ಬೆಂಗಳೂರು, (ಜುಲೈ.30): ಮೂಡಾ ಹಗರಣದ ವಿರುದ್ಧ ಆಗಸ್ಟ್ 3ರಿಂದ ಬೆಂಗಳೂರು ನಗರಿಂದ ಮೈಸೂರಿಗೆ ನಡೆಯಲಿದ್ದ ಜೆಡಿಎಸ್ ಬಿಜೆಪಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಜೆಡಿಎಸ್ ಪಕ್ಷ ಬಿಜೆಪಿಗೆ ಸಲಹೆ ಮಾಡಿದೆ.
ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆ ಅವಾಂತರಗಳು ಹೆಚ್ಚಾಗಿವೆ. ಪ್ರಕೃತಿ ಈಗ ವಿಕೋಪಕ್ಕೆ ತಿರುಗಿದೆ. ರಾಜ್ಯದಲ್ಲಿ ಮಳೆ ಅಬ್ಬರದಿಂದ ಸಾಕಷ್ಟು ಪ್ರಮಾಣದಲ್ಲಿ ಅನಾಹುತಗಳು ನಡೆದಿದೆ. ಹಾಗಾಗಿ ಮಳೆ ಕಡಿಮೆಯಾದ ನಂತರ, ಎಲ್ಲಾ ಅನುಕೂಲ ಪರಿಸ್ಥಿತಿಗಳನ್ನು ನೋಡಿಕೊಂಡು ಪಾದಯಾತ್ರೆ ಮಾಡಬಹುದು ಎಂದು ಜೆಡಿಎಸ್ ಅಭಿಪ್ರಾಯಪಟ್ಟಿದೆ.
ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಜಿಟಿ ದೇವೇಗೌಡರು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪ್ರಮುಖ ನಾಯಕರು; ಪಾದಯಾತ್ರೆ ಮುಂದೂಡುವ ಬಗ್ಗೆ ಮಿತಪಕ್ಷಕ್ಕೆ ಸಲಹೆ ಮಾಡಿದರು.
ಮಳೆಯ ಸರಣಿ ಅನಾಹುತಗಳು ಸಂಭವಿಸುತ್ತಿವೆ. ಕೇರಳದಲ್ಲಿ ಭೂಕುಸಿತ ಉಂಟಾಗಿ 80ರಿಂದ 100 ಜನ ಸಾವನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿಲೂ ಇದೇ ರೀತಿಯ ದುರಂತ ನಡೆದಿದೆ. ಅನೇಕ ಕಡೆ ಜೀವ ಹಾನಿ,ಆಸ್ತಿ ಹಾನಿ ಆಗಿದೆ. ಇಂಥ ಸಂಕಷ್ಟದ ಕಾಲದಲ್ಲಿ ಪಾದಯಾತ್ರೆ ನಡೆಸುವ ಬಗ್ಗೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪಾದಯಾತ್ರೆಗೆ ಬರುವ ಕಾರ್ಯಕರ್ತರು, ರೈತಾಪಿ ಜನರ ಹಿತದೃಷ್ಟಿಯಿಂದ ಕೆಲ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.
ಪಾದಯಾತ್ರೆಗೆ ಸಾವಿಯಾರು ಜನ ಬರುತ್ತಾರೆ, ಆ ಸಂದರ್ಭದಲ್ಲಿ ಇದೇ ರೀತಿ ಧಾರಕಾರ ಮಳೆ ಸುರಿದರೆ ಕಷ್ಟವಾಗುತ್ತದೆ. ಪ್ರಕೃತಿ ನಿಯಂತ್ರಣ ನಮ್ಮ ಕೈಯಲಿಲ್ಲ. ಪಾದಯಾತ್ರೆಗೆ ಬರುವ ಜನಗಳು ಅರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಈ ದೃಷ್ಟಿಯಿಂದ ಎಲ್ಲಾ ಆಯಾಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಅವರು ಹೇಳಿದರು.
ಜಿಟಿ ದೇವೇಗೌಡರು ಹೇಳಿದ್ದು: ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು ಮಾತನಾಡಿ; ಕಳೆದ ಅಧಿವೇಶನದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ಜೆಡಿಎಸ್ – ಬಿಜೆಪಿ ಜಂಟಿಯಾಗಿ ಹೋರಾಟ ಮಾಡಿದ್ದವು. ಸರಕಾರ ಇದನ್ನು ಲೆಕ್ಕಿಸದೇ ಸದನವನ್ನು ಅರ್ಧಕ್ಕೆ ಮೊಟಕುಗೊಳಿಸಿತು. ಬೆಂಗಳೂರುನಿಂದ ಮೈಸೂರಿಗೆ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಬೇಕು ಎಂಬ ತೀರ್ಮಾನ ಮಾಡಲಾಗಿತ್ತು ಎಂದರು.
ಶಿರೂರು ಗುಡ್ಡ ಕುಸಿದಾಗ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಕರ್ನಾಟಕದ ಅರ್ಧ ಭಾಗ ಈಗ ಮಳೆಯಿಂದ ಹಾನಿಯಾಗಿದೆ. ಇಂತಹ ಸಂಧರ್ಭದಲ್ಲಿ ಜನರನ್ನು ರೈತರನ್ನು ಬಿಟ್ಟು ಬರಲು ಆಗ್ತಿಲ್ಲ, ಈ ಆಪತ್ಕಾಲದಲ್ಲಿ ಜನರ ಜೊತೆಗೆ ಇರಬೇಕು ಎಂದು ಪಾದಯಾತ್ರೆ ಮಾರ್ಗದಲ್ಲಿರುವ ಜಿಲ್ಲೆಗಳ ನಮ್ಮ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಜಿಟಿ ದೇವೇಗೌಡ ಹೇಳಿದರು.
ಮಂಡ್ಯ, ಮೈಸೂರು ಜನ ಭತ್ತ ಬೆಳೆಯುವ ಸಂಧರ್ಭ ಇದು. ಹೀಗಾಗಿ ನಾಯಕರೆಲ್ಲ ಈ ಪಾದಯಾತ್ರೆ ಮುಂದೂಡೋಣ ಎಂದು ಕುಮಾರಸ್ವಾಮಿ ಮತ್ತು ನನ್ನ ಮೇಲೆ ಒತ್ತಡ ಹಾಕಿದ್ದಾರೆ. ಮಳೆಯ ಪರಿಸ್ಥಿತಿ ತಿಳಿಯಾದ ಮೇಲೆಪಾದಯಾತ್ರೆ ಮಾಡೋಣ. ಬಿಡದಿಯಿಂದ ಪಾದಯಾತ್ರೆ ಮಾಡೋಣ ಎಂದು ಮುಖಂಡರು ಸಲಹೆ ಮಾಡಿದ್ದಾರೆ. ಅದನ್ನೇ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ್ದೇವೆ. ಈ ವಿಷಯವನ್ನು ಮಾಜಿ ಪ್ರಧಾನಿಗಳಾದ ದೇವೇಗೌಡರು, ಕೇಂದ್ರ ಸಚಿವರಾದ ದೇವೇಗೌಡರಿಗೆ ತಿಳಿಸುತ್ತೇವೆ ಎಂದರು.
ಕುಮಾರಸ್ವಾಮಿಯರು ಸಂಸತ್ ಅಧಿವೇಶನದಲ್ಲಿ ಇರುತ್ತಾರೆ. ಅವರು ಇಲ್ಲದೇ ಈ ಪಾದಯಾತ್ರೆ ಯಶಸ್ವಿ ಆಗಲ್ಲ. ಕುಮಾರಸ್ವಾಮಿ ಅವರಿಲ್ಲದೇ ನಾವು ಪಾದಯಾತ್ರೆಯಲ್ಲಿ ಭಾಗವಹಿಸಲು ಹೇಗೆ ಸಾಧ್ಯ? ಎಂದು ಜಿಲ್ಲಾ ಮುಖಂಡರು ಹೇಳಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ, ಅವರಿಗೆ ಈ ವಿಚಾರ ತಿಳಿಸಿ ಅಂತ ನಮ್ಮ ನಾಯಕರಿಗೆ ಹೇಳಿದ್ದೇವೆ. ಸ್ಥಳೀಯ ನಾಯಕರ ಅಭಿಪ್ರಾಯ ಪಡೆಯದೇ ಈ ತೀರ್ಮಾನ ಮಾಡಲಾಗಿತ್ತು. ಹಾಗಾಗಿ, ಈಗ ಈ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವರಾದ ಸಾ.ರಾ.ಮಹೇಶ್, ಹೆಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಮಂಜೇಗೌಡ, ಟಿ.ಎ.ಜವರಾಯಿ ಗೌಡ, ಮಾಜಿ ಶಾಸಕರಾದ ವೈ.ಎಸ್.ವಿ ದತ್ತ, ಸುರೇಶ್ ಗೌಡ , ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ದೊಡ್ಡನಗೌಡ ಪಾಟೀಲ್, ವೀರಭದ್ರಪ್ಪ ಹಾಲರವಿ, ತಿಮ್ಮರಾಯಪ್ಪ, ಅಶ್ವಿನ್ ಕುಮಾರ್, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಡಾ.ಸುಧಾಕರ ಶೆಟ್ಟಿ, ಸುನೀತಾ ಚವಾಣ್ ಸೇರಿ ಕೋರ್ ಕಮಿಟಿ ಸದಸ್ಯರು, ಪ್ರಮುಖ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

