ದೊಡ್ಡಬಳ್ಳಾಪುರ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ದಲಿತ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಯುವತಿಗೆ ಅನ್ಯಾಯವಾಗಿರುವುದು ಸ್ಪಷ್ಟವಾಗಿದ್ದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಸ್ವತಂತ್ರ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲ ಆಗ್ರಹಿಸಿದ್ದಾರೆ.
ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರಗಳ ವಿರುದ್ಧ ನಡೆಸಿದ ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ದಿನಕ್ಕೆ 88 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ನಿರಂತರ ಸಾಮೂಹಿಕ ಅತ್ಯಾಚಾರಗಳಿಂದಾಗುಇ ಅಲ್ಲಿನ ದಲಿತ ಮಹಿಳೆಯರು ಬದುಕುವ ಭರವಸೆಯನ್ನೆ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಸಿಬಿಐ ತನಿಖೆ ಮೇಲೆ ನಮಗೆ ವಿಶ್ವಾಸ ಇಲ್ಲ. ಹೀಗಾಗಿ
ನ್ಯಾಯಾಧೀಶರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಇದರೊಂದಿಗೆ ಆರೋಪಿಗಳ ರಕ್ಷಣೆಗೆ ನಿಂತಿರುವ ಯೋಗಿ ಆದಿತ್ಯನಾಥ್ ಅವರು ಕೂಡಲೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನಾವು ಹಿಂದು ಎನ್ನುವ, ಮನುಷ್ಯರೆಲ್ಲ ಒಂದೇ ಎನ್ನುವ ಪ್ರಧಾನಿ ಇಲ್ಲಿ ಹಿಂದು ಹೆಣ್ಣು ಮಗಳಿಗೆ ಇಂತಹ ಅನ್ಯಾಯವಾದರೂ ಪ್ರಧಾನಿ ದನಿ ಎತ್ತುತ್ತಿಲ್ಲ. ಈ ಹಂತದಲ್ಲಿ ಅಲ್ಲಿನ ಸರ್ಕಾರವೇ ಅತ್ಯಾಚಾರಿಗಳನ್ನು ರಕ್ಷಣೆ ಮಾಡುವಹಂತದಲ್ಲಿ ಸಂವಿಧಾನಕ್ಕೆ ದ್ರೀಹ ಮಾಡುತ್ತಿವೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಬೀದಿಗೆ ಇಳಿಯಬೇಕಾದ ಅನಿವಾರ್ಯತೆ ಇದೆ. ದಲಿತರು ಮನುಷ್ಯರೇ ಅಲ್ಲ ಎಂಬಂತೆ ವರ್ತಿಸುತ್ತಿರುವ ಮನೋ ಸ್ಥಿತಿಗಳು ಯುಪಿಯಲ್ಲಿ ನಿತ್ಯ ಅತ್ಯಾಚಾರಗಳು ನಡೆಯಲು ಕಾರಣವಾಗಿದೆ. ಇಂತಹ ಮನುವಾಧಿ ಸರ್ಕಾರಗಳನ್ನು ಕಿತ್ತೊಗೆಯಲು ಈ ದೇಶದ ಶ್ರಮಿಕ ವರ್ಗ ಮುಂದಾಗದೆ ಇದ್ದರೆ ನಮ್ಮ ಅವನತಿಗೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ನೀಡುವಲ್ಲಿ ಯೋಗಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಎಲ್ಲಾ ಆಡಳಿತ ವ್ಯವಸ್ಥೆ ನಿಮ್ಮ ಕೈಲಿದ್ದಾಗ ನೀವೇಕೆ ಸಾಕ್ಷಿ ಹಾಳು ಮಾಡಿದಿರಿ. ಈ ಹಿಂದೆ ಯೋಗಿ ಸರ್ಕಾರದಲ್ಲಿ ಶಾಸಕ ಕುಲದೀಪ್ಸಿಂಗ್ ಅತ್ಯಾಚಾರ ಪ್ರಕರಣದಲ್ಲು ಯೋಗಿ ಸರ್ಕಾರದಲ್ಲಿ ಜೀವಾವಧಿ ಶಿಕ್ಷೆ ಆಗುತ್ತದೆ. ಇದರ ಹಿಂದೆ ಒಂದು ವರ್ಷದ ಹೋರಾಟದ ನಂತರ ಶಿಕ್ಷೆ ಎಂಬುದೇ ಇಲ್ಲಿನ ಪ್ರಶ್ನೆಗಳು ಇವೆ. ಇಂತಹ ಪ್ರಕರಣಗಳು ಸಾಕಷ್ಟಿವೆ. ಈ ಪ್ರತಿಭಟನೆಗಳ ಸಂದರ್ಭದಲ್ಲಿ ಅತ್ಯಾಚಾರ ನಡೆದಿದೆ. ನಮಗೆ ನ್ಯಾಯ ಬೇಕು. ಹೆಣ್ಣಿನ ಘನತೆಯ ನ್ಯಾಯ ನಮಗೆ ಬೇಕಾಗಿದೆ ಎಂಬ ಗಟ್ಟಿ ದ್ವನಿ ಆಗಬೇಕಾಗಿದೆ. ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನವನ್ನು ರಕ್ಷಣೆ ಮಾಡುವ ಹೊಣೆ ನಮ್ಮದಾಗಿದೆ ಎಂದರು.
ಹಕ್ಕೋತ್ತಾಯಗಳು: ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರದ ಸಂತ್ರಸ್ಥೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಸ್ವತಂತ್ರ ನ್ಯಾಯಾಂಗ ತನಿಖೆ ಆಗಬೇಕಿದೆ. ಸಾಕ್ಷಿಗಳನ್ನು ನಾಶ ಮಾಡಿ ಸಂತ್ರಸ್ಥೆಯನ್ನು ಬೆಂಕಿಗೆ ಹಾಕಿದ ಪೊಲೀಸ್ ಅಧಿಕಾರಿಗಳು ಹಾಗು ಕಾನೂನು ಉಲ್ಲಂಘಿಸಿರುವ ಸ್ಥಳೀಯ ಪೊಲೀಸರ ಮೇಲೆ ಕಾನೂನಾತ್ಮಕ ಕ್ರಮ ಆಗಬೇಕಿದೆ. ಅತ್ಯಾಚಾರ ಪಕ್ರಣಗಳ ಆರೋಪಿಗಳನ್ನು ತ್ವರಿತವಾಗಿ ಶಿಕ್ಷಿಸುವ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಹಾಗು ಹತ್ರಾಸ್ ಅತ್ಯಾಚಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ವಹಿಸುವಲ್ಲಿ ಕಠಿಣ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ತಮ್ಮ ಹಕ್ಕೋತ್ತಾಯಗಳನ್ನು ಮಂಡಿಸಿದರು.
ಪ್ರತಿಭಟನಾ ಸಭೆಗೂ ಮುನ್ನ ನಗರದ ಹಳೆಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ, ದಸಂಸ ಜಿಲ್ಲಾ ಸಂಚಾಲಕ ರಾಜು ಸಣ್ಣಕ್ಕಿ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮಿಪತಿ, ಮಾದರ ಚನ್ನಯ್ಯ ಮಹಾ ಸಭಾ ಕೋರ್ ಕಮಿಟಿ ತಾಲೂಕು ದಲಿತ ವಿಮೋಚನಾ ಸೇನೆ ರಾಜ್ಯಅಧ್ಯಕ್ಷ ಮಾ.ಮುನಿರಾಜು, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ.ವೆಂಕಟೇಶ್, ವಕೀಲರ ಸಂಘದ ರೇಣುಕಾರಾಧ್ಯಕ್ಷ ರೈತ ಸಂಘದ ಜಿಲ್ಲಾ ಮುಖಂಡ ನಾಗಸಂದ್ರ ಪ್ರಸನ್ನ, ಪಿವಿಸಿ(ಎಸ್) ಜಿಲ್ಲಾ ಮುಖಂಡ ಗೂಳ್ಯ ಹನುಮಣ್ಣ, ಡಿಎಚ್ಎಸ್ ಮುಖಂಡ ಮಂಜುನಾಥ್ ಸೇರಿದಂತೆ ವಕೀಲರ ಸಂಘ ಎಲ್ಲಾ ಪ್ರಗತಿಪರ, ಕನ್ನಡ ಪರ, ದಲಿತ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

