ಸೂರ್ಯನ ಕಿರಣಗಳು ಭೂಮಿಗೆ ಮುತ್ತಿಕ್ಕುವ ಮುನ್ನವೇ ಇವರು ಪ್ರತಿನಿತ್ಯವೂ ಕಾಯಕಕ್ಕೆ ಹಾಜರು. ಮಳೆ, ಚಳಿ, ಗಾಳಿ ಇದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಎಷ್ಟೇ ತಾಪತ್ರಯಗಳು ಎದುರಾದರೂ ಇವರು ಕಾಯಕವನ್ನು ಮರೆಯುವುದಿಲ್ಲ… – ಅವರೇ ದಿನ ಪತ್ರಿಕೆಗಳ ಬೆನ್ನೆಲುಬು ಪತ್ರಿಕಾ ವಿತರಕರು; ಮುಂಜಾನೆಯ ಕಾಯಕ ಜೀವಿಗಳು.
ಮುಂಜಾನೆ ಎದ್ದ ಕೂಡಲೇ ಕಾಫಿ, ಟೀ ಹೀರುವ ಹೊತ್ತಿಗೆ ಸರಿಯಾಗಿ ಕೈಯಲ್ಲಿ ಪತ್ರಿಕೆ ಹಿಡಿದು ಸುದ್ದಿಗಳನ್ನು ಓದುವುದೇ ಒಂದು ಗಮ್ಮತ್ತು. ಸಾಮಾಜಿಕ ಜಾಲತಾಣ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಎಷ್ಟೇ ಸುದ್ದಿಗಳನ್ನು ಇಣುಕಿ ನೋಡಿದ್ದರೂ ಪೂರ್ಣಪ್ರಮಾಣದ ಸುದ್ದಿಯ ಮೇಲೊಮ್ಮೆ ಕಣ್ಣಾಡಿಸಿದರಷ್ಟೇ ಕೆಲವರಿಗೆ ತೃಪ್ತಿ.
ಕರ್ನಾಟಕ ರಾಜ್ಯದ ಮಟ್ಟಿಗೆ ಹೇಳುವುದಾದರೆ ಪತ್ರಿಕೆಗಳಿಗೆ ಸುಮಾರು 183 ವರ್ಷಗಳ ಇತಿಹಾಸವಿದ್ದರೆ, ಪತ್ರಿಕಾ ವಿತರಕರಿಗೆ 180 ವರ್ಷಗಳ ಚರಿತ್ರೆ ಇದೆ. ರಾಜ್ಯದಲ್ಲಿ ಸುಮಾರು 70 ಸಾವಿರ ಮಂದಿ ಪತ್ರಿಕಾ ವಿತರಕರಿದ್ದು, 3.5 ಲಕ್ಷ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿವೆ. ಹೀಗೆ ಅನೇಕ ದಶಕಗಳಿಂದ ಅಸಂಘಟಿತ ವಲಯದಲ್ಲೇ ಶ್ರಮಿಸುತ್ತಿರುವ ಪತ್ರಿಕಾ ವಿತರಕರ ಶ್ರಮವನ್ನು ಸ್ಮರಿಸಲು, ಅವರ ಕಷ್ಟವನ್ನು ಆಲಿಸಲು ಪ್ರತಿವರ್ಷ ಸೆ.04ರಂದು ದಿನಾಚರಣೆ ಆಚರಿಸಲಾಗುತ್ತದೆ.
ಬೆಳ್ಳಂಬೆಳಿಗ್ಗೆ ಕೆಲಸ ಆರಂಭಿಸುವ ಇವರು ದಿನಪತ್ರಿಕೆಗಳ ಜತೆ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಪತ್ರಿಕೆ ವಿತರಿಸುವ ಮೂಲಕ ಪ್ರಚಲಿತ ಘಟನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ವಿತರಕರ ಬದುಕು ಸಹ ಸುಧಾರಣೆ ಕಾಣಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….