ದೊಡ್ಡಬಳ್ಳಾಪುರ: ಕರ್ನಾಟಕದ ಪ್ರಸಿದ್ಧ ನಾಗರಾಧನೆಯ ಕ್ಷೇತ್ರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜ.19ರಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವ ಹಾಗು ಅದಕ್ಕು ಮುಂಚಿತವಾಗಿ ಸೇರಲಾಗುತ್ತಿದ್ದ ದನಗಳ ಜಾತ್ರೆಯನ್ನು ರದ್ದು ಮಾಡುವಂತೆ ಆಡಳಿತ ಮಂಡಳಿ ನಿರ್ಣಯಿಸಿದೆ ಎಂದು ಘಾಟಿ ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯವರಿಗೆ ಬರೆದಿದ್ದಾರೆ ಎನ್ನಲಾಗಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು, ಅಲ್ಲದೆ ದನಗಳ ಜಾತ್ರೆಗೂ ಸಹ ವಿವಿಧ ರಾಜ್ಯಗಳಿಂದ ರಾಸುಗಳು ಸೇರುತ್ತಿದ್ದವು ಆದರೆ ಕೋವಿಡ್-19 ಹಿನ್ನೆಲೆ ಈ ಬಾರಿ ಬ್ರಹ್ಮರಥೋತ್ಸವ ಹಾಗೂ ದನಗಳ ಜಾತ್ರೆ ನಡೆಸದಿರಲು ದೇವಸ್ಥಾನ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಪತ್ರದಲ್ಲಿದೆ.
ಪತ್ರದಲ್ಲಿನ ಸಂದೇಶದಂತೆ: 2020-21ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ವಾರ್ಷಿಕ ಜಾತ್ರಾ ಉತ್ಸವ ದಿನಾಂಕ 15-01-2021ರಿಂದ ಪ್ರಾರಂಭವಾಗಿ 19-01-2021ರ ಪುಷ್ಯ ಶುದ್ಧ ಷಷ್ಠಿಯ ಮಂಗಳವಾರದಂದು ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವ ನಡೆಯ ಬೇಕಿತ್ತು. ಆದರೆ ಪ್ರತಿವರ್ಷದಂತೆ ಈ ಬಾರಿಯು ಬ್ರಹ್ಮರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಿಸುವುದರಿಂದ, ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಿರುವ ಹಿನ್ನೆಲೆ ಬ್ರಹ್ಮರಥೋತ್ಸವ ಹಾಗೂ ರಾಸುಗಳ ಜಾತ್ರೆಯನ್ನು ರದ್ದು ಮಾಡುವಂತೆ ನಿರ್ಣಯಿಸಿ ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.
ಧಾರ್ಮಿಕ ದತ್ತಿ ಆಯುಕ್ತರ ಆದೇಶದ ಹಿನ್ನಲೆ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ನಡೆಯುವ ಸೇವೆಗಳು,ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಉತ್ಸವಗಳನ್ನು ರದ್ದು ಮಾಡಲಾಗಿದೆ, ಈ ಹಿನ್ನೆಲೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಆಡಳಿತ ಮಂಡಳಿ ಸಹ ಸಾಂಕೇತಿಕ ಬ್ರಹ್ಮರಥೋತ್ಸವ ಆಚರಣೆ ಮಾಡಲು ತೀರ್ಮಾನಿಸಿದೆ.
ಈ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ರಾಜಕೀಯ ಪ್ರಚಾರ, ಸಭೆಗಳಿಗೆ ಸೇರುವ ಜನರಿಗಿರದ ನಿಯಂತ್ರಣ ಧಾರ್ಮಿಕ ಕಾರ್ಯಗಳಿಗೆ ಏಕೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
(ಸಂಗ್ರಹ ಚಿತ್ರ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

