ದೊಡ್ಡಬಳ್ಳಾಪುರ, (ನ.17): ಮನೆಯ ದಾಖಲೆಯು ನಗರಸಭೆಯಲ್ಲಿ ಖಾತೆಯಾಗಿರುವ ಒಂದು ನಕಲು ಪ್ರತಿ ನೀಡುವಂತೆ ಮೂರು ತಿಂಗಳಿಂದಲು ಕೇಳುತ್ತಲೇ ಬಂದರು ಕಚೇರಿಯಲ್ಲಿ ದೊರೆಯುತ್ತಿಲ್ಲ ಎಂದು ಕಾರಣ ಹೇಳುತ್ತಲೇ ಬಂದರು. ಆದರೆ ಮಧ್ಯವರ್ತಿಯೊಬ್ಬರು ಹಣ ನೀಡಿದ ಅರ್ಧ ಗಂಟೆಯಲ್ಲೇ ನಕಲು ಪ್ರತಿ ದೊರೆತಿದೆ. ಇಂತಹ ಘಟನೆಗಳಿಂದಾಗಿ ಸಾರ್ವಜನಿಕರಲ್ಲಿ ಸದಸ್ಯರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡದೇ ಇರಲು ಹೇಗೆ ಸಾಧ್ಯ ಎಂದು ನಗರಸಭೆ ಸದಸ್ಯೆ ಪ್ರಭಾನಾಗರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ ಘಟನೆ ಗುರುವಾರ ನಗರಸಭೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರಭಾನಾಗರಾಜ್, ನಗರಸಭೆಯಲ್ಲಿ ಸದಸ್ಯರ ಮಾತುಗಳಿಗೆ ಬೆಲೆಯೇ ಇಲ್ಲದಾಗಿದೆ. ಸಾರ್ವಜನಿಕರು ಹೇಳುವ ಸಣ್ಣ ಪುಟ್ಟ ಕೆಲಸಗಳನ್ನು ಸದಸ್ಯರು ಮಾಡಿಸಿಕೊಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಖಾತಾ ನಕಲು ಪ್ರತಿ ನೀಡಲು ಲಂಚ ಪಡೆದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಮಹಿಳಾ ಸದಸ್ಯರು ಮಾಡುತ್ತಿರುವ ಆರೋಪ ಗಂಭೀರವಾಗಿದೆ. ಈ ಬಗ್ಗೆ ಪೌರಾಯುಕ್ತರು, ಅಧ್ಯಕ್ಷರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಸದಸ್ಯ ಟಿ.ಎನ್.ಪ್ರಭುದೇವ್, ನಗರಸಭೆ ಕಚೇರಿ ಕಟ್ಟಡ ಅಲಂಕಾರವಾಗಿದ್ದರಷ್ಟೇ ಸಾಲದು, ಒಳಗೆ ನಡೆಯುವ ಆಡಳಿತವು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಪಾರದರ್ಶಕವಾಗಿರಬೇಕು ಎಂದರು.
ನಗರದ ಹೆದ್ದಾರಿಗಳು ಹಾದು ಹೋಗಿರುವ ಪ್ರಮುಖ ವೃತ್ತಗಳಲ್ಲಿ ಬೃಹತ್ ಜಾಹಿರಾತು ಫಲಕಗಳನ್ನು ಅಳವಡಿಸಲಾಗಿದೆ. ಹಾಗೆಯೇ ನಗರದ ರಸ್ತೆಗಳಲ್ಲೂ ಯಾವುದೇ ರೀತಿಯ ಅನುಮತಿಯು ಇಲ್ಲದೆ ಪ್ರಚಾರದ ಫಲಕಗಳನ್ನು ಆಳವಡಿಸಲಾಗಿದೆ. ಆದರೆ ನಗರಸಭೆಗೆ ಮಾತ್ರ ಒಂದು ರೂಪಾಯಿ ಜಾಹಿರಾತು ಶುಲ್ಕ ಬರುತ್ತಿಲ್ಲ. ಈ ಹಣವೆಲ್ಲಾ ಎಲ್ಲಿ ಹೋಗುತ್ತಿದೆ, ಏಕೆ ಇದುವರೆಗೂ ವಸೂಲಿ ಮಾಡದೇ ಇರುವುದು ಎಂದು ಪ್ರಶ್ನಿಸಿದ ಸದಸ್ಯ ಎಂ.ಮಲ್ಲೇಶ್, ಈ ವಿಷಯದ ಬಗ್ಗೆ ಮೂರು ತಿಂಗಳ ಹಿಂದೆ ನಡೆದ ಸಭೆಯಲ್ಲಿಯೇ ಚರ್ಚಿಸಿದ್ದರು ಇದುವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಬ್ಯಾನರ್ ಹಾಗೂ ಬೃಹತ್ ಫಲಕಗಳನ್ನು ಹಾಕಿರುವವರಿಂದ ಶುಲ್ಕ ವಸೂಲಿ ಮಾಡಲೇಬೇಕು ಎಂದು ಆಗ್ರಹಸಿದರು.
ನಗರದಲ್ಲಿನ ಯಾವುದೇ ವಾರ್ಡ್ಗಳಲ್ಲೂ ಸ್ವಚ್ಛತೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ. ಈ ಬಗ್ಗೆ ಪರಿಸರ ವಿಭಾಗದ ಅಧಿಕಾರಿಗಳು ನಿಗಾವಹಿಸಬೇಕಿದೆ ಎಂದು ಸದಸ್ಯ ನಾಗರಾಜ್ ಹೇಳಿದರು.
ಪೌರಾಯುಕ್ತ ಶಿವಶಂಕರ್ ಮಾತನಾಡಿ, ಪ್ರಚಾರ ಫಲಕಗಳನ್ನು ಅಳವಡಿಸಿರುವ ಬಗ್ಗೆ ತುರ್ತಾಗಿ ಸರ್ವೆ ನಡೆಸಿ ಶುಲ್ಕ ವಸೂಲಿ ಮಾಡಲಾಗದು. ಖಾತಾ ನಕಲು ಪ್ರತಿ ನೀಡುವಲ್ಲಿ ಆಗಿರುವ ಲೋಪವನ್ನು ಸರಿಪಡಿಸಿ, ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.
ಸಮಪರ್ಕ ಒಳಚರಂಡಿ ನಿರ್ವಹಣೆಗೆ ಸದಸ್ಯರ ಒತ್ತಾಯ: ನಗರದಲ್ಲಿ ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೊಸ ಸಂಪರ್ಕಗಳು ತ್ವರಿತವಾಗಿ ಆಗುತ್ತಿಲ್ಲ. ಮ್ಯಾನ್ ಹೋಲ್ಗಳು ತುಂಬಿ ಹರಿಯುತ್ತಿವೆ ಇನ್ನೆಲ್ಲಿ ಹೊಸ ಸಂಪರ್ಕ ಪಡೆಯುವುದು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನಾಗರಕೆರೆ ಅಂಗಳದಲ್ಲಿ ಅವೈಜ್ಞಾನಿಕವಾಗಿ ಚೇಂಬರ್ಗಳನ್ನು ನಿರ್ಮಿಸಲಾಗಿದೆ. ನಗರದಲ್ಲಿ ಗುಂಡಿ ರಸ್ತೆಗಳು ಹೆಚ್ಚಾಗಿದ್ದು, ಜನರು ಓಡಾಡುವುದೇ ಕಷ್ಟವಾಗಿದೆ ಎಂದು ನಗರಸಭೆ ಸದಸ್ಯ ಆನಂದ್ ದೂರಿದರು.
ಆನಂದ್ ಅವರ ದೂರಿಗೆ ದನಿ ಗೂಡಿಸಿದ ಸದಸ್ಯೆ ಹಂಸವೇಣಿ, ಅಗೆದ ರಸ್ತೆಗಳನ್ನು ಮುಚ್ಚುತ್ತಿಲ್ಲ. ಇದರಿಂದಾಗಿ ರಸ್ತೆಗಳು ಅವ್ಯವಸ್ತೆಯಿಂದ ಕೂಡಿವೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಮನೆ ಕಂದಾಯ,ನೀರಿನ ಕಂದಾಯಗಳು ಸರಿಯಾಗಿ ವಸೂಲಾಗುತ್ತಿಲ್ಲ.ಒಳ ಚರಂಡಿ ಸಂಪರ್ಕಗಳಲ್ಲಿ ರೂ75 ಲಕ್ಷ ವೆಚ್ಚ ಮಾಡಿ, ಬರೀ ರೂ26 ಲಕ್ಷ ತೆರಿಗೆ ವಸೂಲು ಮಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಉತ್ತರಿಸಬೇಕಿದೆ ಎಂದು ಸದಸ್ಯ ಎಚ್.ಎಸ್.ಶಿವಶಂಕರ್ ಹೇಳಿದರು.
ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ, ನಗರದಲ್ಲಿ 7800 ಯುಜಿಡಿ ಸಂಪರ್ಕಗಳಿವೆ. ಇದರಲ್ಲಿ ಸುಮಾರು 3 ಸಾವಿರ ಅನಧಿಕೃತವಾಗಿವೆ. ಇವುಗಳನ್ನು ಅಧಿಕೃತಗೊಳಿಸಬೇಕು. ನಿರ್ವಹನಾ ಶುಲ್ಕ ಕಟ್ಟಿದವರಿಗೆ ಸಂಪರ್ಕ ಪಡೆದಾಗಿನಿಂದ ಇಲ್ಲಿಯವರೆಗೆ ಆಗಿರುವ ಮೊತ್ತವನ್ನು ವಸೂಲು ಮಾಡಬೇಕು. ನೀರಿನ ಶುಲ್ಕದೊಂದಿಗೆ ಸಹ ವಸೂಲು ಮಾಡಬಹುದಾಗಿದೆ. ಅಮೃತ್-2 ಯೋಜನೆಯಡಿ ಮನೆ ಮೆನೆ ನೀರಿನ ಸಂಪರ್ಕ ಕಲ್ಪಿಸಲು ರೂ8 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಬಗ್ಗೆ ಸರ್ವೆ ನಡೆಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಲೆಕ್ಕಾಧಿಕಾರಿ ನಂದೀಶ್ ಮಾತನಾಡಿ, ನಗರಸಭೆ ತೆರಿಗೆ ಸಂಗ್ರಹಕ್ಕೆ ಜಿ.ಸೇವಾದೊಂದಿಗೆ ಜಂಟಿಯಾಗಿ ತೆರಿಗೆ ಸಂಗ್ರಹ ಮಾಡುವ ಯೋಜನೆಯಿದೆ. ನಾಗರಿಕರು ಜಿ.ಸೇವಾದಲ್ಲಿಯೂ ಪಾವತಿಸಬಹುದಾಗಿದೆ. ಇದು ನಗರಸಭೆ ಖಾತೆಗೆ ಜಮಾ ಆಗಲಿದೆ. ಪ್ರತಿ ವಾರ್ಡ್ನಲ್ಲಿ ನಗರಸಭೆ ಸಿಬ್ಬಂದಿ ತೆರಿಗೆ ವಸೂಲು ಮಾಡಲು 10 ದಿನಗಳ ಶಿಬಿರ ಮಾಡಬೇಕಿದೆ ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಫರ್ಹಾನತಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮೀ ಸೇರಿದಂತೆ ನಗರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
