ಚಿಕ್ಕಬಳ್ಳಾಪುರ, (ಡಿ.11): ಮಾಜಿ ಸೈನಿಕರು, ನಮ್ಮ ನಿಮ್ಮೆಲ್ಲರ ರಕ್ಷಣೆಗಾಗಿ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿದ್ದಾರೆ. ಆದರೆ ಮಾಜಿ ಸೈನಿಕ ಅನ್ನೋ ಕನಿಷ್ಟ ಗೌರವ, ಪರಿಜ್ಞಾನವೂ ಇಲ್ಲದ ಭ್ರಷ್ಟ ಅಧಿಕಾರಿಗಳು. ಮಾಜಿ ಸೈನಿಕನ ಬಳಿಯೇ ಲಂಚಕ್ಕಾಗಿ ಪೀಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಒಂದಲ್ಲ ಎರಡಲ್ಲ ಅಂತ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಭ್ರಷ್ಟ ಅಧಿಕಾರಿಗಳ ನಡೆಗೆ ಬೇಸತ್ತ ಮಾಜಿ ಸೈನಿಕ ಭ್ರಷ್ಟ ಅಧಿಕಾರಿಗಳನ್ನ ಜೈಲಿಗೆ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಸೈನಿಕನ ಬಳಿಯೇ ಲಂಚಕ್ಕೆ ಬೇಡಿಕೆಯಿಟ್ಟು ಲೋಕಾಯುಕ್ತ ಬಲೆಗೆ ಬಿದ್ದಿರೋ ಈ ಮೂವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರು. ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ವೈಜಕೂರು ಕಂದಾಯ ವೃತ್ತದ ಗ್ರಾಮ ಸಹಾಯಕ ಎನ್.ಪ್ರಕಾಶ್ ಹಾಗೂ ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುವ ಸರ್ಕಾರಿ ಭೂಮಾಪಕ ಪಿ.ಎನ್.ನಾಗರಾಜ್ ಹಾಗೂ ರೈತ ಮುಖಂಡ ಕದಿರೇಗೌಡ ಎಂಬುವವರೇ ಲೋಕಾಯಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಭ್ರಷ್ಟರಾಗಿದ್ದಾರೆ.

ಚಿಂತಾಮಣಿ ನಗರದ ವೆಂಕಟಗಿರಿಕೋಟೆಯ ವಿನಾಯಕ ಬಡವಾಣೆಯ ನಿವಾಸಿ ಶಿವಾನಂದರೆಡ್ಡಿ ಮಾಜಿ ಸೈನಿಕನಾಗಿದ್ದು. ಮಾಜಿ ಸೈನಿಕ ಖೋಟಾದಡಿ ರಾಜ್ಯ ಸರ್ಕಾರಕ್ಕೆ ಜಮೀನು ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಜಮೀನು ಮಂಜೂರಾಗಿಲ್ಲ, ಇದ್ರಿಂದ ಬೇಸತ್ತ ರೈತ ಮುಖಂಡ ಕದಿರೇಗೌಡ ಬಳಿ ಹೋಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಆದರೆ ಈಕದಿರೇಗೌಡ ಗ್ರಾಮ ಸಹಾಯಕ ಪ್ರಕಾಶ್ ಹಾಗೂ ಭೂಮಾಪಕ ನಾಗರಾಜ್ ಜೊತೆ ಡೀಲ್ ಮಾತನಾಡಿ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ.
ಇದರಿಙದ ನೊಂದ ಮಾಜಿ ಸೈನಿಕ ಶಿವಾನಂದರೆಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ಮೂವರು ಭ್ರಷ್ಟರನ್ನ ಲಂಚ ಪಡೆಯುವಾಗ ಲೋಕಾಯಕ್ತ ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಾನಂದರೆಡ್ಡಿ 1987 ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದ್ದು, 1999 ರಲ್ಲಿ ಜಮ್ಮು ಕಾಶ್ಮೀರದ ಪೂಂಚೆ ಸೆಕ್ಟರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿರುವಾಗ ಅಪಘಾತವಾಗಿ ಬಲಗಾಲಿಗೆ ಗಂಭೀರತರನಾದ ಗಾಯವಾದ ಕಾರಣ ಸೇವೆಯಿಂದ ನಿವೃತ್ತಿಯಾಗಿರುತ್ತಾರೆ.
ಹೀಗಾಗಿ ನಿವೃತ್ತಿಯಾದ ನಂತರ ಸ್ವಂತ ಊರಲ್ಲಿ ಕೃಷಿ ಕಾಯಕ ಮಾಡ್ಕೊಂಡು ಬದುಕು ಸಾಗಿಸೋಣ ಅಂತ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ.
ಪ್ರತಿಭಟನೆ, ಹೋರಾಟ, ಧರಣಿ ಸೇರಿದಂತೆ ಚಿಂತಾಮಣಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆ, ಬೆಂಗಳೂರಿನ ಪ್ರೀಢಂ ಪಾರ್ಕ್ನಲ್ಲಿ ಧರಣಿ ಮಾಡಿದರು ಸರ್ಕಾರ ಹಾಗೂ ಆಧಿಕಾರಿಗಳು ಮಾತ್ರ ಜಮೀನು ಮಂಜೂರು ಮಾಡಿಕೊಡಲಿಲ್ಲ, ಬದಲಾಗಿ ಈಗ 10 ಲಕ್ಷಕ್ಕೆ ಲಂಚಕ್ಕೆ ಪೀಡಿಸಿ, ರೂ. 05 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿದ್ದ ಭ್ರಷ್ಟರು ಲೋಕಾ ಬಲೆಗೆ ಬಿದ್ದಿದ್ದು, ಮಾಡಿದ್ದುಣ್ಣೋ ಮಹರಾಯ ಅಂತ ತಕ್ಕಶಾಸ್ತಿ ಆಗಿದೆ ಎಂದು ಸ್ಥಳೀಯರು ಸಹ ಆಸಮಾಧಾನ ಹೊರಹಾಕಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
