ಕೊಪ್ಪಳ: ಮಾಧ್ಯಮಗಳು ನಿಷ್ಪಕ್ಷಪಾತವಾಗಿದ್ದರೆ ಮಾತ್ರ ನನ್ನ ಬಳಿ ಮಾತನಾಡಲು ಬನ್ನಿ. ನೀವು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆಂಬಲಿಗರಾದರೆ ಬರಬೇಡಿ ಎಂದು ಬಿಜೆಪಿಯಿಂದ ಉಚ್ಚಾಟಿತಗೊಂಡಿರುವ ಭಿನ್ನಬಣದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gouda Patila) ತೀಕ್ಷ್ಣ ಉತ್ತರ ನೀಡಿದ್ದಾರೆ.
ಸಂಸ್ಥಾನ ಗವಿಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಯತ್ನಾಳ್, ಕೆಲ ಮಾಧ್ಯಮದವರು ವಿಜಯೇಂದ್ರ ಹಾಗೂ ಯಡಿಯೂರಪ್ಪಗೆ ಬೆಂಬಲವಾಗಿ ನಿಂತು ಈ ಸುದ್ದಿ ಬಿತ್ತರಿಸುತ್ತಾರೆ ಎಂದು ಹರಿಹಾಯ್ದರು.
ಯಾವ ಮಾಧ್ಯಮದವರು ಏನು ಆಟವಾಡುತ್ತವೆ ಎನ್ನುವುದು ನನಗೆ ಗೊತ್ತಿದೆ. ಕೆಲವು ಮಾಧ್ಯಮಗಳು ತಮ್ಮಿಂದಲೇ ರಾಜ್ಯದ ಜನರ ಅಭಿಪ್ರಾಯ ರೂಪುಗೊಳ್ಳುತ್ತವೆ ಎಂದು ಭಾವಿಸಿದ್ದು ಮೂರ್ಖತನ’ ಎಂದು ಆಕ್ರೋಶಗೊಂಡರು.
ಈ ವೇಳೆ ಕೆಲ ನ್ಯೂಸ್ ಚಾನಲ್ ಪ್ರತಿನಿಧಿಗಳ ಮೇಲೆ ಕೆಂಡಾಮಂಡಲವಾದ ಯತ್ನಾಳ್ ಮತ್ತು ವರದಿಗಾರರ ನಡುವೆ ಜಟಾಪಟಿ ನಡೆಯಿತು. ‘ನೀವೆಲ್ಲ ವಿಜಯೇಂದ್ರ ಹೇಳಿಕೊಟ್ಟಿದ್ದನ್ನು ಕೇಳಲು ಬಂದಿದ್ದೀರಿ. ವಿಜಯೇಂದ್ರ ಚೇಲಾಗಳೆಲ್ಲ ಗೆಟ್ ಔಟ್’ ಎಂದರು.
ವಿಜಯೇಂದ್ರ ಬಿಜೆಪಿ ಹೆಸರಿನಲ್ಲಿ ಹತ್ತಾರು ಸಾವಿರ ಕೋಟಿ ರುಪಾಯಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿ ಜೈಲಿಗೆ ಹೋದ ಯಡಿಯೂರಪ್ಪ, ಅಪ್ಪನ ಸಹಿ ನಕಲಿ ಮಾಡಿದ ವಿಜಯೇಂದ್ರ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್ ಬೆಂಬಲವಾಗಿ ನಿಂತಿದೆ. ಅವರಿಗಾಗಿ ನನ್ನನ್ನು ಉಚ್ಚಾಟಿಸಿದ್ದಾರೆ.
ಹೈಕಮಾಂಡ್ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪಗೆ ಲೀಸ್ ಕೊಟ್ಟಿದೆಯಾ? ಅಥವಾ ಆ ಕುಟುಂಬಕ್ಕೆ ಮಾರಿಕೊಂಡಿದೆಯಾ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.