
ಬೆಂ.ಗ್ರಾ.ಜಿಲ್ಲೆ,(ನ 01): ಹೊರ ರಾಜ್ಯಗಳಿಂದ ಬಂದು ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದಲೇ ಕನ್ನಡ ಭಾಷೆ ಕಲಿಸುವ ಕಾರ್ಯ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ದೇವನಹಳ್ಳಿ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ “67 ನೇ ಕನ್ನಡ ರಾಜ್ಯೋತ್ಸವ” ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಮಂಡಿಸಿ, ಕನ್ನಡದ ಮಹತ್ವವನ್ನು ಹೆಚ್ಚಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಮುಂಬರುವ ದಿನಗಳಲ್ಲಿ ಕನ್ನಡದ ಬೆಳವಣಿಗೆಗೆ ಈ ವಿಧೇಯಕ ವರದಾನವಾಗಲಿದೆ. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸುವ ಕಾರ್ಯಕ್ರಮವನ್ನು ಪ್ರಸಕ್ತ ವರ್ಷದಿಂದ ಜಾರಿಗೊಳಿಸಲಾಗುವುದು ಎಂದರು.
ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಜಿಲ್ಲೆಯು ಕೈಗಾರಿಕೆ, ಕೃಷಿ, ತೋಟಗಾರಿಕೆ ಮತ್ತಿತರ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ರಾಜ್ಯದಲ್ಲಿ 100 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿದಲಾಗುತ್ತಿದೆ. 400 ಕ್ಕೂ ಹೆಚ್ಚು ನಮ್ಮ ಕ್ಲಿನಿಕ್ಗಳು ಇದೇ ನವೆಂಬರ್ನಿಂದ ಪ್ರಾರಂಭವಾಗಲಿವೆ ಎಂದು ಘೋಷಿಸಿದರು.
ಅಚ್ಚ ಹಸಿರಿನ ಬೆಟ್ಟ, ಗುಡ್ಡಗಳು, ಶರಣರು, ದಾಸರು, ಶೂರ ಪುರುಷರು, ವೀರ ನಾರಿಯರು, ಸಾಹಿತಿಗಳ, ವಿಜ್ಞಾನಿಗಳ ನೆಲ ನಮ್ಮ ಕನ್ನಡ ನಾಡು. ನೆಲ-ಜಲಕ್ಕೆ ಶ್ರಮಿಸಿದ ಮಹನೀಯರನ್ನು ನಾವೆಲ್ಲ ಸದಾ ಕಾಲ ನೆನೆಯಬೇಕು. ವಿಶ್ವದ ಭಾಷೆಗಳಲ್ಲಿಯೇ ಕನ್ನಡ ನುಡಿ ಹಾಗೂ ಲಿಪಿ ಸುಂದರವಾದ ಸ್ಥಾನ ಗಳಿಸಿದೆ. ಸುಮಾರು 250 ವರ್ಷಗಳ ಕಾಲ ನಮ್ಮ ದೇಶವನ್ನಾಳಿದ ಬ್ರಿಟನ್ನಿನ ಪ್ರಧಾನಿಯಾಗಿ ಭಾರತೀಯ ಮೂಲದ ಸಂಜಾತ, ಕನ್ನಡ ನಾಡಿನ ಅಳಿಯ ರಿಷಿ ಸುನಾಕ್ ಆಯ್ಕೆಯಾಗಿರುವುದು, ಕೆನಡಾದ ಸಂಸದರಾಗಿರುವ ಚಂದ್ರ ಆರ್ಯ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ತೆಲುಗು, ತಮಿಳು, ಮರಾಠಿ, ಕನ್ನಡ ಹೀಗೆ ಹಲವು ಭಾಷಿಕರ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರೆಲ್ಲ ಏಕೀಕೃತ ಕನ್ನಡ ನಾಡಿನಲ್ಲಿ ಒಂದಾಗಿರುವುದರ ಹಿಂದೆ ಚಳುವಳಿಯ ದೊಡ್ಡ ಇತಿಹಾಸವಿದೆ. ಕನ್ನಡವು ಉತ್ತರ ಕರ್ನಾಟಕ, ಕರಾವಳಿ, ಹಳೆ ಮೈಸೂರು, ಮಲೆನಾಡು ಪ್ರದೇಶಗಳಲ್ಲಿ ವಿಭಿನ್ನ ಹಾಗೂ ವೈವಿಧ್ಯಮಯ ಶೈಲಿಯ ಸುಂದರ ನುಡಿಗಳಲ್ಲಿ ಅನುರಣಿಸುತ್ತಿದೆ. ಡೆಪ್ಯೂಟಿ ಚೆನ್ನಬಸಪ್ಪ, ರೊದ್ದಂ ಶ್ರೀನಿವಾಸರಾಯರು ಮೊದಲಾದ ಮಹನೀಯರು ಕನ್ನಡ ನಾಡಿನ ಏಕೀಕರಣಕ್ಕೆ ಹೋರಾಡಿದ ಪ್ರಮುಖ ನಾಯಕರಾಗಿದ್ದಾರೆ. ಕನ್ನಡ ಚಿತ್ರರಂಗವೂ ಕೂಡ ನಾಡು, ನುಡಿ, ಸಂಸ್ಕೃತಿಗೆ ಮಹತ್ವದ ಕೊಡುಗೆಗಳನ್ನು ನೀಡಿದೆ. ದಿವಂಗತ ಪುನೀತ್ ರಾಜ್ಕುಮಾರ್ ಅವರಿಗೆ ಇದೇ ದಿನ ಕರ್ನಾಟಕ ರತ್ನ ಪ್ರಶಸ್ತಿಯು ಮರಣೋತ್ತರವಾಗಿ ಪ್ರದಾನವಾಗುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ಹೆಮ್ಮೆಯ ನುಡಿಗಳನ್ನಾಡಿದರು.
ಹಳ್ಳಿಗಳಲ್ಲಿ ಉಚಿತ ನೇತ್ರ ತಪಾಸಣೆ, ಚಿಕಿತ್ಸೆಗೆ ಶ್ರಮಿಸಿದ ನೆಲಮಂಗಲದ ಸಿ.ಕರಿಯಪ್ಪನವರ ಸೇವೆಯನ್ನು ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ಕನ್ನಡ ನಾಡಿನಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಶ್ರಮಿಸಿದ, ದೂರದೃಷ್ಟಿಯ ಆಡಳಿತಗಾರ ನಾಡಪ್ರಭು ಕೆಂಪೇಗೌಡ ಅವರ ಸೇವೆಯನ್ನು ಸರ್ಕಾರ ಸ್ಮರಿಸುತ್ತಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಸಮೃದ್ಧಿಯ ಪ್ರತಿಮೆಯನ್ನು ದೇಶದ ಪ್ರಧಾನಮಂತ್ರಿಯವರಾದ ನರೇಂದ್ರ ಮೋದಿಯವರು ಇದೇ ನವೆಂಬರ್ 11 ರಂದು ಅನಾವರಣ ಮಾಡಲಿದ್ದಾರೆ. ಜಿಲ್ಲೆಯ ಜನ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು. ಕನ್ನಡಾಭಿಮಾನ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಬಾರದು. ಯುವಜನರು ಅಧ್ಯಯನಶೀಲರಾಗಿ, ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಬೇಕು ಎಂದು ಸಚಿವರಾದ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ಉದಯವಾಗಿ 67 ವರ್ಷಗಳಾಗಿವೆ. ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಣೆ ಮಾಡುವ ಸಂದರ್ಭದಲ್ಲಿ ಕನ್ನಡಿಗರನ್ನೆಲ್ಲ ಒಂದೇ ಆಡಳಿತದ ವ್ಯಾಪ್ತಿಗೆ ಒಳಪಡಿಸಲು ಅನೇಕ ಮಹನೀಯರು ಶ್ರಮಿಸಿದ್ದಾರೆ. ಕನ್ನಡ ನಾಡಿನ ಕೈಗಾರಿಕೆಗಳು,ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶಗಳ ಮೀಸಲಾತಿ ಸೌಲಭ್ಯ ಸಿಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸಿ, ಕನ್ನಡಿಗರ ಹಿತ ಕಾಯಬೇಕು ಎಂದರು.
ಆಕರ್ಷಕ ಪಥ ಸಂಚಲನ: ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪೊಲೀಸ್, ಮಹಿಳಾ ಪೊಲೀಸ್, ವಿವಿಧ ಶಾಲೆ-ಕಾಲೇಜುಗಳ ತಂಡಗಳು ಸೇರಿ ವಿವಿಧ 18 ತಂಡಗಳಿಂದ ಶಿಸ್ತುಬದ್ಧ ಹಾಗೂ ಆಕರ್ಷಕ ಪಥಸಂಚಲನ ಜರುಗಿತು.
ಸಾಧಕರಿಗೆ ಸನ್ಮಾನ: ವಿವಿಧ ರಂಗಗಳಲ್ಲಿ ಸಾಧನೆಗೈದಿರುವ ದೇವನಹಳ್ಳಿ ಬಿ.ಕೆ.ಗೋಪಾಲ(ಸಂಗೀತ), ಕಂಟನಕುಂಟೆಯ ಕೆ.ಎಂ.ಕೃಷ್ಣಮೂರ್ತಿ(ಪೌರಾಣಿಕ ನಾಟಕ), ಶ್ಯಾಕಲದೇವನಪುರದ ವಿ.ರಾಮಚಂದ್ರ(ಜನಪದ), ದೇವನಹಳ್ಳಿ ವಿ.ಎಂ.ವೇಣುಗೋಪಾಲ(ಕ್ರೀಡೆ), ಯಲಿಯೂರು ದೇವರಾಜ ವೈ.ಎ.(ಕೃಷಿ), ದೇವನಹಳ್ಳಿಯ ಸುರೇಶಬಾಬು(ಸಾಹಿತ್ಯ), ಹೊಸಕೋಟೆಯ ಬೆಟ್ಟಹಳ್ಳಿ ಗೋಪಿನಾಥ(ಸಮಾಜಸೇವೆ), ದೊಡ್ಡಬಳ್ಳಾಪುರದ ಯುಕ್ತಿ ರಾಜೇಂದ್ರ(ಕ್ರೀಡೆ-ಏರ್ ರೈಫಲ್ ಶೂಟಿಂಗ್), ನೆಲಮಂಗಲದ ಬಿ.ರಾಮಯ್ಯ(ಸಾಮಾಜಿಕ ನಾಟಕ) ಹಾಗೂ ದೊಡ್ಡಬಳ್ಳಾಪುರದ ಬಿ.ಎಸ್.ಶ್ರೀಕಂಠಮೂರ್ತಿ(ಕ್ರೀಡೆ) ಅವರನ್ನು ಸಚಿವರು ಹಾಗೂ ಗಣ್ಯರು 67 ನೇ ಕನ್ನಡ ರಾಜ್ಯೋತ್ಸವದ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಿದರು.
ಸೌಲಭ್ಯಗಳ ವಿತರಣೆ: ಎಸ್.ಎಸ್.ಎಲ್.ಸಿ. ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್ಟಾಪ್ ಹಾಗೂ ಬ್ರೈಲ್ಕಿಟ್ಗಳನ್ನು ವಿತರಿಸಲಾಯಿತು.
ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು: ವೀರಗಾಸೆ, ಕರಗ, ನಂದಿಕೋಲು, ಕೋಲಾಟ, ಡೊಳ್ಳು ಕುಣಿತ, ಪಟ ಕುಣಿತ ಮತ್ತಿತರ ಜನಪದ ಕಲೆಗಳೊಂದಿಗೆ ನಾಡಧ್ವಜದ ಅರಿಷಿಣ, ಕುಂಕುಮ ವರ್ಣಗಳ ವಸ್ತ್ರಧಾರಿಗಳಾಗಿ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಿರ್ವಹಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನಸೆಳೆದವು. ಸಿಡಿ ಉತ್ಸವ ಮಾದರಿಯಲ್ಲಿ ಕಂಬವನ್ನೇರಿ ಬಟ್ಟೆಯ ನೆರವಿನಿಂದ ಸಾಹಸ ಪ್ರದರ್ಶಿಸಿ, ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರವಿರುವ ಧ್ವಜ ಎತ್ತಿ ಹಿಡಿದ ಬಾಲಕಿಯೊಬ್ಬಳ ಪ್ರದರ್ಶನ ನೆರೆದ ಜನಸಮೂಹದಲ್ಲಿ ಸಂಚಲನ ಉಂಟು ಮಾಡಿತು.
ದೇವನಹಳ್ಳಿ ಪುರಸಭೆ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಗೀತಾ, ಕನ್ನಡ ಸಾಹಿತ್ಯ ಪರಿಷತ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ.ಕೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ವಿಜಯ.ಈ.ರವಿಕುಮಾರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
