ಬಹಳ ವರ್ಷಗಳ ಹಿಂದೆ ರೋಮ್ನಲ್ಲಿ ಅಂಡ್ರೋ ಕ್ಲಸ್ ಎಂಬ ಗುಲಾಮನಿದ್ದ. ಅವನ ಯಜಮಾನ ಬಹಳ ಕ್ರೂರಿಯಾಗಿದ್ದ. ಯಾವಾಗಲೂ ಅವನನ್ನು ಹಿಂಸಿಸುತ್ತಿದ್ದ. ಚಿಕ್ಕ ವಿಷಯಕ್ಕೂ ಅವನಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ. ಇದರಿಂದ ಬೇಸರ ಗೊಂಡ ಅಂಡ್ರೋಕ್ಲಸ್ ಊರು ಬಿಟ್ಟು ಕಾಡಿಗೆ ಓಡಿಹೋದ.

ಕಾಡಿಗೆ ಹೋಗಿ ಮರದ ಪೊಟರೆಯೊಂದರಲ್ಲಿ ಜೀವಿಸತೊಡಗಿದ. ಕಾಡಿನಲ್ಲಿ ಆಹಾರ ಸಿಗದೆ ಹಸಿವೆಯಿಂದ ಬಳಲತೊಡಗಿದ. ಜೊತೆಗೆ ಜ್ವರ ಕೂಡ ಅವನನ್ನು ಬಾಧಿಸಿತು. ಆಹಾರ ಅರಸುತ್ತಾ ಸುಸ್ತಾಗಿ ಒಂದು ಗುಹೆಯಲ್ಲಿ ಬಂದು ಮಲಗಿದ. ಸ್ವಲ್ಪ ಹೊತ್ತು ಕಳೆದ ಬಳಿಕ ಒಂದು ಭಯಂಕರ ಶಬ್ದ ಕೇಳಿ ಎಚ್ಚರಗೊಂಡ. ನೋಡಿದರೆ ಸಿಂಹವೊಂದು ಅವನ ಮುಂದೆ ನಿಂತಿದೆ.

ಅಂಡ್ರೋ ಕ್ಲಸ್, ಸಿಂಹ ತನ್ನನ್ನು ಕೊಲ್ಲುತ್ತದೆ ಎಂದು ಭಯಭೀತನಾಗಿ ಸುಮ್ಮನೆ ನಿಂತುಬಿಟ್ಟ. ಆದರೆ ಸಿಂಹ ಏನೂ ತೊಂದರೆ ಕೊಡದೆ ತನ್ನ ಕಾಲನ್ನು ಅಂಡ್ರೋಕ್ಲಸ್ನ ಮುಂದೆ ಚಾಚಿತು. ಅದು ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ನೋವಿನಿಂದ ನರಳಾಡುತಿತ್ತು. ಅಂಡ್ರೋಕ್ಲಸ್ ತನ್ನ ಉಗುರುಗಳ ಸಹಾಯದಿಂದ ಸಿಂಹದ ಕಾಲಿಗೆ ಚುಚ್ಚಿಕೊಂಡಿದ್ದ ಮುಳ್ಳನ್ನು ಹೊರತೆಗೆದ.
ಸಂತೋಷಗೊಂಡ ಸಿಂಹ ಕುಣಿದು ಕುಪ್ಪಳಿಸತೊಡಗಿತು. ತನ್ನ ಹೊಸ ಸ್ನೇಹಿತ ಅಂಡ್ರೋಕ್ಲಸ್ನಿಗೆ ಹಸ್ತಲಾಘವ ಮಾಡಿ ಧನ್ಯವಾದ ಹೇಳಿತು. ಇದಾದ ಬಳಿಕ ಅಂಡ್ರೋಕ್ಲಸ್ ಮತ್ತು ಸಿಂಹ ಒಂದೇ ಗುಹೆಯಲ್ಲಿ ವಾಸಿಸತೊಡಗಿದರು.
ಒಟ್ಟಿಗೆ ಸ್ನೇಹಿತರಂತೆ ಬಾಳತೊಡಗಿದರು. ಸಿಂಹ ದಿನಾಲೂ ಅಂಡ್ರೋಕ್ಲಸ್ನಿಗೆ ತಿನ್ನಲು ಆಹಾರ ತರುತ್ತಿತ್ತು. ಸುಮಾರು ದಿನಗಳು ಉರುಳಿದ ಬಳಿಕ ಕಾಡಿಗೆ ಬೇಟೆಗೆಂದು ಬಂದ ಸೈನಿಕರು ಗುಹೆಯಲ್ಲಿ ಅಂಡ್ರೋಕ್ಲಸ್ನನ್ನು ಕಂಡು ಆತನನ್ನು ಊರಿಗೆ ಕರೆದುಕೊಂಡು ಹೋಗುತ್ತಾರೆ. ಆಗ ಸಿಂಹಕ್ಕೆ ಬಹಳ ದುಃಖವಾಯಿತು.
ಆ ಕಾಲದಲ್ಲಿ ಯಾರಾದರೂ ಗುಲಾಮರು ತಪ್ಪಿಸಿಕೊಂಡು ಹೋದರೆ ಅವರನ್ನು ಹಸಿದ ಸಿಂಹದ ಬಾಯಿಗೆ ಹಾಕಿ ಕಾದಾಟ ನೋಡುತ್ತ ಮಜಾ ತೆಗೆದುಕೊಳ್ಳುವ ಅಮಾನವೀಯ ಸಂಪ್ರದಾಯ ಜಾರಿಯಲ್ಲಿತ್ತು. ಆ ಕಾದಾಟದ ದಿನದಂದು ಸಾವಿರಾರು ಮಂದಿ ದೊಡ್ಡ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದರು. ಪ್ರಾಣಭಯದಿಂದ ಅಂಡ್ರೋಕ್ಲಸ್ ಮೆಲ್ಲನೆ ಅಲ್ಲಿಗೆ ಬರುತ್ತಾನೆ. ಸುತ್ತ ನೋಡಿದರೆ ಜನವೋ ಜನ. ಆದರೆ ಅವನ ಮೇಲೆ ಕರುಣೆ ತೋರುವವರು ಯಾರೂ ಇರಲಿಲ್ಲ.
ಎಲ್ಲರೂ ಕೇಕೆ ಹಾಕಿ, ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು. ಅವನನ್ನು ಹಸಿದ ಸಿಂಹ ಇರುವ ಬೋನಿನ ಬಳಿ ತರಲಾಯಿತು. ಅಂಡ್ರೋಕ್ಲಸ್ ಅಳುತ್ತಾ, ಹೆದರಿಕೆಯಿಂದ ಸಿಂಹದ ಬಳಿ ಬಂದ. ಘರ್ಜಿಸುತ್ತಾ ಅಂಡ್ರೋಕ್ಲಸ್ನ ಬಳಿ ಬಂದ ಸಿಂಹ ಒಮ್ಮೆಲೇ ನಿಂತು ಬಿಟ್ಟಿತು. ಅವತ್ತು ಕಾಡಿನಲ್ಲಿ ಅಂಡ್ರೋಕ್ಲಸ್ ಮುಳ್ಳು ತೆಗೆದಿದ್ದ ಅದೇ ಸಿಂಹವಾಗಿತ್ತು ಅದು. ಅಂಡ್ರೋಕ್ಲಸ್ ಅಂದು ತನಗೆ ಮಾಡಿದ ಉಪಕಾರವನ್ನು ನೆನೆದು ಸಿಂಹ ಸುಮ್ಮನೆ ನಿಂತುಬಿಟ್ಟಿತು. ಅಂಡ್ರೋಕ್ಲಸ್ ತುಂಬಾ ಸಂತಸಗೊಂಡ. ಸಿಂಹವನ್ನು ಅಪ್ಪಿ ಮುದ್ದಾಡಿದ.
ನೋಡುತಿದ್ದವರೆಲ್ಲಾ ಆಶ್ಚರ್ಯಚಕಿತರಾಗಿ ಇವರನ್ನೇ ಗಮನಿಸುತಿದ್ದರು. ಅಂಡ್ರೋಕ್ಲಸ್ ಸಿಂಹದ ಬಳಿ ಆಟವಾಡುತ್ತಾ ಇದ್ದ. ಇದು ಹೇಗೆ ಸಾಧ್ಯ ಎಂದು ಅಲ್ಲಿದ್ದವರು ಕೇಳಿದ್ದಕ್ಕೆ ಅಂಡ್ರೋಕ್ಲಸ್ ಎಲ್ಲವನ್ನೂ ವಿವರಿಸಿದ. ಅಲ್ಲಿದ್ದವರು ಇಬ್ಬರನ್ನೂ ಬಿಡುಗಡೆ ಮಾಡಿ ಎಂದು ಜೋರಾಗಿ ಕೂಗತೊಡಗಿದರು. ಸಿಂಹ ಮತ್ತು ಅಂಡ್ರೋಕ್ಲಸ್ ನನ್ನು ಬಂಧನದಿಂದ ಬಿಡುಗಡೆ ಮಾಡಿದರು. ಅದಾದಮೇಲೆ ಸುಮಾರು ವರ್ಷಗಳ ಕಾಲ ಅಂಡ್ರೋಕ್ಲಸ್ ಮತ್ತು ಸಿಂಹ ಒಟ್ಟಿಗೆ ಅನ್ಯೋನ್ಯತೆಯಿಂದ ಕಾಡಿನಲ್ಲಿದ್ದರು.
ಕೃಪೆ: ಸಿನಾನ್ ಇಂದಬೆಟ್ಟು. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
