
ವಯನಾಡು, (ಆಗಸ್ಟ್.01): ಪ್ರಕೃತಿ ಮುನಿಸಿಗೆ 270 ಜನ ಬಲಿಯಾಗಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡು ಆಸತ್ರೆ ಸೇರಿದ್ದಾರೆ. ಇನ್ನೂ 225 ಜನರ ಸುಳಿವೇ ಇಲ್ಲ. ತಮ್ಮವರು ಬದುಕಿದ್ದಾರೋ ಇಲ್ಲವೋ ಎಂಬ ಮಾಹಿತಿ ಇಲ್ಲದೇ ನೂರಾರು ಕುಟುಂಬಗಳು ಕಂಗಾಲಾಗಿವೆ. ನಿಲ್ಲದ ಮಳೆ, ಎಲ್ಲೆಡೆ ಮಣ್ಣಿನ ರಾಶಿ, ಕುಸಿದು ಬಿದ್ದ ಕಟ್ಟಡಗಳ ಅವಶೇಷ, ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ವಯನಾಡಿನಲ್ಲಿ ಎಲ್ಲವೂ ನಾಶವಾಗಿದೆ.

ರಕ್ಷಣಾ ಪಡೆಗಳು ಜೀವ ಪಣಕ್ಕಿಟ್ಟು ಮಣ್ಣಲ್ಲಿ ಸಿಲುಕಿರುವವರನ್ನು ಹುಡುಕಿ ರಕ್ಷಿಸುವ ಕಾರ್ಯ ನಡೆಸುತ್ತಿದೆ. ಒಟ್ಟು ಸುಮಾರು 4 ಸಾವಿರ ಜನರಿಗೆ ಸುರಕ್ಷಿತ ಸ್ಥಳದಲ್ಲಿ ಆಶ್ರಯ ವ್ಯವಸ್ಥೆ ಮಾಡಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ವಯನಾಡು ಜಿಲ್ಲೆಯ ಮೆಪ್ಪಾಡಿಯ ಮುಂಡಕ್ಕೆ ಹಾಗೂ ಚೂರಲ್ಮಲ ಗ್ರಾಮಗಳು ಭೀಕರ ಭೂಕುಸಿತಕ್ಕೆ ನಲುಗಿವೆ. ಬೆರಳಣಿಕೆಯಷ್ಟೇ ಮನೆಗಳು ಸದ್ಯ ಪ್ರದೇಶದಲ್ಲಿ ಕಂಡು ಬರುತ್ತಿವೆ. ಶಾಲೆ, ಕಟ್ಟಡಗಳು ಎಲ್ಲವೂ ನೆಲಸಮವಾಗಿವೆ.
ಮಂಗಳವಾರ ಬೆಳಗಿನ ಜಾವ ಎರಡು ಬಾರಿ ಸಂಭವಿಸಿದ ಭೂಕುಸಿತ ಜನವಸತಿ ಪ್ರದೇಶವನ್ನೇ ಅಳಿಸಿ ಹಾಕಿದೆ. ಭೂಕುಸಿತ ಸಂಭವಿಸಿದ ಸುತ್ತಲಿನ ಪ್ರದೇಶಗಳಲ್ಲಿನ ರೆಸಾರ್ಟ್, ಮದರಸಾ, ಶಾಲೆಗಳು ಆಶ್ರಯ ಕೇಂದ್ರವಾಗಿ ಮಾರ್ಪಾಡು ಮಾಡಲಾಗಿದ್ದು, ವಯನಾಡು ಜಿಲ್ಲೆಯಲ್ಲಿ 83 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಸುಮಾರು 2,017 ಜನರಿಗೆ ಆಸರೆ ನೀಡಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಮುಂಡಕೈ ಹಾಗೂ ಚೂರಲ್ಮಲ ಜತೆಗೆ ಅಟ್ಟಮಾಲಾದಲ್ಲೂ ಸಾಕಷ್ಟು ಹಾನಿಯಾಗಿದ್ದು, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಎನ್ಡಿಆರ್.ಎಫ್, ಮಡ್ರಾಸ್ ರೆಜಿಮೆಂಟ್, ಎಸ್ಡಿಆರ್ಎಫ್, ಸ್ವಯಂ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಸೇರಿ 1200ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
