ದೊಡ್ಡಬಳ್ಳಾಪುರ, (ನ.26): ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತೂಬಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಶಿವಶಂಕರ್, ಇಂದಿನ ಯುವ ಸಮುದಾಯಕ್ಕೆ ಸಂವಿಧಾನದ ಮಹತ್ವವಾಗಲೀ ಅದರಲ್ಲಿ ಸಾಮಾಜಿಕ ನ್ಯಾಯದ ಬೇರುಗಳಿವೆ ಎನ್ನುವ ಅರಿವಿಲ್ಲ. ಆದ್ದರಿಂದ ಯುವ ಜನಕ್ಕೆ ಸಂವಿಧಾನದ ಅರಿವು ಅವಶ್ಯಕ, ಯುವಪೀಳಿಗೆ ಸಂವಿಧಾನವನ್ನು ಅರಿತು ಇದರ ಆಶಯಗಳು ಪಾಲನೆ ಮಾಡಬೇಕು. ಸ್ವಾತಂತ್ರ್ಯ, ಸಮಾನತೆ, ಬಾತೃತ್ವದ ಸಂವಿಧಾನದ ಕೇಂದ್ರ ಚಿಂತನೆಯಾಗಿದ್ದು ಇದನ್ನಾಧರಿಸಿ ಸಂವಿಧಾನ ರಚನೆಯಾಗಿದೆ. ಎಲ್ಲರಿಗೂ ಮತದಾನದ ಹಕ್ಕು ನೀಡುವುದರ ಮೂಲಕ ಅಂಬೇಡ್ಕರ್ ಸಂವಿಧಾನ ಬದ್ಧ ರಾಜಕೀಯ ಸಮಾನತೆ ನೀಡಿದ್ದಾರೆ ಎಂದರು.
ತೂಬಗೆರೆ ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಉದಯ್ ಆರಾಧ್ಯ ಮಾತನಾಡಿ, ಸಂವಿಧಾನ ಎಲ್ಲ ಸಮಾಜಗಳ ಏಳಿಗೆಗೆ ಕಾರಣೀಭೂತವಾಗಿದೆ. ದೇಶವನ್ನು ಮುನ್ನಡೆಸಲು ಪ್ರೇರಣೆ ನೀಡುವ ಮಾರ್ಗದರ್ಶಿ ಕೃತಿಯಾಗಿದೆ. ಸಂವಿಧಾನದಲ್ಲಿ ಅಡಕವಾಗಿರುವ ಆಶಯ ತಿಳಿದು, ಅವುಗಳ ಅನುಷ್ಠಾನಕ್ಕಾಗಿ ಶ್ರಮಿಸಬೇಕಿದೆ’
ಸಂವಿಧಾನ ಬದಲಾವಣೆ ಪ್ರಯತ್ನ ಪ್ರಗತಿಗೆ ಪೂರಕವಲ್ಲ. ನಮ್ಮದು ಜಾತ್ಯತೀತ ರಾಷ್ಟ್ರ. ಇದನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿ ಸಮಷ್ಟಿಯ ಹಿತದೃಷ್ಟಿಯಿಂದ ಸಂವಿಧಾನ ರಚಿಸಲಾಗಿದೆ. ಹಾಗಾಗಿ, ಸಂವಿಧಾನ ಎಂಬುದು ಒಂದು ಮೌಲಿಕ ಗ್ರಂಥ ಎಂಬುದನ್ನು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂವಿಧಾನ ಪ್ರತಿಜ್ಞೆ ಬೋಧಿಸಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಸಂವಿಧಾನ ಕುರಿದಂತೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ತೂಬಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಸರಸ್ವತಿ ಪುಷ್ಪಾವತಿ ಕೃಷ್ಣಮೂರ್ತಿ, ಮಹೇಶ್, ಸುಬ್ರಹ್ಮಣ್ಯ ತೂಬಗೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

