ಕೆ.ಎಂ. ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ನಮ್ಮ ಮೆಟ್ರೋ (Metro) ದೊಡ್ಡಬಳ್ಳಾಪುರಕ್ಕೂ ವಿಸ್ತರಣೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ತಾಲೂಕಿನ ಜನತೆಗೆ ನಿರಾಸೆ ಎದುರಾಗಿದೆ.
ಹೌದು ಈ ಕುರಿತಂತೆ ಸದನದಲ್ಲಿ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ, ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಉತ್ತರ ನೀಡಿದ್ದಾರೆ.
ಇದರ ಅನ್ವಯ ಮೆಟ್ರೋ ಯೋಜನೆಯ 3 ಮತ್ತು 3 ಎ ಹಂತಗಳಿಗೆ ಈಗಾಗಲೇ ಒಪ್ಪಿಗೆ ದೊರೆತಿದ್ದು, ಈ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರದವರೆಗೆ ವಿಸ್ತರಣೆ ಮಾಡುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೆಟ್ರೋ ರೈಲು ಯೋಜನೆಯನ್ನು ಸಮಗ್ರ ಚಲನಾಶೀಲತಾ ಯೋಜನೆ (ಸಿಎಂಪಿ) ಅಡಿ ರೂಪಿಸಲಾಗು ತ್ತಿದ್ದು ಸಿಎಂಪಿ ಪರಿಷ್ಕರಣೆ ಕಾರ್ಯ ಪ್ರಾರಂಭಗೊಂಡಿದ್ದು, ದೊಡ್ಡಬಳ್ಳಾಪುರದವರೆಗೆ ಮೆಟ್ರೋ ವಿಸ್ತರಣೆ ಮಾಡುವ ವಿಚಾರವನ್ನು ಈ ಸಮಿತಿ ನಿರ್ಧರಿಸುತ್ತದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಹಂತ-2 ಎ ಹಾಗೂ 2-ಬಿ ಅನ್ವಯ ಕಾಮಗಾರಿ ನಡೆಸಲಾಗುತ್ತಿದ್ದು, 2027ಕ್ಕೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಅಲ್ಲಿಂದ ಮುಂದೆ ಸಾಕಷ್ಟು ಕೈಗಾರಿಕಾ ಅಭಿವೃದ್ಧಿ ನಡೆಯುತ್ತಿದ್ದು ದೊಡ್ಡಬಳ್ಳಾಪುರದವರೆಗೂ ಮೆಟ್ರೋ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ಇದೆ. ಆದರೆ, ಮೆಟ್ರೋ ಯೋಜನೆಯ 3 ಮತ್ತು 3 ಎ ಹಂತಗಳಿಗೆ ಈಗಾಗಲೇ ಒಪ್ಪಿಗೆ ದೊರೆತಿದ್ದು ಈ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರದವರೆಗೆ ವಿಸ್ತರಣೆ ಮಾಡುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೆಟ್ರೋ ಪರಿಷ್ಕರಣೆಗಾಗಿ ತಜ್ಞರನ್ನು ಒಳಗೊಂಡ ಸಿಎಂಪಿ ಸಮಿತಿಯನ್ನು ಪರಿಷ್ಕರಣೆ ಮಾಡಲಾಗಿದೆ. ಈ ಸಮಿತಿ ಮತ್ತೆ ಯಾವ ಪ್ರದೇಶಗಳು ಮೆಟ್ರೋ ಜಾಲಕ್ಕೆ ಸೇರಬೇಕೆಂಬುದನ್ನು ವೈಜ್ಞಾನಿಕವಾಗಿ ನಿರ್ಧರಿಸುತ್ತದೆ.
ಯಲಹಂಕ, ರಾಜಾನುಕುಂಟೆ ದೊಡ್ಡಬಳ್ಳಾಪುರ ಸೇರಿದಂತೆ 26 ಕಿ.ಮೀ. ಮೆಟ್ರೋ ಕಾರಿಡಾರ್ ಅನ್ನು ಗುರುತಿಸಲಾಗಿದೆ. ಇದು ಸಿಎಂಪಿ ಪರಿಷ್ಕರಣೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.