ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ನೀವು ತೆರಳಿದರೆ ಬೃಹತ್ ಕೆಂಪೇಗೌಡರ ಪ್ರತಿಮೆ ಕಾಣಬಹುದು. ವಿಮಾನ ನಿಲ್ದಾಣದ ಹೆಬ್ಬಾಗಲಿನಲ್ಲೇ ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ವಿರಾಜಮಾನವಾಗಿ ನಿಂತಿದೆ. ನಾಳೆ (ನವೆಂಬರ್ 11)ರಂದು ಪ್ರಧಾನಿ ನರೇಂದ್ರ ಮೋದಿ ಅತಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

84 ಕೋಟಿ ವೆಚ್ಚದಲ್ಲಿ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ರಾಜ್ಯ ಸರಕಾರವೇ ಪ್ರತಿಮೆ ನಿರ್ಮಾಣ ಕಾರ್ಯ ಮಾಡಿದೆ. ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಾಧ್ಯಕ್ಷತೆಯಲ್ಲಿದ್ದ ಕೆಂಪೇಗೌಡ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಕಾರ್ಯದ ಉಸ್ತುವಾರಿ ಹೊತ್ತುಕೊಂಡಿತ್ತು.

ವಿಶ್ವ ಭೂಪಟದ ಅತಿ ಮುಖ್ಯ ನಗರಗಳಲ್ಲೊಂದು ಎಂಬಂತೆ ಗುರುತಿಸಿಕೊಂಡಿರುವ ಭಾರತದ ದೇಶದ ಅತಿದೊಡ್ಡ ನಗರವೆಂಬ ಖ್ಯಾತಿಯುಳ್ಳ ನಮ್ಮ ಬೆಂಗಳೂರು ಮಹಾನಗರದ ಇತಿಹಾಸವನ್ನು ಕೆದಕುತ್ತಾ ಹೋದಂತೆ ನಮಗೆ ಮಹತ್ವದ ಸಂಗತಿಗಳು ಬೆಳಕು ಚೆಲ್ಲುತ್ತವೆ.
ಕೆಂಪೇಗೌಡರ ವಂಶಸ್ಥರನ್ನು ಯಲಹಂಕ ಪ್ರಭುಗಳೆಂದೇ ಕರೆಯಲಾಗುತ್ತದೆ. ಯಲಹಂಕ ನಾಡು ವಿಜಯನಗರದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಫಲವಾಗಿ ಉದಯಿಸಿತು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಕ್ರಿ.ಶ ಸುಮಾರು 1420 ರಿಂದ 1728ರವರೆಗೆ ಆವತಿ, ಯಲಹಂಕ, ಬೆಂಗಳೂರು, ಮಾಗಡಿ ಮತ್ತು ಸಾವನದುರ್ಗಗಳನ್ನು ಪ್ರಮುಖ ಆಡಳಿತ ಕೇಂದ್ರಗಳನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ಯಲಹಂಕ ನಾಡಪ್ರಭುಗಳು ರಾಜ್ಯದ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ.
ಯಲಹಂಕ ಪ್ರಭು ಹಿರಿಯ ಅಥವಾ ಒಂದನೇ ಕೆಂಪೇಗೌಡರು ಹಾಗೂ ಕೆಂಪೇಗೌಡರ ಮೊಮ್ಮಗ ಮಾಗಡಿಯ ಕೆಂಪೇಗೌಡ ಅಥವಾ ಇಮ್ಮಡಿ ಕೆಂಪೇಗೌಡ. ದಾಖಲೆಗಳ ಪ್ರಕಾರ, ಗಂಗರ ಅವನೀತನ ಕಾಲದ ಶಾಸನ (ಕ್ರಿ.ಶ. 469-520)ದ ಪ್ರಕಾರ ಗಂಗರಸರು ಕೆಂಗೇರಿಯ ಬಳಿ ತಮ್ಮ ಬೆಂಗಾವಲು ಆಳುಗಳಿಗಾಗಿ “ಬೆಂಗಾವಲಾಳೂರು’ ಎಂಬ ಊರನ್ನು ಕಟ್ಟಿದರೆಂಬ ವರದಿ ಇದೆ. ಅಂತೆಯೇ ಯಲಹಂಕ ಪ್ರಭು ಕೆಂಪೇಗೌಡರ ತಾಯಿ ಲಿಂಗಮ್ಮಾಂಬೆಯ ಊರು ಕೊಡಿಗೇಹಳ್ಳಿಯ ಬಳಿ ಇದ್ದ “ಬೆಂಗುಳೂರು’ ಎನ್ನಲಾಗಿದೆ.
ಅದೇ ಊರಿನ ಸೋದರ ಮಾವನ ಮಗಳು ಚಿನ್ನಾಂಬೆಯನ್ನೇ ಮದುವೆಯಾಗಿದ್ದರು. ತನ್ನ ಬಾಲ್ಯದ ನೆನಪುಗಳಿಂದ ಹೊರಬಾರದ ಆತ ಅದೇ ಪ್ರೀತಿಯ ಬೆಸುಗೆಯಿಂದ ತಾನು ಕಟ್ಟಿದ ಊರಿಗೆ “ಬೆಂಗುಳೂರು’ ಎಂದೇ ಹೆಸರಿಟ್ಟ ಎಂದು ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ. ಮಡಿವಾಳದ ಸಮೀಪದ ತಾವರೆಕೆರೆಯ ಸೋಮೇಶ್ವರ ದೇವಾಲಯದಲ್ಲಿರುವ 1247ರ ತಮಿಳು ಶಾಸನದಲ್ಲಿ “ಬೆಂಗುಳೂರು’ ಎಂಬ ಉಲ್ಲೇಖವಿದೆ.
ಹಿರಿಯ ಕೆಂಪೇಗೌಡರು, ಕೆಂಪನಂಜೇಗೌಡರ ಮಗನಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದವರು. ಅವರು ಇಂದಿನ ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರನ್ನು ಸ್ಥಾಪಿಸಿದವರು. 1537ರಲ್ಲಿ ಎಂದರೆ 480 ವರ್ಷಗಳ ಹಿಂದೆ ಅವರು ತಮ್ಮ ಕನಸಿನ ಬೆಂಗಳೂರನ್ನು ಕಟ್ಟಿ ಬೆಳೆಸಿದರು. ಬೆಂಗಳೂರು ನಗರ ಇಂದು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಎಲ್ಲ ಜಾತಿ, ಮತ, ಧರ್ಮ, ಪಂಥಗಳಿಗೆ ಸೇರಿದ ಜನರನ್ನು ಇದು ಒಳಗೊಂಡಿದೆ.
ಎಲ್ಲರನ್ನೂ ಎಲ್ಲವನ್ನೂ ಸದಾ ತನ್ನೆಡೆಗೆ ಬೆಂಗಳೂರು ಸೆಳೆಯುತ್ತಿರುವ ಕಾರಣ, ಇಲ್ಲಿಯ ಆಹ್ಲಾದಕರ ಹವಾಗುಣ. ಇದಕ್ಕೆ ಬಹುಮುಖ್ಯ ಕಾರಣ ಬೆಂಗಳೂರು ನಗರವನ್ನು ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುವುದು. ಬೆಂಗಳೂರು ಸಮುದ್ರ ಮಟ್ಟಕ್ಕಿಂತ ಮೂರು ಸಾವಿರ ಅಡಿಗಳ ಮೇಲಿದ್ದು ಸುತ್ತಲೂ ಬಹು ಸಂಖ್ಯೆಯ ಕೆರೆಗಳನ್ನು ಹೊಂದಿತ್ತು. ಇಂತಹ ಪ್ರಶಸ್ತವಾದ ಸ್ಥಳದಲ್ಲಿ ಬೆಂಗಳೂರನ್ನು ಸ್ಥಾಪಿಸಿದ ಕೀರ್ತಿ ಹಿರಿಯ ಕೆಂಪೇಗೌಡರಿಗೆ ಸಲ್ಲುತ್ತದೆ.
ಇತಿಹಾಸದಲ್ಲಿ ಹಿರಿಯ ಕೆಂಪೇಗೌಡ ಅಥವಾ 1ನೇ ಕೆಂಪೇಗೌಡರನ್ನು ಬೆಂಗಳೂರು ನಗರ ನಿರ್ಮಾತೃ ಎಂದೇ ಗುರುತಿಸಲಾಗುತ್ತದೆ. ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದರೆ ಅದಕ್ಕೆ ಕಾರಣ ಕೆಂಪೇಗೌಡರೇ.
ಅಂದು ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಇಂದು ವಿರಾಟ್ ಸ್ವರೂಪದಲ್ಲಿ ಬೆಳೆದು ಅವರು ಕಂಡ ಕನಸುಗಳನ್ನು ನನಸಾಗಿಸಿ ವಿಶ್ವಮಾನ್ಯತೆ ಪಡೆದುವುದರಿಂದ ನಗರದ ಬೆಳವಣಿಗೆಯ ಜೊತೆಜೊತೆಗೆ ಸ್ಥಾಪಕ ಕೆಂಪೇಗೌಡರ ಹೆಸರು ಕೂಡಾ ಜಗದ್ವಿಖ್ಯಾತವಾಗಿದೆ. ಬೆಂಗಳೂರು ಅಂದಿನ ಕಾಲದಲ್ಲೂ ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇಂದೂ ಸಹ ಅದು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇದಕ್ಕೆ ಕಾರಣ ಕೆಂಪೇಗೌಡರ ದೂರದರ್ಶಿತ್ವ. ಅವುಗಳಿಗೆ ಉದಾಹರಣೆ ಎಂಬಂತೆ ಇಂದು ಬೆಂಗಳೂರಿನ ಹೊರಭಾಗದಲ್ಲಿ ತಲೆಯೆತ್ತಿರುವ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗೌರವ ಪೂರ್ವಕವಾಗಿ ಅವರ ಹೆಸರನ್ನೇ ಇಡಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಬ್ಬಾಗಲಿನಲ್ಲೇ ಬೆಂಗಳೂರು ನಿರ್ಮಾತೃ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ವಿರಾಜಮಾನವಾಗಿ ನಿಂತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
