ದೊಡ್ಡಬಳ್ಳಾಪುರ, (ಡಿ.09): ಬೀದಿ ಬದಿಯಲ್ಲಿನ ವ್ಯಾಪಾರ ವೃದ್ಧಿ ಮಾಡುವುದಾಗಿ ಮೋಡಿ ಮಾಡಿದ ವಂಚಕನ ಕೈಚಳಕದಿಂದ, ವೃದ್ಧೆಯೋರ್ವರು 70 ಗ್ರಾಂ ಚಿನ್ನದ ಸರವನ್ನ ಕಳೆದುಕೊಂಡು ಪರದಾಡುವ ಸ್ಥಿತಿ ಎದುರಾಗಿದೆ.

ನಗರದ ತಿಗಳರಪೇಟೆಯ ನಿವಾಸಿ 72 ವರ್ಷದ ಜಯಮ್ಮ ವಂಚಕನ ಮೋಡಿಗೆ 70 ಗ್ರಾಂ ಚಿನ್ನದ ಸರವನ್ನ ಕಳೆದುಕೊಂಡ ವೃದ್ಧೆಯಾಗಿದ್ದಾರೆ. 40 ವರ್ಷಗಳ ಹಿಂದೆ ಆಕೆಯ ಪತಿ ಕೊಡಿಸಿದ ಚಿನ್ನದ ಸರ ಅದಾಗಿದ್ದು, ತನ್ನ ಕೊನೆಗಾಲದಲ್ಲಿ ಚಿನ್ನದ ಸರ ಆಸರೆಯಾಗುತ್ತೆ ಎಂಬ ನಂಬಿಕೆಯಲ್ಲಿದ್ದರು ಆ ವೃದ್ಧೆ, ಆದರೆ. ಆಕೆಯ ಪಾಲಿಗೆ ಆಸರೆಯಾಗಿದ್ದ ಚಿನ್ನದ ಸರ ವಂಚಕನ ಪಾಲಾಗಿ ಆಕೆಯ ಕಣ್ಣೀರಿಗೆ ಕಾರಣವಾಗಿದೆ.

ವೃದ್ದೆ ಜಯಮ್ಮ ಅಳಿಯ ಮಗಳ ಜೊತೆ ವಾಸವಾಗಿದ್ದಾರೆ, ಅಳಿಯ ಆಸ್ಪತ್ರೆಯ ಮುಂಭಾಗದಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಾರೆ, ಡಿಸೆಂಬರ್ 6ರಂದು ಅಳಿಯ ಆಸ್ಪತ್ರೆಗೆ ಹೋಗಬೇಕಿದ್ದರಿಂದ, ಅಂದು ಅಂಗಡಿಯನ್ನು ಜಯಮ್ಮ ನೋಡಿಕೊಳ್ಳುತ್ತಿದ್ದರು, ಬೆಳಗ್ಗೆ 11 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ಬಂದಿದ್ದು, ವೃದ್ದೆಯನ್ನ ಮಾತನಾಡಿಸುತ್ತಾ ವ್ಯಾಪಾರ ಹೇಗಿದೆ ಎಂದು ಕೇಳಿದ್ದಾನೆ, ವ್ಯಾಪಾರ ಅಷ್ಟಕಷ್ಟೇ ಎಂದು ಬೇಸರದಿಂದ ಹೇಳಿದ್ದಾರೆ ವೃದ್ದೆ, ನಿಮ್ಮ ವ್ಯಾಪಾರ ವೃದ್ಧಿ ಮಾಡಿವುದ್ದಾಗಿ ಹೇಳಿದ ಆತ ಕುಂಕುಮ ಕೊಡಿ ಎಂದಿದ್ದಾನೆ, ಪೇಪರ್ ನಲ್ಲಿ ಕುಂಕುಮ ಇಟ್ಟು ಇದರೊಳಗೆ ಚಿನ್ನದ ಸರ ಇಡುವಂತೆ ಹೇಳಿದ್ದಾನೆ, ಆತನ ಮಾತಿನ ಮೋಡಿಗೆ ಒಳಗಾದ ವೃದ್ದೆ ಪೊಟ್ಟಣದಲ್ಲಿ ಚಿನ್ನದ ಸರ ಇಟ್ಟಿದ್ದಾರೆ, ಆತನೇ ಪೊಟ್ಟಣವನ್ನ ಸೆರಗಿನಲ್ಲಿ ಕಟ್ಟಿ ವೃದ್ಧೆಯ ಸೊಂಟದ ಬಳಿ ಇಟ್ಟು ಅಲ್ಲಿಂದ ತೆರಳಿದ್ದಾನೆ, ಅವನು ಹೇಳಿದಂತೆ ಸ್ವಲ್ಪ ಸಮಯದ ನಂತರ ಸೆರಗನ್ನು ಬಿಚ್ಚಿ ನೋಡಿದ್ದಾಗ ಚಿನ್ನದ ಸರದ ಬದಲಿಗೆ ಕಲ್ಲು ಪತ್ತೆಯಾಗಿದೆ, ವಂಚಕ ತನ್ನ ಕೈಚಳಕದಿಂದ ಚಿನ್ನದ ಸರ ಇಡುವ ಬದಲಿಗೆ ಕಲ್ಲನ್ನಿಟ್ಟು ಪರಾರಿಯಾಗಿದ್ದು, ವೃದ್ಧೆ ಪರದಾಡುವಂತಾಗಿದೆ.
ಈ ಕುರಿತಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
