ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಇತ್ತೀಚೆಗಷ್ಟೇ ಏಕಾಏಕಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ (JDS) ಅಧ್ಯಕ್ಷ ಆಯ್ಕೆ ಬೆನ್ನಲ್ಲೇ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.
ಹೌದು ಕಳೆದ ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿದ್ದ ಬಿ.ಮುನೇಗೌಡ ಅವರ ಸ್ಥಾನಕ್ಕೆ ಕೆ.ವಿ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದ್ದು, ಈಗ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಸ್ಥಾನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜೆಡಿಎಸ್ ತನ್ನ ಪ್ರಭಾವ ಹೊಂದಿದೆ. ಆದರೆ ಇಲ್ಲಿನ ಮುಖಂಡರ ನಡುವಿನ ಬಣ ಬಡಿದಾಟ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಪಕ್ಷಕ್ಕೆ ಹಿನ್ನಡೆಯಾಗಲು ಕಾರಣ ಎಂಬುದು ಬಹಿರಂಗ ಸತ್ಯ.
ತಾಲೂಕು ಜೆಡಿಎಸ್ ಅಧ್ಯಕ್ಷರ ಆಯ್ಕೆ
ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಲಕ್ಷ್ಮೀಪತಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜೆಡಿಎಸ್ ಪದಾಧಿಕಾರಿಗಳ ವಿಸರ್ಜನೆಯಾಗಿದ್ದು, ನೂತನ ಅಧ್ಯಕ್ಷರ ಆಯ್ಕೆ ಕುರಿತು ಶೀಘ್ರದಲ್ಲೇ ಮುಖಂಡರು, ಕಾರ್ಯಕರ್ತರ ಸಭೆ ಕರೆಯಲು, ಸಲಹೆ ಪಡೆಯಲು ಸಿದ್ಧತೆ ನಡೆಯುತ್ತಿದೆ.
ದೊಡ್ಡಬಳ್ಳಾಪುರ ಜೆಡಿಎಸ್ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಪ್ರಮುಖವಾಗಿ ಹರೀಶ್ ಗೌಡ, ಹುಸ್ಕೂರು ಆನಂದ್, ಡಾ.ವಿಜಯ್ ಕುಮಾರ್, ವಕೀಲರಾದ ಅಂಜನೇಗೌಡ, ಸತೀಶ್ ಅವರ ಹೆಸರು ಕೇಳಿ ಬರುತ್ತಿದ್ದು, ಮತ್ತೊಮ್ಮೆ ಲಕ್ಷ್ಮೀಪತಯ್ಯ ಅವರೇ ಮುಂದುವರಿಯುವ ನಿರೀಕ್ಷೆಯಲ್ಲಿದ್ದಾರೆ.
“ಈ ಕುರಿತಂತೆ ಮುಖಂಡರ ಪ್ರತಿಕ್ರಿಯೆ“
ವರಿಷ್ಠರ ಸೂಚನೆಗೆ ಬದ್ದ; ಹರೀಶ್ ಗೌಡ

ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಕುರಿತು ಮಾತುಗಳು ಕೇಳಿ ಬರುತ್ತಿದೆ. ಈ ಕುರಿತಂತೆ ಪಕ್ಷದ ವರಿಷ್ಠರು ನಿಲುವಿಗೆ ಬದ್ದನಾಗಿರುವೆ ಎಂದು ಎಂದು ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಸ್ಥಾನ ಕೇಳಲ್ಲ; ಹುಸ್ಕೂರು ಆನಂದ್

ಪಕ್ಷದ ವರಿಷ್ಠರು ಈಗಾಗಲೇ ನನ್ನ ಅಭಿಪ್ರಾಯ ಕೇಳಿದ್ದಾರೆ. ನಾ ವಾಸ್ತವ ಸ್ಥಿತಿಯನ್ನು ವಿವರಿಸಿದ್ದೇನೆ. ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರನ್ನಾಗಿ ಮಾಡಿ ಎಂದು ವರಿಷ್ಠರನ್ನು ಕೇಳುವುದಾಗಲಿ, ಒತ್ತಾಯ ಮಾಡುವುದಾಗಲಿ ನಾ ಮಾಡಲ್ಲ. ವರಿಷ್ಠರು ಆಯ್ಕೆ ಮಾಡಿದರೆ ಜವಾಬ್ದಾರಿ ನಿರ್ವಹಿಸುವೆ ಎಂದು ಜೆಡಿಎಸ್ ಹಿರಿಯ ಮುಖಂಡ ಹುಸ್ಕೂರು ಆನಂದ್ ಹೇಳಿದ್ದಾರೆ.
ಕೆಲಸದ ಒತ್ತಡ, ಅಧಿಕಾರ ಇಲ್ಲದೆ ಪಕ್ಷ ಸಂಘಟನೆಗೆ ಸಕ್ರಿಯ: ಡಾ.ವಿಜಯಕುಮಾರ್

ಪಕ್ಷದ ಮುಖಂಡರು, ಹಿತೈಷಿಗಳು ಅಧ್ಯಕ್ಷ ಸ್ಥಾನಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಕೆಲಸದ ಒತ್ತಡದ ಕಾರಣ ಅಧ್ಯಕ್ಷ ಸ್ಥಾನ ನಿರ್ವಹಣೆ ಕಷ್ಟಸಾಧ್ಯವಿದೆ. ಅಧಿಕಾರ ವಿಲ್ಲದೆಯೇ 2028 ಕ್ಕೆ ಕುಮಾರಣ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲು, ಗ್ರಾಮಪಂಚಾಯಿತಿ ಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ಜೆಡಿಎಸ್ ಹಿರಿಯ ಮುಖಂಡ ಡಾ.ವಿಜಯಕುಮಾರ್ ಹೇಳಿದ್ದಾರೆ
ವರಿಷ್ಠರ ನಿಲುವಿಗೆ ಬದ್ದ: ಆಂಜನಗೌಡ

ವಕೀಲೀಕೆ ವೃತ್ತಿಯ ಒತ್ತಡವಿದೆ. ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿಬರುತ್ತಿರುವುದು ತಿಳಿಯಿತು. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಣಯಕ್ಕೆ ಬದ್ದ ಎಂದು ವಕೀಲರಾದ ಅಂಜನಗೌಡ ಹೇಳಿದ್ದಾರೆ.
ವರಿಷ್ಠರು ನಮ್ಮ ಶ್ರಮ ಗುರುತಿಸಿ ಕೊಟ್ಟರೆ ಸ್ವೀಕರಿಸುವೆ: ಸತೀಶ್

ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸಂಘಟನೆಯಲ್ಲಿ ತೊಡಗಿದ್ದೇನೆ. ಈ ವರೆಗೆ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಯ ಅವಕಾಶ ದೊರೆತಿಲ್ಲ. ಪಕ್ಷದ ವರಿಷ್ಠರು ನಮ್ಮ ಶ್ರಮವನ್ನು ಗುರುತಿಸಿ ಅಧ್ಯಕ್ಷರನ್ನಾಗಿಸಿದರೆ ಸಂತೋಷವಾಗಿ ಕಾರ್ಯನಿರ್ವಹಿಸುವೆ ಎಂದು ವಕೀಲರಾದ ಸತೀಶ್ ಹೇಳಿದ್ದಾರೆ.
ವರಿಷ್ಠರು ಮುಂದುವರಿಸಿದರೆ ಮುಂದುವರೆಯುವೆ: ಲಕ್ಷ್ಮೀಪತಯ್ಯ

ಮಾಜಿ ಅಧ್ಯಕ್ಷರಾದ ಬಿ.ಮುನೇಗೌಡ ಅವರ ಸಲಹೆ ಪಾಲಿಸಿ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರ ಆಯ್ಕೆ ಮಾಡುವಂತೆ ಜಿಲ್ಲಾ ಅಧ್ಯಕ್ಷರಿಗೆ ಹೇಳಲಾಗಿದೆ. ವರಿಷ್ಠರ ನಿಲುವಿಗೆ ಬದ್ಧನಾಗಿದ್ದು, ಮುಂದುವರಿಸಿದರೆ, ತಾಲೂಕು ಅಧ್ಯಕ್ಷನಾಗಿ ಮುಂದುವರೆಯುವೆ ಎಂದು ಲಕ್ಷ್ಮೀಪತಯ್ಯ ಹೇಳಿದ್ದಾರೆ.