ದೊಡ್ಡಬಳ್ಳಾಪುರ: ತಾಲೂಕಿನ ಸೂಲಕುಂಟೆ ಗ್ರಾಮದಲ್ಲಿ ಕಂದಾಯ ದಾಖಲೆಯಲ್ಲಿನ ಗೋ ಕಟ್ಟೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಕುರಿತಂತೆ, ಖಾಸಗಿ ಸುದ್ದಿವಾಹಿನಿ ಸಂದರ್ಶನದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ದೂರು ನೀಡಿರುವ ಘಟನೆ ನಡೆದಿದೆ.
ಜೆಡಿಎಸ್ ವಕ್ತಾರರಾದ ವೀರಣ್ಣ ಎನ್ನುವವರು, ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಖಾಸಗಿ ಸುದ್ದಿವಾಹಿನಿ ನಡೆಸುತ್ತಿದ್ದ ಸಂದರ್ಶನ ನಡೆಸುತ್ತಿದ್ದ ವೇಳೆ, ಈ ಕುರಿತಂತೆ ಪ್ರಸ್ತಾಪಿಸಿದ್ದು, ಕಂದಾಯ ದಾಖಲೆಯಲ್ಲಿನ ಕೆರೆ, ಕಟ್ಟೆ, ಕುಂಟೆಗಳು ಜಲಮೂಲಗಳಾಗಿದ್ದು, ಇವುಗಳ ಸಂರಕ್ಷಣೆ ಕಂದಾಯ ಇಲಾಖೆ ಹೊಣೆಯಾಗಿದೆ.
ಆದರೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಸೂಲಕುಂಟೆ ಗ್ರಾಮದಲ್ಲಿ ಗೋಕಟ್ಟೆಯನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದು, ತಾಲೂಕು ಕಚೇರಿಯಿಂದ ಒತ್ತುವರಿಯಾಗಿರುವುದಾಗಿ ಟಿಪ್ಪಣಿಯನ್ನು ನೀಡಿದ್ದಾರೆ. ಆದರೆ ತೆರವು ಮಾಡಿಸುವಂತೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಶಾಮಿಲಾಗಿದ್ದಾರೆ. ಈ ಕುರಿತು ಸಚಿವರು ಕ್ರಮಕೈಗೊಂಡು ಜಲಮೂಲಗಳನ್ನು ರಕ್ಷಿಸುವಂತೆ ವೀರಣ್ಣ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ಮಹಾತ್ಮ ಗಾಂಧಿ ಅವರು ಹೇಳಿದಂತೆ ಗಾಳಿ, ನೀರು, ಬೆಳಕು ನಮ್ಮ ಅಪ್ಪನ ಸ್ವತ್ತಲ್ಲ. ಅದನ್ನು ಹಾಳು ಮಾಡದೆ ಮುಂದಿನ ಜನಾಂಗಕ್ಕೆ ನೀಡುವ ಹೊಣೆಗಾರಿಕೆ ನಮ್ಮದಾಗಿದೆ. ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳುವವರು ಪಾಪಿಗಳು, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಿದೆ. ಆದರೆ ನ್ಯಾಯಾಲಯದಲ್ಲಿ ಸ್ಟೇ ತರುತ್ತಾರೆ. ಜನ ಮತ್ತು ಮಂತ್ರಿಗಳು ಕೆರೆಯನ್ನು ನಮ್ಮ ಜೀವನ ಎಂದು ತಿಳಿದುಕೊಳ್ಳಬೇಕು.
ಯಾವುದೇ ಕೆರೆಯ ಒಂದು ಇಂಚು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಬಿಡಬಾರದು. ನಾನು ಇದರ ಪರವಾಗಿದ್ದು, ಕಾನೂನು ತಿದ್ದುಪಡಿ ಮಾಡಿಯಾದರು ಕೆರೆಗಳ ಒತ್ತುವರಿ ಮಾಡಿದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಪೋಟೋ ಕೃಪೆ: ಏಷ್ಯಾನೆಟ್ ಸುವರ್ಣ ನ್ಯೂಸ್.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

