ದೊಡ್ಡಬಳ್ಳಾಪುರ: ವ್ಯಕ್ತಿಗಳನ್ನು ನಂಬುವಾಗ ಮಾತುಗಳ ಮೇಲಷ್ಟೇ ಅವಲಂಬಿತವಾಗದೆ ಅವರ ನಡವಳಿಕೆಗಳ ಮೇಲು ಅವಲಂಬಿತವಾಗಿರುತ್ತದೆ ಎಂದು ಉಪನ್ಯಾಸಕ ಕೆ.ವೆಂಕಟೇಶ್ ಹೇಳಿದರು.
ಅವರು ನಗರದ ಮಹಿಳಾ ಸಮಾಜ ಕಸ್ತೂರಿಬಾ ಶಿಶುವಿಹಾರ ಹಾಗೂ ಮೈಸೂರಿನ ಅರ್ಕ ಫೌಂಡೇಷನ್ ವತಿಯಿಂದ ನಡೆದ ‘ಹೊಳೆಯುವುದೆಲ್ಲ ಚಿನ್ನ’ ಪುಸ್ತಕ ಕುರಿತು ನಡೆದ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ಲೆಕ್ಕಾಚಾರಕ್ಕೆ ಸಿಲುಕದೇ ಇರುವುದು ಏನೋ ಇದೆ ಅನ್ನುವುದರ ಹುಡುಕಾಟ ನಡೆಯುತ್ತಲೇ ಇದೆ. ಅಲ್ಲದೆ ಕಾಣದೇ ಇರುವುದರ ಬಗೆಗಿನ ನಂಬಿಕೆ ಮೇಲೆಯೇ ಮನುಷ್ಯನ ಬದುಕು ನಡೆಯುತ್ತಿದೆ. ನಮಗೆ ಸಂಪೂರ್ಣ ಸೋಲು,ಗೆಲುವು ಎನ್ನುವುದಷ್ಟೇ ಇರುವುದಿಲ್ಲ ಎಲ್ಲವೂ ಸಹ ಅಪೂರ್ಣವಾಗಿಯೇ ಇರುತ್ತವೆ. ನಮ್ಮನ್ನು ನಾವು ಚನ್ನಾಗಿ ಅರಿತುಕೊಳ್ಳಲು ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ನೋಡುವಂತೆ ನಮ್ಮ ಜೀವನ ಕ್ರಮವನ್ನು ಹೊಂದಿಸಿಕೊಳ್ಳಬೇಕು. ಇಂತಹ ಇನ್ನು ಹತ್ತಾರು ವಿಚಾರಗಳನ್ನು ಹೊಳೆಯುವುದೆಲ್ಲ ಚಿನ್ನ ಪುಸ್ತಕದಲ್ಲಿ ಶ್ರೀನಿವಾಸ್ ಅರ್ಕ ಅವರು ಜನ ಸಾಮಾನ್ಯರಿಗು ತಿಳಿಯುವಂತೆ ವಿವರಿಸಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ಬಿ.ಎಲ್.ರಾಮಕೃಷ್ಣ ಮಾತನಾಡಿ, ನಮ್ಮ ಪ್ರತಿ ನಿತ್ಯದ ಊಟವು ಸೇರಿದಂತೆ ಎಲ್ಲವೂ ಸಹ ಮಿತವಾಗಿದ್ದಾಗ ಮಾತ್ರ ಬದುಕು ಸುಗಮವಾಗಿರಲು ಸಾದ್ಯ. ಹಾಸ್ಯ ಪ್ರಜ್ಞೆ ಇರುವವರಿಗೆ ಜನ ಸಂಪರ್ಕ ಮತ್ತು ಆರೋಗ್ಯ ಚನ್ನಾಗಿರಲಿದೆ ಎಂದರು.
ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಅರೋಗ್ಯ, ಶಿಕ್ಷಣ, ಉತ್ತಮ ಸ್ಥಿತಿಯ ಬದುಕನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಒಂದಿಷ್ಟು ಅಧ್ಯಾತ್ಮದಲ್ಲೂ ಆಸಕ್ತಿ ವಹಿಸಿದರೆ ಹೆಚ್ಚು ದಿನಗಳ ಕಾಲ ಆರೋಗ್ಯವಾಗಿರಲು ಸಹಾಯಕವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್.ಪ್ರಭಾ ವಹಿಸಿದ್ದರು. ಸಮಾರಂಭದಲ್ಲಿ ಅರ್ಕ ಫೌಂಡೇಷನ್ನ ಶ್ರಿನಿವಾಸ್ ಅರ್ಕ, ಪತ್ರಕರ್ತ ಪಿ.ಯು.ಸಂತೋಷ್, ಮಹಿಳಾ ಸಮಾಜದ ಉಪಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ದೇವಕಿ, ಖಜಾಂಚಿ ಯಶೋಧ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.

