ಒಂದು ದಿನ ತುಳಸಿದಾಸರಿಗೆ ಪುರಿ ಜಗನ್ನಾಥನಲ್ಲಿ ರಾಮನ ದರ್ಶನವಾಗುತ್ತದೆ ಎಂಬ ಸುದ್ದಿ ಯಾರಿಂದಲೋ ತಿಳಿದು ಬಂದಿತು. ರಾಮನ ದರ್ಶನ ಮಾಡುವ ಸಲುವಾಗಿ ರಾಮನ ಭಕ್ತರಾಗಿದ್ದ ತುಳಸಿದಾಸರು ಯಾತ್ರೀಕರ ಜೊತೆ ಪಾದಯಾತ್ರೆ ಮಾಡುತ್ತಲೇ ಪುರಿ ಕ್ಷೇತ್ರಕ್ಕೆ ರಾಮನ ದರ್ಶನ ಮಾಡಲು ಹೊರಟರು.
ಕಷ್ಟಪಟ್ಟು ನಡೆದು ಬಹಳ ದಿನಗಳ ಮೇಲೆ ಪುರಿ ಕ್ಷೆತ್ರವನ್ನು ತಲುಪಿದರು. ಅವರಿಗೆ ಇಷ್ಟದೈವವಾದ ರಾಮನ ದರ್ಶನ ಮಾಡಲು ಕಾತರದಿಂದ ದೇವಸ್ಥಾನದ ಒಳಗೆ ಬಂದು ಗರ್ಭಗುಡಿಯೊಳಗೆ ನೋಡಿದ ಅವರಿಗೆ ನಿರಾಸೆಯಾಯಿತು.
ಇದೇನು, ದುಂಡನೆಯ ನಯನವುಳ್ಳ ಮರದ ದೇವರು , ನನ್ನ ರಾಮನಾಗಲು ಹೇಗೆ ಸಾಧ್ಯ? ಸಾಧ್ಯವೇ ಇಲ್ಲ ರಾಮನೆಲ್ಲಿ ಇವನೆಲ್ಲಿ ಎಂಬ ಬೇಸರದಿಂದ ಹೊರಬಂದು ಮರದ ಕೆಳಗೆ ಕುಳಿತರು. ಅಷ್ಟೂಂದು ಕಷ್ಟಪಟ್ಟು ಇಷ್ಟು ದೂರ ಬಂದರೂ ನನಗೆ ರಾಮನ ದರ್ಶನವಾಗಲಿಲ್ಲ ಎಂದು ಬೇಸರದಿಂದ ಚಿಂತಿಸುತ್ತಲೇ ಕತ್ತಲಾಯಿತು. ಆ ಹೊತ್ತಿಗೆ ಪುಟ್ಟ ಬಾಲಕನೊಬ್ಬ ಕೈಯಲ್ಲಿ ಕುಡಿಕೆ ತುಂಬಾ ಪ್ರಸಾದ ಹಿಡಿದು ತಂದು ಇಲ್ಲಿ ತುಳಸಿದಾಸರು ಎಂದರೆ ಯಾರು ಎಂದು ಅಲ್ಲಿದ್ದವರನ್ನೆಲ್ಲ ಕೇಳುತ್ತಾ ಬಂದನು ತುಳಸಿದಾಸರು ನಾನೇ ಎಂದರು. ಹಾಗೂ ಯೋಚಿಸಿದರು ದೇವಸ್ಥಾನದವರಿಗೆ ನಾನು ಬಂದಿರುವ ವಿಚಾರ ಹೇಗೆ ತಿಳಿಯಿತು, ನನ್ನ ಜೊತೆ ಬಂದವರು ಯಾರೋ ಒಳಗೆ ಹೇಳಿರಬೇಕು ಅದಕ್ಕಾಗಿ ನನಗೆ ಪ್ರಸಾದ ಕಳಿಸಿದ್ದಾರೆ ಎಂದುಕೊಂಡು,
ಮಗು ನಾನೇ ತುಳಸಿ ದಾಸ ಎಂದರು. ಮುದ್ದಾದ ಬಾಲಕ ನಾನು ನಿಮ್ಮನ್ನು ಆಗಿನಿಂದಲೂ ಹುಡುಕುತ್ತಲೇ ಇದ್ದೆ. ಜಗನ್ನಾಥ ದೇವರು ನಿಮಗಾಗಿ ಈ ಕುಡಿಕೆ ತುಂಬಾ ಪ್ರಸಾದ ಕಳಿಸಿದ್ದಾರೆ ಎಂದನು. ಆದರೆ ದಾಸರು ನಾನು ಈ ಪ್ರಸಾದವನ್ನು ನಾನು ಸೇವಿಸಲಾರೆ ಎಂದರು. ಆಶ್ಚರ್ಯವಾದ ಬಾಲಕ, ಇಡೀ ಜಗತ್ತೇ ಜಗನ್ನಾಥನ ಪ್ರಸಾದಕ್ಕಾಗಿ ಕೈ ಚಾಚುತ್ತಾರೆ. ಆದರೆ ನೀವೇಕೆ ಪ್ರಸಾದ ವಾಪಸ್ಸು ತೆಗೆದುಕೊಂಡು ಹೋಗಲು ಹೇಳುವಿರಿ? ಎಂದು ಕೇಳಿದಾಗ, ನನ್ನ ಇಷ್ಟದೈವ ರಾಮನ ಪೂಜೆ ಮಾಡಿ ಅವನಿಗೆ ಅರ್ಪಿಸದೆ ಏನನ್ನು ಸೇವಿಸುವುದಿಲ್ಲ. ಅಲ್ಲದೆ ನಿನ್ನ ಜಗನ್ನಾಥನ ಪ್ರಸಾದವನ್ನು ನನ್ನ ರಾಮನಿಗೆ ಹೇಗೆ ನೈವೇದ್ಯ ಮಾಡಲಿ ಆದುದರಿಂದ ಈ ಪ್ರಸಾದವನ್ನು ಇಟ್ಟುಕೊಂಡು ನಾನೇನು ಮಾಡಲಿ ಎಂದರು.
ಅದಕ್ಕೆ ಬಾಲಕ, ನಿಮ್ಮ ಇಷ್ಟ ದೇವರೇ ಈ ಪ್ರಸಾದವನ್ನು ಕಳಿಸಿರು ವುದು ಎಂದನು. ಅದು ಹೇಗೆ ಸಾಧ್ಯ ಹಸ್ತ-ಪಾದ ಗಳಿಲ್ಲದ ನಿನ್ನ ಜಗನ್ನಾಥ ನನ್ನ ರಾಮನಾಗಲು ಹೇಗೆ ಸಾಧ್ಯ? ಎಂದು ತುಳಸಿದಾಸರು ಕೇಳಿದಾಗ ಬಾಲಕ ನಗುತ್ತಾ ನುಡಿದ ನೀವೇ ನಿಮ್ಮ ‘ರಾಮ ಚರಿತ ಮಾನಸ’ದಲ್ಲಿ ವರ್ಣಿಸಿದ್ದೀರಲ್ಲ, ” ಬ್ರಹ್ಮನು ಪಾದಗಳಿಲ್ಲದೆ ನಡೆಯು ತ್ತಾನೆ, ಕಿವಿ ಇಲ್ಲದೆ ಕೇಳುತ್ತಾನೆ, ಕೈ ಗಳಿಲ್ಲದೆ ಕೆಲಸಗಳನ್ನು ಮಾಡುತ್ತಾನೆ,
ನಾಲಿಗೆ ಇಲ್ಲದೆ ಎಲ್ಲಾ ಆಹಾರಗಳ ರುಚಿ ಆಸ್ವಾದಿಸುತ್ತಾನೆ, ಮತ್ತು ಮಾತಿಲ್ಲದೆ ಅನೇಕ ವಿಷಯಗಳನ್ನು ಮಾತಾಡುವ ವಾಗ್ಮೀ ಅಲ್ಲವೇ? ಎಂದು ತುಳಸಿ ದಾಸರನ್ನು ಕೇಳಿದಾಗ ಅವರಿಗೆ ಅರ್ಥವಾಯಿತು. ಕಣ್ಣಂಚಿನಲ್ಲಿ ನೀರು ಬಂದಿತು. ಬಾಲಕನು ನಗುತ್ತಾ ತುಳಸಿದಾಸರೇ ನಾನೇ ನಿಮ್ಮ ರಾಮ, ನನ್ನ ನಾಲ್ಕೂ ದಿಕ್ಕುಗಳಿಗೂ ಹನುಮಂತ ಪಹರೆ ಕಾಯುತ್ತಿದ್ದಾನೆ. ದಿನ ನಿತ್ಯ ಬೆಳಿಗ್ಗೆ ವಿಭೀಷಣ ನನ್ನ ದರ್ಶನಕ್ಕೆ ಬರುತ್ತಾನೆ. ನೀವು ಸಹ ನಾಳೆ ಬಂದು ನನ್ನ ದರ್ಶನ ಮಾಡಿ ಎಂದು ಹೇಳಿ ಓಡಿ ಕಣ್ಮರೆಯಾದನು
ತುಳಸಿದಾಸರಿಗೆ ಜಗತ್ತಿನ ಪರಿವೇ ಇರಲಿಲ್ಲ. ಅವರ ಇರುವಿಕೆಯನ್ನೇ ಅವರು ಮರೆತಿದ್ದರು. ಹಗುರವಾಗಿ ತೇಲಾಡುತ್ತಿದ್ದರು. ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಬಾಲಕ ತಂದಿಟ್ಟ ಪ್ರಸಾದವನ್ನು ಭಕ್ತಿಯಿಂದ ಸಂಭ್ರಮದಿಂದ ಸೇವಿಸಿದರು. ಮರುದಿನ ಬೆಳಿಗ್ಗೆ ಎದ್ದವರೇ ಜಗನ್ನಾಥನ ದರ್ಶನ ಮಾಡಲು ಹೋದರು ಜಗನ್ನಾಥ- ಬಲರಾಮ- ಸುಭದ್ರೆ ನಿಂತಿರುವ ಜಾಗದಲ್ಲಿ ರಾಮ ಸೀತೆ ಲಕ್ಷ್ಮಣ ಹನುಮಂತ ಇರುವುದನ್ನು ಕಂಡರು.
ಯಾವ ಜಾಗದಲ್ಲಿ ತುಳಿತಿದಾಸರು ರಾತ್ರಿ ಯನ್ನು ಕಳೆದಿದ್ದರೋ ಆ ಜಾಗವನ್ನು ಇಂದಿಗೂ ‘ತುಳಸಿಯ ಚೌರ’ ಎಂದು ಕರೆಯುತ್ತಾರೆ. ಅವರು ಕುಳಿತಿದ್ದ ಪೀಠ ಇರುವ ಜಾಗವನ್ನು ಬಡಸ್ತಾಮಠ ಎಂದು ಪ್ರಸಿದ್ಧವಾಗಿದೆ. ಜಗನ್ನಾಥನು ತುಳಸಿದಾಸರಿಗೆ ರಾಮನಾಗಿ ದರ್ಶನ ಕೊಟ್ಟು ತುಳಸಿದಾಸರನ್ನು ಕೃತಾರ್ಥರ ನ್ನಾಗಿಸಿದ. ಇಂಥ ಪುರಿಯ ಜಗನ್ನಾಥ ಜಗತ್ತಿಗೆ ಅಧಿಪತಿಯಾಗಿ ಪುರಿ ಕ್ಷೇತ್ರ ದಲ್ಲಿ ನೆಲೆಸಿ ಕ್ಷೇತ್ರವನ್ನೆ ವಿಶ್ವ ವಿಖ್ಯಾತ ಗೊಳಿಸಿದನು.
ಬರಹ: ಆಶಾ ನಾಗಭೂಷಣ, ಸಂಗ್ರಹ ವರದಿ; ಗಣೇಶ್. ಎಸ್.,ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….