ಚಿಕ್ಕಬಳ್ಳಾಪುರ, (ನ.15): ಸಮಯ ಪ್ರಜ್ಞೆ ಮತ್ತು ತನ್ನ ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡೆದು ಕನ್ನಡ ನಾಡನ್ನು ರಕ್ಷಣೆ ಮಾಡಿರುವ ವೀರ ರಾಣಿ ಒನಕೆ ಓಬವ್ವ ರವರು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್ ಅವರು ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ವೀರ ಒನಕೆ “ಓಬವ್ವ ಜಯಂತಿ” ಅಂಗವಾಗಿ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸರ್ಕಾರದಿಂದ ಚೊಚ್ಚಲ ಬಾರಿಗೆ ಜಿಲ್ಲೆಯಾದ್ಯಂತ ವೀರ ಮಹಿಳೆ ಓಬವ್ವ ಜಯಂತಿಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಒನಕೆ ಓಬವ್ವ ಅವರ ಸಮಯಪ್ರಜ್ಞೆ, ಧೈರ್ಯ, ಪರಾಕ್ರಮ, ಸಾಹಸ ಮನೋಭಾವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ರಾಷ್ಟ್ರಕ್ಕೆ, ನಾಡಿಗೆ ನಿಸ್ವಾರ್ಥ ಉತ್ತಮ ನಾಗರಿಕರಾಗಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರವು ಯಾವುದೇ ಜಾತಿ ಧರ್ಮಕ್ಕೆ ಸೀಮಿತಗೊಳಿಸಿ ಜಯಂತಿ ಹಾಗೂ ದಿನಾಚರಣೆಗಳನ್ನು ಆಚರಿಸುವುದಿಲ್ಲ. ರಾಷ್ಟ್ರಕ್ಕೆ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆ, ತ್ಯಾಗ ಬಲಿದಾನ, ಸಾಧನೆಗಳು ಹಾಗೂ ನಿಸ್ವಾರ್ಥ ಸೇವೆಯನ್ನು ಗುರ್ತಿಸಿ ಸರ್ಕಾರದ ನಿಯಮಗಳಡಿ ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಅದೇ ರೀತಿ ಚೊಚ್ಚಲವಾಗಿ ಜಿಲ್ಲೆಯಲ್ಲಿ ಓಬವ್ವ ಜಯಂತಿ ಆಚರಣೆ ಸಾಕ್ಷಿಯಾಗಿದೆ ಎಂದರು.
ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಚಿಂತಕರಾದ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ ಅವರು ಮಾತನಾಡುತ್ತಾ, ಇತಿಹಾಸವನ್ನು ಮರೆತವರು ಇತಿಹಾಸನವನ್ನು ಸೃಷ್ಠಿಸಲಾರರು, ವಸ್ತುನಿಷ್ಠ ಚರಿತ್ರೆಯನ್ನು ಅರಿಯಬೇಕು. ಅದೇ ರೀತಿ ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಒನಕೆ ಓಬವ್ವ ಅವರ ಸಾಧನೆ ಮಹತ್ವದು. ಯುದ್ಧದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಸೈನಿಕರ ವಿರುದ್ಧ ಹೋರಾಡಿದ ಓಬವ್ವ ಅವರ ಆದರ್ಶಗಳು ನಮ್ಮೆಲ್ಲರಿಗೂ ಬೆಳಕಾಗಬೇಕು ಎಂದು ಹೇಳಿದರು.
ನಾಡಿನ ನೆಲ ಸಂಸ್ಕೃತಿಯ ವಸ್ತು ನಿಷ್ಠತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಭಾವನಾತ್ಮಕ ಚರಿತ್ರೆ ಬೇಡ. ಅಜ್ಞಾನವನ್ನು ಹೋಗಲಾಡಿಸಲು ಉನ್ನತ ಶಿಕ್ಷಣದಿಂದ ಸಾಧ್ಯವಾಗಿದ್ದು, ಪ್ರತಿಯೊಬ್ಬರೂ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನಾ ಒನಕೆ ಓಬವ್ವ ರವರ ಪಲ್ಲಕ್ಕಿ ಮತ್ತು ಸ್ತಬ್ದ ಚಿತ್ರಗಳು ಜಾನಪದ ಕಲಾ ತಂಡಗಳೊಂದಿಗೆ ನಗರದ ಜೈಭೀಮ್ ವಿದ್ಯಾರ್ಥಿನಿಲಯ ಮುಂಭಾಗದಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸಂಭ್ರಮದಿಂದ ಮೆರವಣಿಗೆ ಜರುಗಿತು. ನೂರಾರು ಸಮುದಾಯದ ಮುಖಂಡರು ಸಾರ್ವಜನಿಕರು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಲಕ್ಷ್ಮಣ್ ರೆಡ್ಡಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪಿ.ಎಸ್.ರಾಜೇಶ್ವರಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡರಾದ ಸುಧಾ ವೆಂಕಟೇಶ್, ಜಿಲ್ಲಾ ಸಂಚಾಲಕರಾದ ಬಿ.ವಿ.ಆನಂದ್, ಛಲವಾದಿ ಮಹಾಸಭಾ ರಾಜ್ಯ ಸಮಿತಿಯ ನಿರ್ದೇಶಕರಾದ ಎಚ್.ವಿ.ಕೃಷ್ಣಪ್ಪ, ಜಿಲ್ಲಾ ಸಮಿತಿಯ ಅಧ್ಯಕ್ಷರಾದ ರಾಮಕೃಷ್ಣ, ಉಪಾಧ್ಯಕ್ಷರಾದ ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟಕೃಷ್ಣ, ಸಂಘಟನಾ ಕಾರ್ಯದರ್ಶಿ ಎಚ್.ಎಮ್.ಮುನಿಕೃಷ್ಣ, ಜಿಲ್ಲಾ ಖಜಾಂಚಿ ನರಸಿಂಹಮೂರ್ತಿ, ಚಿಂತಾಮಣಿ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಮಾಳಪಲ್ಲಿ ಮಂಜುನಾಥ್, ಜಿಲ್ಲಾ ಸಮತಾ ಸೈನಿಕ ದಳದ ಅಧ್ಯಕ್ಷರಾದ ವೆಂಕಟರಮಣ, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ಎಮ್.ವೇಣುಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

