ದೊಡ್ಡಬಳ್ಳಾಪುರ, (ಡಿ.02): ರೈತರು ತಾಂತ್ರಿಕತೆಗಳ ಮಹತ್ವವನ್ನು ಅರಿತು, ರಾಗಿ ಬೆಳೆಯಲ್ಲಿ ಅಳವಡಿಸಿಕೊಂಡಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಡಿ.ರಾಜೇಶ್ವರಿ ತಿಳಿಸಿದರು.
ತಾಲೂಕಿನ ತೂಬಗೆರೆ ರೈತ ಸಂಪರ್ಕ ಕೇಂದ್ರ ವತಿಯಿಂದ, ಹಾಡೋನಹಳ್ಳಿ ಗ್ರಾಮದ ರೈತ ಅಂಬರೀಶ್ ಅವರ ರಾಗಿ ಬೆಳೆಯ ತಾಕಿನಲ್ಲಿ ಆಯೋಜಿಸಿದ್ದ, ರಾಗಿ ಬೆಳೆಯಲ್ಲಿ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಗಿ ಬೆಳೆಯಲ್ಲಿ ಬಿತ್ತನೆಯಿಂದ ಕೊಯ್ಲು ಮಾಡಿ, ಸಂಸ್ಕರಣೆ ಮಾಡುವರೆಗೆ ವಿವಿಧ ತಾಂತ್ರಿಕತೆಗಳು ಅಭಿವೃದ್ಧಿಗೊಂಡಿವೆ. ರೈತರು ಸಾಮಾನ್ಯವಾಗಿ ಎಂ.ಆರ್-1, ಎಂ.ಆರ್-6 ರಾಗಿಯನ್ನು ಜೂನ್- ಜುಲೈನಲ್ಲಿ ಬಿತ್ತನೆ ಮಾಡುತ್ತಾರೆ. ಹಾಗೆಯೇ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಸಹ ದೀರ್ಘಾವಧಿ ತಳಿಗಳಾದ ಎಂ.ಆರ್ ಜಾತೀಯ ರಾಗಿಯನ್ನು ಬಿತ್ತನೆ ಮಾಡಲು ಮುಂದಾಗುತ್ತಾರೆ. ಇದರಿಂದ ಬೆಳೆವಣಿಗೆ ಸರಿಯಾಗಿ ಆಗದೆ ಇಳುವರಿ ಕಡಿಮೆಯಾಗುತ್ತದೆ. ಕಟಾವಿನ ಸಮಯದಲ್ಲಿ ಮಳೆ ಸಿಲುಕಿ ರೈತರಿಗೆ ನಷ್ಟವಾಗುತ್ತದೆ. ಇದನ್ನು ತಪ್ಪಿಸಲು ಮಧ್ಯಮಾವಧಿ ತಳಿಯಾದ ಎಂ.ಎಲ್-365ನ್ನು ಆಗಸ್ಟ್ ಕೊನೆಯ ವಾರದಿಂದ, ಸೆಪ್ಟೆಂಬರ್ ಮೊದಲನೇ ವಾರದವರೆಗೆ ಬಿತ್ತನೆ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ದೂರು ನೀಡಿ: ಇದೇ ವೇಳೆ ರಾಗಿ ಕಟಾವು ಯಂತ್ರಕ್ಕೆ ಬಾಡಿಗೆ ನಿಗದಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು, ಪ್ರತಿ ಗಂಟೆಗೆ ದೊಡ್ಡ ಕಟಾವು ಯಂತ್ರಕ್ಕೆ ರೂ.3350 ಹಾಗೂ ಕ್ಲಾಸ್ / ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ರೂ.2700 ನಿಗದಿಯಾಗಿದ್ದು, ಹೆಚ್ಚಿನ ದರಕ್ಕೆ ಬೇಡಿಕೆ ಇಟ್ಟಲ್ಲಿ ಕೃಷಿ ಇಲಾಖೆಗೆ ದೂರು ನೀಡಬಹುದೆಂದು ತಿಳಿಸಿದರು.
ಅರ್ಕಾವತಿ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ನಾಗರಾಜು ಮಾತನಾಡಿ, ರೈತ ಉತ್ಪಾದಕ ಕಂಪನಿಗಳ ರಚನೆಯಿಂದ ರೈತರಿಗಾಗುವ ಅನೂಕೂಲಗಳ ಬಗ್ಗೆ ತಿಳಿಸಿದರು. ಪ್ರಸ್ತುತ ಕೃಷಿಕರಿಗೆ ರಸಗೊಬ್ಬರ, ಟಾರ್ಪಲಿನ್, ಕೀಟನಾಶಕ, ಡ್ರಿಪ್ ಪೈಪ್ಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರಿಂದ ಸಾವಯವ ಪದಾರ್ಥಗಳು, ತರಕಾರಿಗಳು, ಸಿರಿಧಾನ್ಯಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ:ದರ್ಶಿನಿ ಮಾತನಾಡಿ, ರೈತರು ರಾಗಿ ಬೆಳೆಯುವ ಪದ್ದತಿಗಳು, ವಿವಿಧ ತಳಿಗಳು, ಕಳೆ ನಿರ್ವಹಣೆ, ಪೀಡೆ ಮತ್ತು ಕೀಟ ನಿರ್ವಹಣೆಯ ತಾಂತ್ರಿಕತೆಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ವಿವರಿಸಿದರು.
ಇದೇ ವೇಳೆ ಪ್ರಗತಿಪರ ರೈತ ಭಾಸ್ಕರ್ ಮಾತನಾಡಿ, ರೈತರೂ ಕೃಷಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುವ ಬದಲು, ಸಾವಯವ ಗೊಬ್ಬರಗಳನ್ನು ತಾವೇ ತಯಾರಿಸಿಕೊಂಡು ಬಳಸುವ ವಿಧಾನಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ನವಿನ್ಕುಮಾರ್, ತಾಂತ್ರಿಕ ಸಹಾಯಕರಾದ ಪರೂಷಿನಿ, ಮುಕುಂದ, ರಾಮಚಂದ್ರಪ್ಪ, ಹಾಡೋನಹಳ್ಳಿ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಅಶೋಕ್, ಭಾಸ್ಕರ್, ಶ್ರೀನಿವಾಸ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

