ಮಗ ಶಾಲೆಗೆ ಹೋಗುತಿದ್ದ. ಅಧ್ಯಾಪಕರು ಕೊಟ್ಟ ಹೋಂ ವರ್ಕ್ ಮಾಡಿದ್ದೀಯಾ ಎಂದು ತಂದೆ ಕೇಳಿದರು, ಆಯ್ತು ಎಂದು ಮಗನು ಉತ್ತರಿಸಿದ.

ಹೀಗೆ ಎಲ್ಲಾ ಕಾರ್ಯದಲ್ಲೂ ತಂದೆ ಮಗನನ್ನು ಪ್ರಶ್ನಿಸುತ್ತಿದ್ದರು. ಗೇಟ್ ತೆರೆದು ಬಿಟ್ಟು ಹೋದರೆ ಗೇಟ್ ಹಾಕಿ ಹೋಗೆಂದೂ, ಪೈಪಲ್ಲಿ ನೀರಿನ ಹನಿಗಳು ಬೀಳುತ್ತಿದ್ಧರೆ ಪೈಪ್ ಸರಿಯಾಗಿ ಬಂದ್ ಮಾಡೆಂದೂ, ಫ್ಯಾನ್ ಸ್ವಿಚ್ ಆನ್ ಮಾಡಿ ಆಫ್ ಮಾಡದೆ ಹೋದರೆ ಸುಮ್ಮನೆ ಯಾಕೆ ಫ್ಯಾನ್ ತಿರುಗಿಸುತ್ತೀಯಾ ಎಂದೂ, ನೆನೆದ ಬಟ್ಟೆಯನ್ನು ಬೆಡ್ ಶೀಟ್ ಮೇಲೆ ಇಟ್ಟರೆ ನಿನ್ನ ಬಟ್ಟೆಯಿಂದ ಬೆಡ್ ಅನ್ನೂ ನೆನೆಸುವೆಯಾ ಎಂದೆಲ್ಲ ಹೇಳಿ ಗದರುತ್ತಿದ್ದರು.

ತಂದೆಯ ಮಾತನ್ನು ಕೇಳಿ ಕೇಳಿ ಬೆಳೆದು ನಿಂತ ಮಗನಿಗೆ ಕಿರಿ ಕಿರಿಯಾಗತೊಡಗಿತು. ಎಲ್ಲಾ ವಿಷಯದಲ್ಲೂ ತನಗೆ ಕಿರಿಕಿರಿ ಮಾಡುವ ತಂದೆಯಿಂದ ದೂರವಾಗಬೇಕೆಂದು ಚಿಂತಿಸಿದ. ಆದರೆ ಯಾವುದೇ ಕೆಲಸವಿಲ್ಲದೆ ತಾನು ತಂದೆಯಿಂದ ದೂರವಾದರೆ ಗತಿಯೇನು ಎಂದೂ ಯೋಚಿಸಿದ.
ಎಷ್ಟು ಗದರಿದರೂ ತಂದೆ ಯಾವುದನ್ನೂ ನಿರಾಕರಿಸದೇ ಬೇಕಾದ್ದನ್ನು ತಂದು ಕೊಡುತ್ತಿದ್ದರು.
ಅದೊಂದು ದಿನ ಇಂಟರ್ ವ್ಯೂಗೆ ಕರೆ ಬಂತು. ಒಳ್ಳೆಯ ಸ್ಯಾಲರಿ ಬರುವ ಕೆಲಸ ಅದು. ಕೆಲಸ ಸಿಕ್ಕಿದರೆ ಜೀವಿಸಲೇನು ಚಿಂತೆಯಿಲ್ಲ, ಆಗಲೇ ತೀರ್ಮಾನಿಸಿದ ಮಗ ಕೆಲಸಕ್ಕೆ ಸೇರಿ ಒಳ್ಳೆಯ ಸಂಪತ್ತುಗಳಿಸಿ ಶತ್ರುವಾದ ತಂದೆಯಿಂದ ದೂರವಾಗಬೇಕು, ಇನ್ನು ಮುಂದೆ ತಂದೆ ತನ್ನ ತಂಟೆಗೆ ಬರಬಾರದು ಎಂದುಕೊಂಡ.
ಇಂಟರ್ ವ್ಯೂಗೆ ಹೋಗುವಾಗಲೂ ನಿನ್ನ ಮಕ್ಕಳಾಟ ಬಿಟ್ಟು ಸಂದರ್ಶನದಲ್ಲಿ ಸರಿಯಾಗಿ ಉತ್ತರಿಸು ಎಂದು ತಂದೆ ಹೇಳಿದರೂ ಅವರ ಮಾತಿಗೆ ಬೆಲೆ ಕೊಡದೆ, ಅವರಿಂದ ದೂರವಾಗಿ ಯಾವ ಕಿರಿಕಿರಿಯೂ ಇಲ್ಲದೆ ಜೀವಿಸ ಬಹುದೆಂದು ನೆನೆದು ಮುಂದೆ ನಡೆದ.
ಇಂಟರ್ ವ್ಯೂಹಾಲ್ ಗೆ ಹೋಗುವಾಗ ಗೇಟ್ ತೆರೆದಿತ್ತು. ಗೇಟ್ ಹಾಕಿ ಹೋಗೆಂದು ಹೇಳುವ ತಂದೆಯ ಮಾತು ನೆನಪಾಗಿ ಗೇಟ್ ಹಾಕಿ ಒಳ ನಡೆದ.
ಹಾಲ್ ನಲ್ಲಿ ಎಲ್ಲಾ ಕಡೆಯೂ ಫ್ಯಾನ್ ತಿರುಗುತಿತ್ತು, ಅಲ್ಲೂ ತಂದೆಯ ಮಾತು ನೆನಪಾಗಿ ಅಗತ್ಯವಿಲ್ಲದೆ ತಿರುಗುವ ಫ್ಯಾನ್ ಆಫ್ ಮಾಡಿದ.
ಸಿಂಕ್ ನ ನಲ್ಲಿಯಿಂದ ನೀರಿನ ಹನಿಗಳು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಅದನ್ನೂ ನಿಲ್ಲಿಸಿದ.
ಅರ್ಧ ಗಂಟೆಯ ಬಳಿಕ ಮೆನೇಜರ್ ಬಂದು ಹೇಳಿದರು “ನಾಳೆಯಿಂದ ನೀವು ಕೆಲಸಕ್ಕೆ ಬನ್ನಿ, ನಾವು ನಿಮ್ಮನ್ನು ಆಯ್ಕೆ ಮಾಡಿದ್ದೇವೆ ಎಂದು…!!!
ಇಂಟರ್ ವ್ಯೂ ನಡೆಯದೇ ಹೇಗೆ ಆಯ್ಕೆ ಮಾಡಿದಿರಿ..!! ಎಂಬ ಪ್ರಶ್ನೆ ಯುವಕನದ್ದು..??
ನೀವು ಗೇಟ್ ಹಾಕಿದ್ದನ್ನೂ, ಫ್ಯಾನ್ ಆಫ್ ಮಾಡಿದ್ದನ್ನೂ ಹಾಗೂ ನೀರು ನಿಲ್ಲಿಸಿದ್ದನ್ನೂ ನಾವು ಸಿಸಿ ಟಿವಿಯಲ್ಲಿ ನೋಡಿದ್ದೇವೆ. ನೀವಲ್ಲದೆ ಬೇರೆ ಯಾರೂ ಅದನ್ನು ಚಿಂತಿಸಲಿಲ್ಲ, ನಿಮ್ಮಂತವರು ನಮಗೆ ಬೇಕು ಎಂದರು.
ಆ ಒಂದು ಕ್ಷಣ ಮಗ ತನ್ನ ತಂದೆಯನ್ನು ನೆನೆದು ಕಣ್ಣೀರಾದ.
ಮನೆಗೆ ಬಂದಾಗ ತಂದೆಯನ್ನು ಬಿಗಿಯಾಗಿ ಅಪ್ಪಿ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ ಕ್ಷಮಿಸಿ ಅಪ್ಪಾ ನೀವು ಗದರಿಸಿ ಕಲಿಸಿದ್ದು ನನಗೆ ಈ ಕೆಲಸ ಸಿಗಲು ಕಾರಣವಾಯಿತು. ನೀವು ನನಗೆ ಸ್ಫೂರ್ತಿ. ನಿಮ್ಮಿಂದ ನಾನು ಎಂದಿಗೂ ದೂರವಾಗಲಾರೆ ಎಂದ.
ಕೃಪೆ: ಸಾಮಾಜಿಕ ಜಾಲತಾಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
