಲ್ಪಿಸಿರುವುದು ಅಭಿನಂದನೀಯ. ಇಂತಹ ಅಸಹಾಯಕರನ್ನು ಗುರ್ತಿಸಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ಯಾನೆಲ್ ವಕೀಲರು, ಪ್ರಾಧಿಕಾರದ ಆಶಯಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ವಕೀಲರಿಗೆ ಸಲಹೆ ನೀಡಿದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಅವರು ಮಾತನಾಡಿ, ಉಚಿತ ಕಾನೂನು ಅರಿವು ಮತ್ತು ನೆರವು ನೀಡುವುದು ನೊಂದವರಿಗೆ ಸಂಬಂಧಿಸಿದ ಯೋಜನೆಗಳ ಮೂಲಕ ಪರಿಹಾರ ನೀಡುವುದು ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಪ್ಯಾನೆಲ್ ವಕೀಲರು ಸೈನಿಕರಂತೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಜೊತೆಗೆ ತರಬೇತಿ ಪಡೆದ ಪ್ಯಾನೆಲ್ ವಕೀಲರು ನೊಂದವರಿಗೆ ನ್ಯಾಯ ಒದಗಿಸಿ ಕೊಡುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಜಿ.ವಿ.ವಿಶ್ವನಾಥ್ ಅವರು ಸಮಾಜದಲ್ಲಿ ಅತ್ಯಂತ ಕಡು ಬಡತನದ ಪರಿಸ್ಥಿತಿಯಲ್ಲಿ ಇರುವ ಜನರು ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಬರದಂತಹ ಪರಿಸ್ಥಿತಿಯಿದೆ. ಅಂತಹವರನ್ನು ಸಾಮಾಜಿಕ ಜಾಲತಾಣಗಳಿಂದ ಇತರೆ ಮಾರ್ಗದಿಂದ ಗುರ್ತಿಸಿ ನ್ಯಾಯ ಒದಗಿಸಬೇಕು. ಮಾನವನ ಮೂಲಭೂತ ಹಕ್ಕುಗಳು ಕರ್ತವ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಒದಗಿಸಬೇಕು. ಅದು ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರುಗಳಿಂದ ಮಾತ್ರ ನ್ಯಾಯ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ಯಾನೆಲ್ ವಕೀಲರು ದಕ್ಷತೆ ಹಾಗೂ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಶ್ರಮವಹಿಸಬೇಕು ಎಂದು ವಕೀಲರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಾಳಪ್ಪ ಜರಗು ಅವರು ಕಾರ್ಯಾಗಾರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಗಾರದಲ್ಲಿ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲಾವಣ್ಯ ಹೆಚ್.ಎನ್., ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣಾ ಕುಮಾರಿ.ಎ, ಎರಡನೇ ಸಿವಿಲ್ ನ್ಯಾಯಾಧೀಶರಾದ ಶೃತಿ.ಎಂ, ಜಿಲ್ಲಾ ಸರ್ಕಾರಿ ವಕೀಲರಾದ ಪ್ರಕಾಶ್, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ನಟರಾಜು ಟಿ.ಎನ್ ರವರು ಸೇರಿದಂತೆ ಪ್ಯಾನೆಲ್ ವಕೀಲರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….