
ವಿಜಯಪುರ: ಮತ್ತೆ ವಿಜಯೇಂದ್ರನ (B.Y.Vijayendra) ಅಧ್ಯಕ್ಷನಾಗಿ ಮಾಡಿದರೆ ಕರ್ನಾಟಕ ಬಿಜೆಪಿ ಬಾಂಬ್ ಕಟ್ಟಿಕೊಂಡು ಆತ್ಮಾಹುತಿ ಮಾಡಿಕೊಂಡಂತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಒಳ ಒಪ್ಪಂದದಿಂದ,10 ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋತಿದ್ದೇವೆ.
ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ದಾವಣಗೆರೆ ಸೇರಿದಂತೆ 10 ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ವಿಜಯೇಂದ್ರನ ಸೂಚನೆ ಮೇರೆಗೆ ಚೇಲಾಗಳು ಶ್ರಮಿಸಿದ್ದಾರೆ.
ಕೊಪ್ಪಳದಲ್ಲಿ ಬಿ.ವೈ.ವಿಜಯೇಂದ್ರ ಒಬ್ಬ ಚೇಲಾ ಇದ್ದಾನೆ ಆತ ರಾಘವೇಂದ್ರ ಹಿಟ್ನಾಳ ಅಣ್ಣ ಆರಿಸಿ ಬರಲಿ ಎಂದು ವಿಜಯೇಂದ್ರ ಜೊತೆಗೆ ಡೀಲ್ ಮಾಡಿಕೊಂಡಿದ್ದಾನೆ ಎಂದು ನೇರವಾಗಿ ಆರೋಪಿಸಿದರು.
ಮೊನ್ನೆ ಕಾಂಗ್ರೆಸ್ ಚೆನ್ನಗಿರಿ ಶಾಸಕ ಶಿವಗಂಗಾ ಬಸವರಾಜ ನೇರ ಆರೋಪ ಮಾಡಿದ್ದಾರೆ. ವಿಜಯೇಂದ್ರನ ಚೇಲಾ ಕೋಟಿ ಕೋಟಿ ಹಣ ಪಡೆದು ಒಪ್ಪಂದ ಮಾಡಿಕೊಂಡು ಬಿಜೆಪಿ ಅಭ್ಯರ್ಥಿನ ಸೋಲಿಸಿದ್ದಾರೆ. ಸಾಕ್ಷಿ ಕೊಡ್ತಿನಿ, ಯಾವ ದೇವಸ್ಥಾನಕ್ಕೆ ಬೇಕಾದರೂ ಬರ್ತಿನಿ ಎಂದು ಸವಾಲ್ ಎಸೆದಿದ್ದಾರೆ.
ಇದಕ್ಕಿಂತ ಸಾಕ್ಷಿ ಬೇಕಾ..? ಮತ್ತೆ ವಿಜಯೇಂದ್ರನ ಅಧ್ಯಕ್ಷ ಮಾಡಿದರೆ ಬಿಜೆಪಿ ಬಾಂಬ್ ಕಟ್ಟಿಕೊಂಡು ತಾವೇ ಸ್ಪೋಟ ಮಾಡಿಕೊಂಡಂತೆ. ಅದೇ ಬೇಕು ಅಂದ್ರೆ ಯಡಿಯೂರಪ್ಪನ ಮಾತು ಕೇಳಿ ವಿಜಯೇಂದ್ರನ ಮುಂದುವರಿಸಲಿ.
ವಿಜಯೇಂದ್ರ ಕಣ್ ಬಿಡೋಕ್ ಮುಂಚೆ ನಾವ್ ಪಕ್ಷ (ಬಿಜೆಪಿ) ಕಟ್ಟಿದ್ದೇವೆ. ಮಾತ್ ಎತ್ತುದ್ರೆ ನಮ್ ಪಕ್ಷ ಕಟ್ಯಾನ, ನಮ್ ಅಪ್ಪ ಸೈಕಲ್ ಹೊಡೆದಾನ ಅಂತಾನೆ.. ನಿಮ್ ಅಪ್ಪ ಅಷ್ಟೇ ಅಲ್ಲಪ್ಪಾ.. ನಾವು ಸೈಕಲ್ ಹೊಡೆದಿದ್ದೇವೆ, ನಮಗೇನ್ ಹೆಲಿಕಾಪ್ಟರ್ ಇತ್ತೇನು..?
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದವರು ಯಾರು? ಡಿ.ಕೆ.ಶಿವಕುಮಾರ್ ಮತ್ತು ವಿಜಯೇಂದ್ರ ಕೂಡಿ, ರಮೇಶ್ ಜಾರಕಿಹೊಳಿ ಜೀವನ ಹಾಳು ಮಾಡಿದ್ದಾರೆ. ಇಂತಹ ಹಲ್ಕಾ ಕೆಲ್ಸ ಯಾರಾದರೂ ಮಾಡುತ್ತಾರಾ?
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗಬೇಕು. ಬದಲಾವಣೆಯ ಬಗ್ಗೆ ಚರ್ಚೆಗಳು ಬೇಡ, ಬದಲಾವಣೆ ಆಗಲಿ. ಬಿವೈ ವಿಜಯೇಂದ್ರನಿಂದ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದೆ ಎಂದರು.

