Facebook ಬಳಕೆದಾರರೇ ಎಚ್ಚರ: ಉಡುಗೊರೆ ನೆಪದಲ್ಲಿ 2.93 ಲಕ್ಷ ರೂ ವಂಚನೆ..!!

ಚಿಕ್ಕಬಳ್ಳಾಪುರ, (ಆ.11): ಉಡುಗೊರೆಗಳನ್ನು ನೀಡುವ ಆಮಿಷವೊಡ್ಡಿ ಸೈಬರ್ ವಂಚಕರು ವ್ಯಕ್ತಿಯೊಬ್ಬರಿಗೆ 2.93 ಲಕ್ಷ ವಂಚನೆ ಮಾಡಿದ್ದಾರೆ. ಈ ಕುರಿತು ವಂಚನೆಗೊಳಗಾದ ವ್ಯಕ್ತಿ ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಅಕ್ರಂ ಹಣ ಕಳೆದು ಕೊಂಡು ಮೋಸ ಹೋದವರು. ಅಕ್ರಂ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಎಟಿಎಂ, ಮೊಬೈಲ್ ಮೂಲಕ ಫೋನ್ ಪೇ, ಯುಪಿಐ ಅಪ್ಲಿಕೇಷನ್‌ನಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು.

ಆಗಸ್ಟ್  6 ರಂದು ರಾತ್ರಿ ಫೇಸ್‌ಬುಕ್ ನೋಡುತ್ತಿದ್ದಾಗ ಜಾಮ್ ಜಾಮ್ ದುಬೈ ಶಾಪ್ ಹೆಸರಿನ ಫೇಸ್‌ಬುಕ್ ಪೇಜ್ ತೆರೆದುಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ನಂಬರ್‌ಗೆ ಆಫರ್ ಬಂದಿದ್ದು, ಐಫೋನ್ ಮತ್ತು ಇತರೆ ವಸ್ತುಗಳು ಉಡುಗೊರೆಯಾಗಿ ಬಂದಿವೆ. ಕೊರಿಯರ್‌ನಿಂದ ಕಾಲ್ ಬರುತ್ತದೆ ಎಂದು ತಿಳಿಸಿ  ಕೊರಿಯರ್ ವೆಚ್ಚ ಎಂದು ರೂ 4,000ಗಳನ್ನು ಯುಪಿಐ ಮೂಲಕ ಜಮೆ ಮಾಡಿಸಿಕೊಂಡಿದ್ದರು ಎಂದು ಸಿಇಎನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾವು ಕಳುಹಿಸುವ ಉಡುಗೊರೆಗೆ ವಿವಿಧ ಶುಲ್ಕಗಳನ್ನು ಪಾವತಿಸಬೇಕು ಎಂಬ ನೆಪದಲ್ಲಿ ಮತ್ತೆ  48,000 ರೂ ಗಳನ್ನು ಸೈಬರ್ ವಂಚಕರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಽಕಾರಿಗಳು ಹಿಡಿದಿದ್ದಾರೆ. ಅವರಿಗೆ 2.45 ಕಟ್ಟಿದರೆ ಮಾತ್ರ ವಿಮಾನ ನಿಲ್ದಾಣದಿಂದ ಹೊರ ಬಿಡುತ್ತಾರೆ. ಇಲ್ಲದಿದ್ದರೆ, ಕಟ್ಟಿರುವ ಹಣವೂ ವ್ಯರ್ಥವಾಗುತ್ತದೆ ಎಂದು ನಂಬಿಸಿದ್ದರು. 

ಇದನ್ನು ನಂಬಿದ ಅಕ್ರಂ ಮುರುಗಮಲ್ಲ ಕೆನರಾ ಬ್ಯಾಂಕ್ ಶಾಖೆಯಿಂದ ಮೂರು ಸಲ ಒಟ್ಟಾರೆ 2.45 ಲಕ್ಷ ರೂ ಆರೋಪಿಗಳು ಹೇಳಿದ ಖಾತೆಗೆ ಹಾಕಿದ್ದಾನೆ. ಹೀಗೆ ಒಟ್ಟಾರೆ 2.93 ಲಕ್ಷ ರೂ ವಂಚನೆ ಮಾಡಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!