ದೊಡ್ಡಬಳ್ಳಾಪುರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳ ಕರೆ ಕೊಟ್ಟಿರುವ ಕರ್ನಾಟಕ ಬಂದ್ ಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಡಾ.ರಾಜ್ಕುಮಾರ್ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘಟನೆಗಳು, ವರ್ತಕರ ಸಂಘ ಕೃಷ್ಣರಾಜೇಂದ್ರ ಮಾರುಕಟ್ಟೆ ವರ್ತಕರ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ 30ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ತಮ್ಮ ಬೆಂಬಲ ಘೋಷಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರಕ್ಕೆ ರಾಜ್ಯದಿಂದ 25 ಸಂಸದರನ್ನು ಕೊಟ್ಟಿದ್ದು, ಜನಪರವಾಗಿ ಕೆಲಸ ಮಾಡಬೇಕಿದ್ದ ಸರ್ಕಾರ ಕಾರ್ಮಿಕ ಕಾಯ್ದೆಗಳು, ಎಪಿಎಂಸಿ, ಭೂ ಸುಧಾರಣ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮತ್ತು ವಿದ್ಯುತ್ ಖಾಸಗೀಕರಣ ಸೇರಿದಂತೆ ಸುಗ್ರೀವಾಜ್ಙೆಗಳ ಮೂಲಕ ಹಲವಾರು ಜನ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು.
ಕನ್ನಡಿಗರನ್ನು ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಲು ಬಿಡುವುದಿಲ್ಲ ಎಂದ ಮುಖಂಡರು, ಈ ಬಂದ್ ಯಾವುದೇ ಭಾಷೆ ಅಥವಾ ಧರ್ಮದವರ ವಿರುದ್ಧವಲ್ಲ. ಬದಲಿಗೆ ಬಿಜೆಪಿ ನೇತೃತ್ವದ ಸರ್ಕಾರಗಳು ಕರುನಾಡು ಮತ್ತು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹಕ್ಕೆ ವಿರೋಧ ವ್ಯಕ್ತಪಡಿಸುವುದಾಗಿದೆ ಎಂದು ಸಮರ್ಥಿನೆ ಮಾಡಿಕೊಂಡರು.
ಬಂದ್ ಮಾಡುವಂತೆ ಒತ್ತಡವಿಲ್ಲ: ನಾವು ಯಾರನ್ನೂ ಬಲವಂತವಾಗಿ ಬಂದ್ ಮಾಡುವಂತೆ ಒತ್ತಡ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ ಮುಖಂಡರು ಕಳೆದ ಆರು ತಿಂಗಳ ಕರೊನಾ ಸಾಂಕ್ರಾಮಿಕ ಸಂಕಷ್ಟದಲ್ಲಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದು ಸಂಕಷ್ಟವನ್ನು ಅನುಭವಿಸಿದ್ದೇವೆ, ರಾಜ್ಯದ ಅಸ್ಮಿತೆಯ ಉಳಿವಿಗಾಗಿ ಒಂದು ದಿನದ ಬಂದ್ಗೆ ಸಹಕರಿಸುವಂತೆ ವರ್ತಕರು ಮತ್ತು ಜನರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಸಂಜೀವ್ ನಾಯಕ್, ಸು.ನರಸಿಂಹಮೂರ್ತಿ, ತ.ನ.ಪ್ರಭುದೇವ, ರಮೇಶ್, ಪ್ರಮಿಳಾ ಮಹದೇವ್, ಆದಿತ್ಯನಾಗೇಶ್, ಆರ್. ಕೆಂಪರಾಜ್, ಶಿವಕುಮಾರ್, ಆರಾಧ್ಯ, ಮುನೇಗೌಡ, ಅಂಜನಮೂರ್ತಿ, ಗುರುರಾಜ್, ಸತ್ಯನಾರಾಯಣ್, ಮುಸ್ತಪಾ, ಜಿ.ಲಕ್ಷ್ಮೀಪತಿ, ಮಲ್ಲೇಶ್, ಪು.ಮಹೇಶ್, ಜಯರಾಮು, ಸತೀಶ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಅನುಸರಿಸಿ.

