ದೊಡ್ಡಬಳ್ಳಾಪುರ, (ಏ.23): ಬಸವಣ್ಣನವರು ರೂಪಿಸಿದ ಅನುಭವಮಂಟಪವು ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಯಾಗಿತ್ತು. ಕನ್ನಡ ನೆಲದಲ್ಲಿ ನಿರ್ಮಾಣವಾದ ವಚನ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆಯಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ತಿಳಿಸಿದರು.
ನಗರದ ಡಾ.ರಾಜ್ ಕುಮಾರ್ ಕಲಾಭವನದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಬಸವ ಜಯಂತಿ ಮತ್ತು ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶರಣರ ಕಾಯಕವೇ ಕೈಲಾಸ ಎಂಬ ಚಿಂತನೆ ಸಾಮಾಜಿಕ ಹೊಣೆಗಾರಿಕೆ, ಸಮಾನತೆ ಮತ್ತು ಸಹಬಾಳ್ವೆಯ ಪ್ರತಿಪ್ರಪಾದನೆಯಾಗಿದೆ. ಬಸವಣ್ಣನವರ ಪ್ರೇರಣೆಯಿಂದ ಶರಣರು ಸರಳವಾದ, ನೇರ ನಡೆ ನುಡಿಯ ಜನಸಾಹಿತ್ಯವಾದ ವಚನಸಾಹಿತ್ಯ ರಚನೆಗೆ ಕಾರಣವಾಯಿತು. ಬಸವಣ್ಣನವರ ಕಾಯಕತತ್ವ ವಿಶ್ಚಮಾನ್ಯ ಹಾಗೂ ಸಾರ್ವಕಾಲಿಕ ಆದರ್ಶವಾಗಿದೆ. ಅನುಭವ ಮಂಟಪದ ಮೂಲಕ ಪ್ರಜಾಸತ್ತಾತ್ಮಕ ಚಿಂತನೆಗಳಿಗೆ ಅವಕಾಶ ದೊರೆಯಿತು ಎಂದು ಅಭಿಪ್ರಾಯಪಟ್ಟರು.
ಬಿ.ಎಸ್.ಎನ್.ಎಲ್ ನಿವೃತ್ತ ಸಿಬ್ಬಂದಿ ನರಸಿಂಹಮೂರ್ತಿ ಮಾತನಾಡಿ, ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯ ಹಾಗೂ ಲಿಂಗಸಮಾನತೆಗಾಗಿ ನಡೆಸಿದ ಹೋರಾಟ ಅನನ್ಯ. ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಯ ನಿವಾರಣೆಗೆ ಬಸವಣ್ಣನವರ ಚಿಂತನೆಗಳು ದಾರಿದೀಪವಾಗಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಮಾಜ ಸೇವಕ ಅಬ್ದುಲ್ ಸುಭಾನ್ ಸಾಬ್ ರವರನ್ನು ಸನ್ಮಾನಿಸುತ್ತಿರುವು ಶ್ಲಾಘನೀಯ ವಿಚಾರವಾಗಿದೆ. ಕಾಯಕ ನಿಷ್ಠೆಯ ಮೂಲಕ ಅಬ್ದುಲ್ ಸುಭಾನ್ ಸಾಬ್ ರವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಸಾಮಾಜಿಕ ಕಳಕಳಿ ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಘಟಕದ ಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಜನಪರ ಸಂಘಟನೆಯ ಮುಖಂಡರಾದ ಆರಿಫ್, ಫೀರ್ ಪಾಷಾ,ಶಂಶೀರ್ ಮೊದಲಾದವರು ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….