ಧಾರವಾಡ, (ನ.22): ಧಾರವಾಡ ಜಿಲ್ಲೆ ವಿಭಜನೆ ಆದಾಗಿನಿಂದ ಜಿಲ್ಲೆಯ ಪೊಲೀಸ್ರಿಗೆ ಫೈರಿಂಗ್ ತರಬೇತಿಗಾಗಿ ಒಂದು ಪ್ರತ್ಯೇಕ ಮೈದಾನವಿಲ್ಲದೇ ಅಭ್ಯಾಸಕ್ಕಾಗಿ ಹಾವೇರಿಗೆ ಹೋಗಬೇಕಿತ್ತು. ಈ ಸಮಸ್ಯೆಗೆ ಈಗ ಪರಿಹಾರ ಲಭಿಸಿದ್ದು, ಉತ್ತಮವಾದ ಗುಂಡು ಗುರಿ (ಫೈರೀಂಗ್) ಅಭ್ಯಾಸಕ್ಕೆ ಜಿಲ್ಲೆಯಲ್ಲಿ ಮೈದಾನ ಸಿದ್ಧವಾಗಿದೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಗಂಜಿಗಟ್ಟಿ ಗ್ರಾಮ ಹುದ್ದೆಯಲ್ಲಿರುವ ಜಿಲ್ಲಾ ಪೊಲೀಸ್ ಇಲಾಖೆ ಮಾಲೀಕತ್ವದ ಸುಮಾರು ಹತ್ತು ಎಕರೆ ಜಮೀನದಲ್ಲಿ ಗುಂಡು ಗುರಿ (ಫೈರಿಂಗ್) ಅಭ್ಯಾಸಕ್ಕೆ ಸುಸಜ್ಜಿತ ಮೈದಾನ ಸಿದ್ಧಗೊಳಿಸಲಾಗಿದೆ.

ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಎನ್.ಸತೀಶಕುಮಾರ ಫೈರಿಂಗ್ ರೇಂಜ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಪ್ರತಿ ವರ್ಷ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗುಂಡು ಗುರಿ ಫೈರಿಂಗ್ ಅಭ್ಯಾಸ ಕಡ್ಡಾಯವಾಗಿದೆ. ಫೈರಿಂಗ್ ಅಭ್ಯಾಸದಿಂದ ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಗುಂಡು ಗುರಿ ನಿಖರವಾಗುತ್ತದೆ ಎಂದರು. ಪೊಲೀಸ್ ಸಿಬ್ಬಂದಿಗಳಿಗೆ ಸರಕಾರದ ಎಲ್ಲ ಸೌಲಭ್ಯಗಳು, ಜೀವನ ಭದ್ರತೆಗಳನ್ನು ತಲುಪಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತಮ್ಮ ನಿಗಧಿತ ಕಾರ್ಯಗಳನ್ನು ತಪ್ಪದೇ ಮಾಡಬೇಕು. ಸಾರ್ವಜನಿಕರೊಂದಿಗೆ ಸಂಯಮದಿಂದ ಜನಸ್ನೇಹಿ ಆಗಿ ವರ್ತಿಸಿ, ಇಲಾಖೆಯ ವಿಶ್ವಾಸರ್ಹತೆ ಮತ್ತು ನಂಬಿಕೆಯನ್ನು ಸಾರ್ವಜನಿಕ ವಲಯದಲ್ಲಿ ಹೆಚ್ಚಿಸಬೇಕೆಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧಾರವಾಡ ಜಿಲ್ಲೆ ಪ್ರತ್ಯೇಕವಾದ ನಂತರ ಫೈರಿಂಗ್ ಅಭ್ಯಾಸಕ್ಕೆ ಜಿಲ್ಲೆಯಲ್ಲಿ ಸ್ಥಳವಿಲ್ಲದೆ ಸ್ವಲ್ಪಮಟ್ಟಿಗೆ ತೊಂದರೆ ಆಗಿತ್ತು. ಆದರೆ ಈಗ ಇಲಾಖೆ ಮಾಲಿಕತ್ವದ ಗಂಜಿಗಟ್ಟಿ ಗ್ರಾಮ ಸಮೀಪದ ಸುಮಾರು ಹತ್ತು ಎಕರೆ ಜಮೀನದಲ್ಲಿ ಗುಂಡು ಗುರಿ ಫೈರಿಂಗ್ ಅಭ್ಯಾಸಕ್ಕೆ ಮೈದಾನ ಸಿದ್ದಗೊಳಿಸಲಾಗಿದೆ.
ಸಣ್ಣ ಸಣ್ಣ ಗುಡ್ಡ, ಕುರಚಲು ಗಿಡಗಂಟಿಗಳಿಂದ ಕೂಡಿದ್ದ ಈ ಪ್ರದೇಶವನ್ನು ಅಗತ್ಯವಿರುವಷ್ಟು ಸಮತಟ್ಟುಗೊಳಿಸಲಾಗಿದೆ. ಫೈರಿಂಗ್ ಅಭ್ಯಾಸಕ್ಕೆ ಅನುಕೂಲವಾಗುವಂತೆ ತಗ್ಗು, ಎತ್ತರದ ಸ್ಥಳಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಜನರ ಓಡಾಟ, ದನ ಮೇಯಿಸುವುದು, ಇತರ ಕಾರ್ಯ ಚಟುವಟಿಕೆಗಳನ್ನು ನಿರ್ಭಂಧಿಸಲಾಗಿದೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಫೈರಿಂಗ್ ತರಬೇತಿಗೆ ಉತ್ತಮ ಸ್ಥಳವಾಗಿ ರೂಪಿಸಲಾಗಿದೆ.
ಇದರಿಂದ ಜಿಲ್ಲಾ ಪೊಲೀಸ್ ಇಲಾಖೆ ಜೊತೆಗೆ ಫೈರಿಂಗ್ ತರಬೇತಿ ಅಗತ್ಯವಿರುವ ಮಹಾನಗರ ಪೊಲೀಸ್, ಪೊಲೀಸ್ ತರಬೇತಿ ಶಾಲೆ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಅರಣ್ಯ ತರಬೇತಿ ಅಕಾಡೆಮಿ, ಅಬಕಾರಿ ಇಲಾಖೆ, ಎನ್.ಸಿ.ಸಿ. ಸೇರಿದಂತೆ ಫೈರಿಂಗ್ ತರಬೇತಿ ಅಭ್ಯಾಸ ಅಗತ್ಯವಿರುವ ಇತರ ಇಲಾಖೆಗಳಿಗೂ ಈ ಮೈದಾನ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಎಂ.ಬಿ.ಸುಂಕದ, ಚಂದ್ರಕಾಂತ ಪೂಜಾರ, ಜಿ.ಸಿ.ಶಿವಾನಂದ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ಪೊಲೀಸ್ ಪೇದೆಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
