ದೊಡ್ಡಬಳ್ಳಾಪುರ: ಯುವ ಸೇನೆ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ನಗರದ ಹಳೆ ಬಸ್ ನಿಲ್ದಾಣದಲ್ಲಿ ಚಿತ್ರ ನಟ ದಿವಂಗತ ಡಾ.ವಿಷ್ಣವರ್ಧನ್ ಅವರ 70ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೇಕ್ ಕಟ್ ಮಾಡಿದ ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿಬ್ಬೂರು ಜಯಣ್ಣ ಮಾತನಾಡಿ, ಡಾ.ವಿಷ್ಣುವರ್ಧನ್ ಕೇವಲ ನಟನಾಗಿ ಅಷ್ಟೆ ಉಳಿಯದೆ ಸಮಾಜಮುಖಿಯಾಗಿ ಎಲೆಮರೆ ಕಾಯಿಯಂತೆ ದಾನಧರ್ಮಗಳನ್ನು ಮಾಡುತ್ತಿದ್ದರು. ಈ ಮೂಲಕ ಅವರು ಒಬ್ಬ ಸ್ಟಾರ್ ನಟನಾಗಿ ಸಮಾಜಕ್ಕೆ ಮಾದರಿಯಾಗಿ ಬದುಕಿದವರು. ಆದರೆ ಇಂದಿನ ಸಿನೆಮಾ ರಂಗದ ನಾಯಕ ನಟರು ಇದೇ ದಾರಿಯಲ್ಲಿ ಸಾಗಿದರೆ ಮಾತ್ರ ಸಿನೆಮಾ ರಂಗ ಸಮಾಜದ ಸಕಾರಾತ್ಮಕ ಬದಲಾವಣೆ ಕಡೆ ಹೋಗಲು ಸಾಧ್ಯ. ಡಾ.ವಿಷ್ಣು ಇಂದು ನಮ್ಮ ನಡುವೆ ಇಲ್ಲದಿದ್ದರು ಅಭಿಮಾನಿಗಳು ಪ್ರತಿ ವರ್ಷ ನೆನೆಯುವ ಮೂಲಕ ಅವರನ್ನು ಜೀವಂತವಾಗಿ ಉಳಿಸಿರುವುದು ಶ್ಲಾಘನೀಯ ಎಂದರು.
ಎಸ್.ಆರ್.ವಿಶ್ವನಾಥ್ ಅಭಿಮಾನಿ ಬಳಗದಿಂದ N-95 ಮಾಸ್ಕ್ ವಿತರಣೆ ಮಾಡಿದರು. ಯುವ ಸೇನೆ ಡಾ.ವಿಷ್ಣು ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಅನ್ನದಾನ ಮತ್ತು ಸಿಹಿ ಹಂಚಲಾಯಿತು.
ನಗರಸಭಾ ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ಸಂಘದ ಮುಖ್ಯಸ್ಥ ಎನ್.ವಿಜಯಕುಮಾರ್ ವಿಷ್ಣು, ಮಧುಸೂದನ್, ದಯಾನಂದ್, ರಾಮಾಂಜಿನಪ್ಪ, ಸೋಮಶೇಖರ್, ನವೀನ್, ಚಮ್ಮನ್ ಸುಬ್ಬಯ್ಯ, ಅನಿಲ್, ಕಿರಣ್ ಅಕ್ಕಿ, ಪ್ರದೀಪ್, ಅಭಿಷೇಕ್ ಸೇರಿದಂತೆ ವಿಷ್ಣು ಅಭಿಮಾನಿಗಳು ಇದ್ದರು.

