
ದೊಡ್ಡಬಳ್ಳಾಪುರ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ನಡೆಯುವ ಕಾಟಿಮರಾಯನ ಆಚರಣೆಗೆ ಸಕಲ ಸಿದ್ದತೆ ನಡೆದಿದೆ. ಸಂಕ್ರಾಂತಿ, ಮಕರಸಂಕ್ರಾಂತಿ ಮುಂತಾದ ಹೆಸರುಗಳಿಂದ ಕರೆಯುವ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿ ಕಾಟಿಮರಾಯನ ಹಬ್ಬವೆಂದು ಕರೆಯಲಾಗುತ್ತದೆ. ಕಾಟಿರಾಯನ ಹಬ್ಬದಂದು ರೈತರು ತಮ್ಮ ರಾಸುಗಳಿಗೆ ವಿಶೇಷ ಪೂಜೆ ಸಲ್ಲಿಸುವ, ಕಾಟಿಮರಾಯನಿಗೆ ಹರಕೆ ತೀರಿಸುವ,ಕಿಚ್ಚು ಹಾಯಿಸುವ ಅಚರಣೆಗಳಿಂದ ಸಂಕ್ರಾಂತಿ ಹಬ್ಬ ಗ್ರಾಮಗಳಲ್ಲಿ ವಿಶೇಷ ಗಮನ ಸೆಳೆಯುತ್ತದೆ. ಊರಿನ ಹೊರಗಿರುವ ಕಾಟಿಮರಾಯನ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣಿನಿಂದ ಅಲಂಕಾರ ಮಾಡಿ, ಅದಕ್ಕೆ ಬಾಳೆ ಮತ್ತು ಮಾವಿನ ಸೊಪ್ಪು ಕಟ್ಟುವುದು ಸಾಮಾನ್ಯ ದೃಶ್ಯವಾಗಿತ್ತು.
ಕ್ಷುದ್ರ ದೇವತೆಗಳ ಹೆಸರುಗಳಲ್ಲಿ ಒಂದು ಕಾಟಿಮ ಎಂಬುದು. ರೈತ ತಾನು ಸಾಕುವ ರಾಸುಗಳಿಗೆ ಯಾವುದೇ ಕಾಯಿಲೆಗಳು ಈ ಕ್ಷುದ್ರ ದೇವತೆಯಿಂದ ಬಾರದಿರಲೆಂದು ಪೂಜೆ ಸಲ್ಲಿಸುವುದು ಪದ್ದತಿಯಾಗಿದೆ. ಊರ ಹೊರಗಿನ ಭಾಗದಲ್ಲಿ ಮಣ್ಣಿನ ಗೋಪುರವನ್ನು ನಿರ್ಮಾಣ ಮಾಡಿ, ಅದನ್ನು ಕಾಟಿಮರಾಯನ ಗುಡಿ ಎಂದು ಕರೆಯಲಾಗುತ್ತದೆ. ಈ ಗೋಪುರಕ್ಕೆ ಸುಣ್ಣ ಮತ್ತು ಕೆಮ್ಮಣ್ಣು ಪಟ್ಟೆಗಳನ್ನು ಬಳಿಯಲಾಗುತ್ತದೆ. ಹೊಲಗಳಲ್ಲಿ ಸಿಗುವ ತುಂಬೆ ಹೂವು, ಅಣ್ಣೆ ಸೊಪ್ಪಿನ ಹೂವು, ಅವರೆ ಹೂವು, ಹುಚ್ಚೇಳ್ಳು ಹೂವುಗಳನ್ನು ಪೂಜೆಗೆ ಬಳಸಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ಮಂಟಪದ ರೀತಿಯಲ್ಲಿ ಕಾಟಿಮರಾಯನ ಗುಡಿ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ.
ಒಂದು ವಾರದಿಂದಲೇ ಕಾಟಿಮರಾಯನ ಹಬ್ಬಕ್ಕಾಗಿ ಹಳ್ಳಿಗಳಲ್ಲಿ ಸಿದ್ದತೆಯನ್ನು ಪ್ರಾರಂಭಿಸಲಾಗುತ್ತದೆ. ವಾರದ ಮೊದಲೇ ಹಳ್ಳಿಯ ಯುವಕರು ಹಾಡುಗಳನ್ನು ಹೇಳುತ್ತಾ ಮನೆ ಮನೆಗೆ ತೆರಳಿ ತುಂಬೆ ಹೂವು ಹಾಕುವ ಪದ್ದತಿ ಇದೆ. ನಂತರ ಪ್ರತಿ ಮನೆಯಿಂದ ಅಕ್ಕಿ, ಕಾಳು, ಬೆಲ್ಲ ಸೇರಿದಂತೆ ರೈತರು ಬೆಳೆಯುವ ಹಲವಾರು ಪದಾರ್ಥಗಳನ್ನು ಸಂಘಟಕರು ಸಂಗ್ರಹಿಸುತ್ತಾರೆ. ಹಬ್ಬದ ದಿನ ಊರ ಹೊರಗಿನ ಸ್ಥಳದಲ್ಲಿರುವ ಕಾಟಿಮರಾಯನ ಗುಡಿಯ ಬಳಿ ಗ್ರಾಮಸ್ಥರೆಲ್ಲಾ ಸೇರಿ ಪ್ರತಿ ಮನೆಯಿಂದ ಸಂಗ್ರಹಿಸಿರುವ ಅಕ್ಕಿ,ಕಾಳು,ಬೆಲ್ಲ ಇತ್ಯಾದಿ ಪದಾರ್ಥಗಳನ್ನು ಬೇಯಿಸಿ ಪ್ರಸಾದವನ್ನು ಸಿದ್ದಮಾಡಲಾಗುತ್ತದೆ. ರಾಸುಗಳು ಕಿಚ್ಚು ಹಾಯ್ದು ಮನೆಗಳಿಗೆ ಹೋದ ನಂತರ ಊರಿನ ಯುವಕರು ಪಂಜುಗಳನ್ನು ಕಟ್ಟಿಕೊಂಡು ಊರಿನ ಗಡಿಭಾಗಕ್ಕೆ ಹೋಗಿ ಅಲ್ಲಿ ಕಿಚ್ಚು ಹಾಕಿ ಬರುವುದು ಈ ಕಾಟಿಮರಾಯನ ಹಬ್ಬದ ವಿಶೇಷಗಳಲ್ಲಿ ಒಂದು.
ಇಂದು ಕಾಟಿಮರಾಯಸ್ವಾಮಿ ದೇವಾಲಯ ಉದ್ಘಾಟನೆ: ತಾಲ್ಲೂಕಿನ ಕಾಡನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಟಿಮರಾಯಸ್ವಾಮಿ ದೇವಾಲಯದ ಉದ್ಘಾಟನೆ ಜ.14 ನಡೆಯಲಿದೆ.ಕಾಟಿಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು,ದಾಸೋಹ, ಚನ್ನಕೇಶವಸ್ವಾಮಿ ಭಜನಾ ಮಂಡಲಿ ಕಲಾವಿದರಿಂದ ಭಜನೆ,ರಾಸುಗಳ ಉತ್ಸವ ಮತ್ತು ಮೆರವಣಿಗೆ,ಕಿಚ್ಚು ಹಾಯಿಸುವ ಕಾರ್ಯಕ್ರಮಗಳು ನಡೆಯಲಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

