ದೊಡ್ಡಬಳ್ಳಾಪುರ, (ನ.29): ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್ ಚುನಾವಣೆ ಎದುರಿಸಲು ಈಗಾಗಲೇ ಭರ್ಜರಿ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಮಂಗಳವಾರ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ಬೆಳಗ್ಗೆ 10ಗಂಟೆಗೆ ದೇವನಹಳ್ಳಿಯಿಂದ ತಾಲೂಕಿನ ಕೊನಘಟ್ಟ ಗ್ರಾಮಕ್ಕೆ ರಥಯಾತ್ರೆ ಬರಲಿದೆ.
ಕಾರ್ಯಕರ್ತರ ಸಂಭ್ರಮ: ಜೆಡಿಎಸ್ ಪಕ್ಷಕ್ಕೆ ಪ್ರಾಣ ಕೊಡುವಂತಹ ಕಾರ್ಯಕರ್ತರಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ತಿಳಿದಿರುವ ಸತ್ಯ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಬಲಿಷ್ಠವಾದ ಕಾರ್ಯಕರ್ತರ ಪಡೆಯಿದೆ. ಆದರೆ ಬಣ ರಾಜಕೀಯಕ್ಕೆ ಬೇಸತ್ತು ಮೌನಕ್ಕೆ ಶರಣಾಗಿದ್ದರು. ಆದರೆ ಯಾವಾಗ ಬಣ ರಾಜಕೀಯಕ್ಕೆ HDK ಚಾಟಿ ಬೀಸಿದರೋ ಕಾರ್ಯಕರ್ತರಲ್ಲಿ ಮತ್ತೆ ಆಸಕ್ತಿ ಚುರುಕುಗೊಂಡಿದ್ದು, ತಾಲೂಕಿನ ಗ್ರಾಮಗಳಲ್ಲಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಹಬ್ಬದ ರೀತಿ ಸಿದ್ಧತೆ ನಡೆಸುತ್ತಿದ್ದಾರೆ.
ಪ್ರಮುಖ ಗ್ರಾಮಗಳಲ್ಲಿ ತಳಿರು, ತೋರಣ ಕಟ್ಟಲಾಗುತ್ತಿದ್ದು, ಕಲಾ ತಂಡಗಳೊಂದಿಗೆ, ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಲು ಸಿದ್ದತೆ ಸಾಗಿದೆ.
ಮತ್ತೊಂದೆಡೆ ತಾಲೂಕಿನಲ್ಲಿ ಬಣಗಳಾಗಿ ಚೂರಾಗಿದ್ದ ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಅವರ ಕಟ್ಟುನಿಟ್ಟಿನ ಆದೇಶಕ್ಕೆ ಬೆದರಿ ಒಟ್ಟಾಗಿದ್ದಾರೆಂದು ಪೋಸ್ ನೀಡಿದ್ದಾರೆ, ಯಾರೇ ಅಭ್ಯರ್ಥಿಯಾದರೂ ಒಂದಾಗಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಒಗ್ಗಟ್ಟಿನ ಮಂತ್ರ ಪಡಿಸಿದ್ದಾರೆ. ಅಲ್ಲದೆ ಇದು ಸೀಸನ್ ಒಗ್ಗಟ್ಟಲ್ಲ, ಕಾಯಂ ಒಗ್ಗಟ್ಟು ಎಂಬ ಡೈಲಾಗ್ ಬೇರೆ ಎಸೆದಿದ್ದಾರೆ.
ಆದರೆ ಈ ಡೈಲಾಗ್ ಎಷ್ಟು ಸತ್ಯ ಎಂದು ಸೂಕ್ಷ್ಮವಾಗಿ ಗಮನಿಸಿದರೆ, ಮುಖಂಡರ ಒಗ್ಗಟ್ಟೆಂಬುದು ಮೇಲ್ನೋಟಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಕುಮಾರಸ್ವಾಮಿ ಅವರ ಗಮನ ಸೆಳೆಯಲು, ತಮ್ಮ ಬೆಂಬಲಿಗರ ಶಕ್ತಿ ಪ್ರದರ್ಶನ ನಡೆಸಲು ತಾ ಮುಂದು, ನಾ ಮುಂದು ಎಂದು ಮುಗಿಬಿದ್ದಿರುವುದು ಕಂಡುಬರುತ್ತಿದೆ.
ದೊಡ್ಡಬಳ್ಳಾಪುರ ಪಂಚರತ್ನ ರಥಯಾತ್ರೆಯ ಮಾರ್ಗ: ಕೊನಘಟ್ಟ, ರಾಜಘಟ್ಟ, ಕಂಟನಕುಂಟೆ, ಹೊಸಹಳ್ಳಿಯಲ್ಲಿ ಮೆರವಣಿಗೆ ಆರೂಢಿಯಲ್ಲಿ ಸಾರ್ವಜನಿಕ ಸಭೆ.
ಊಟದ ನಂತರ ಸಾಸಲು, ಹುಲಿಕುಂಟೆ, ಚಿಕ್ಕಬೆಳವಂಗಲ, ದೊಡ್ಡಬೆಳವಂಗಲ, ದೊಡ್ಡಬಳ್ಳಾಪುರದಲ್ಲಿ ಸಾರ್ವಜನಿಕ ಸಭೆ.
ನಂತರ ಬಾಶೆಟ್ಟಿಹಳ್ಳಿ, ಅರಳುಮಲ್ಲಿಗೆ, ಹಾದ್ರಿಪುರ, ಕಾಡನೂರು, ಹೊನ್ನಾದೇವಿಪುರ, ಚೆನ್ನಾದೇವಿ ಪುರ, ಮಧುರೆಯಲ್ಲಿ ಗ್ರಾಮಸಭೆ ಮತ್ತು ಗ್ರಾಮ ವಾಸ್ತವ್ಯವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಲಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

