
ದೇಶದ ಇತಿಹಾಸದಲ್ಲಿ ಅತಿದೊಡ್ಡ ರೈತ ಪ್ರತಿಭಟನೆ ‘ಎನ್ನಿಸಿಕೊಂಡ’ ಕಿಸಾನ್ ರ್ಯಾಲಿಯು ಶುರುವಾಗಿ ಬರೋಬ್ಬರಿ 165 ದಿನಗಳು ಕಳೆದವು. ಅಂದಿನಿಂದ ಇಂದಿನವರೆಗೂ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವಣ ಒಂಭತ್ತು ಸಂಧಾನ ಸಭೆ ನಡೆದರೂ ಯಾವುದೂ ಯಶಸ್ವಿಯಾಗಲಿಲ್ಲ. ಕೇಂದ್ರ ಸರ್ಕಾರ ಇತ್ತೀಚೆಗೆ ತಿದ್ದುಪಡಿ ಮಾಡಲಾದ ಕೃಷಿ ಕಾಯಿದೆಗಳ ವಿರೋಧಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅಷ್ಟಕ್ಕೂ ರೈತರು ಈ ಮಟ್ಟದಲ್ಲಿ ಆ ಕಾಯಿದೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿಂದೆ ” ಕಾಣುವ ಕೈ”ಗಳ ಹಸ್ತಕ್ಷೇಪ ಇರುವ ಆರೋಪ ಕೇಳಿಬರಲಾರಂಭಿಸಿದೆ.
ನಾವು ಈ ಪ್ರತಿಭಟನೆಯ ಆರಂಭದ ದಿನಗಳ ಘಟನಾವಳಿಗಳನ್ನು ಗಮನಿಸಿದಾಗ ಅದು ಕೇವಲ ರೈತರ ಪ್ರತಿಭಟನೆಯಾಗಿರಲಿಲ್ಲ. ಬದಲಿಗೆ ಅಲ್ಲಿ ದೇಶ ವಿರೋಧಿ ಘೋಷಣೆಗಳು ಮೊಳಗಿದ್ದವು ಎಂಬ ಆರೋಪ. ತದ ನಂತರದಲ್ಲಿ ದೇಶದ್ರೋಹ ಪ್ರಕರಣಗಳಲ್ಲಿ ಬಂಧಿಯಾಗಿರುವ ಮುಖಂಡರ ಬಿಡುಗಡೆಗೆ ಒತ್ತಾಯಿಸಿ ಆಗ್ರಹಗಳು ಕೇಳಿಬಂದವು. ಇಷ್ಟೇ ಅಲ್ಲದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುತೇಕರು ರೈತರೇ ಅಲ್ಲ ಎಂಬುದು ಸಹ ಬಯಲಾಗಿತ್ತು.
ಹಾಗಾದರೆ ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರೇ ಅಲ್ಲವೇ? ಎಂಬ ಪ್ರಶ್ನೆಗೆ ಉತ್ತರ: ಬಹುತೇಕರು ರೈತರಲ್ಲ ಎನ್ನಲಾಗುತ್ತಿದೆ.
ನೇರವಾಗಿ ಹೇಳಬೇಕೆಂದರೆ, ಇದೊಂದು ಪೂರ್ವ ನಿಯೋಜಿತ “ಷಡ್ಯಂತ್ರ”. ಎನ್ನುವ ಆರೋಪ ವ್ಯಾಪಕವಾಗಿದೆ. ಮೇಲೆ ತಿಳಿಸಿದ ಅಂಶಗಳ ಜೊತೆಗೆ
ಇದಕ್ಕೆ ಇಂಬು ನೀಡುವಂತಹ ಇನ್ನೂ ಕೆಲವು ಅಂಶಗಳಿವೆ. ಈ ಹೋರಾಟಕ್ಕೆ ಆರ್ಥಿಕ ನೆರವು ನೀಡಿರುವ ವಿರೋಧ ಪಕ್ಷದ ಇಂಗಿತವೇನೆಂದರೆ, ಪ್ರಸ್ತುತ ಕೇಂದ್ರ ಸರ್ಕಾರ ತಂದಿರುವ ಪರಿಷ್ಕೃತ ಕಾಯಿದೆಯಿಂದಾಗಿ ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖಂಡರ ” ಗೋಧಿ ಕಮೀಷನ್ ” ನಿಲ್ಲುವುದು ಒಂದೆಡೆಯಾದರೆ, ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿಗೆ ಮುಖಭಂಗ ಮಾಡುವ ಕಾಂಗ್ರೆಸ್ ಪಕ್ಷದ ಪ್ರಯತ್ನಗಳೆಲ್ಲವೂ ವಿಫಲವಾದದ್ದು ಇನ್ನೊಂದು ಎನ್ನಬಹುದು.
ಅಷ್ಟೇ ಅಲ್ಲದೇ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಜನ ಸರಬರಾಜಿನ ಉಸ್ತುವಾರಿ ವಹಿಸಿರುವುದು ಕಮ್ಯುನಿಸ್ಟ್ ಪಕ್ಷಗಳು. ಇದಕ್ಕೂ ಕಾರಣ ಇಲ್ಲದಿಲ್ಲ.
ಭಾರತದಲ್ಲಿ ಮೋದಿ ಮೇನಿಯಾ ಶುರುವಾದ ಮೇಲೆ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಎಷ್ಟು ಪ್ರಮಾಣದಲ್ಲಿ ಕಳೆದುಕೊಂಡಿದೆಯೋ..ಅಷ್ಟೇ ಪ್ರಮಾಣದಲ್ಲಿ ಬಂಗಾಳ ಹೊರತುಪಡಿಸಿ ದೇಶದೆಲ್ಲೆಡೆ ಕಮ್ಯುನಿಸ್ಟ್ ಸಹ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಅವೆಲ್ಲಕ್ಕಿಂತ ಮಿಗಿಲಾಗಿ ಕಮ್ಯುನಿಸ್ಟರ ಮೂಲವಾದಚಚೀನಾಗೆ ಭಾರತ ದೇಶ ಮೋದಿ ನೇತೃತ್ವದಲ್ಲಿ ಎಲ್ಲಾ ದಿಕ್ಕುಗಳಿಂದಲೂ ಛಡಿಯೇಟು ನೀಡಿರುವುದು.
ಇದೆಲ್ಲಾ ಕಾರಣಗಳಿಂದಲೇ ರೈತರ ಹೆಸರಿನಲ್ಲಿ ಶುರುವಾದ ಪ್ರತಿಭಟನೆ ದಿಕ್ಕುತಪ್ಪಿರುವುದು. ಇದಷ್ಟೇ ಅಲ್ಲದೇ ಪಂಜಾಬ್ ಮತ್ತು ಹರಿಯಾಣಗಳಲ್ಲಿ ರಿಲಯನ್ಸ್ ಜಿಯೋ ಮಾಲಿಕತ್ವದ ಸಾವಿರಾರು ಟವರ್ ಸ್ಥಂಭಗಳನ್ನು ಜಖಂಗೊಳಿಸಲಾಗಿದೆ. ನಿಜವಾದ ರೈತರಾರೂ ಇಂತಹ ಕುಕೃತ್ಯಗಳನ್ನು ಮಾಡುವುದಿಲ್ಲ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬೆರಳೆಣಿಕೆಯಷ್ಟು ಮುಗ್ಧ ರೈತರು “ಕೈ”ಗೊಂಬೆಗಳು ಎಂಬುದು ತಿಳಿದ ವಿಷಯವೇ..
ಇದೆಲ್ಲದರ ನಡುವೆ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಿದ್ದು, ಸಂಸತ್ತು ಜಾರಿಗೆ ತಂದ ಕಾಯ್ದೆಯನ್ನು ನ್ಯಾಯಾಲಯ ತಡೆ ನೀಡಬಹುದೇ…ಹಾಗೊಂದು ವೇಳೆ ಮಾಡಿದರೆ ಸಂವಿಧಾನಿಕ ಬಿಕ್ಕಟ್ಟು ಉಂಟಾಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.
ಏನೇ ಆದರೂ ಮೋದಿಯನ್ನು ಜಾಗತಿಕ ಮಟ್ಟದಲ್ಲಿ ಹಣಿಯಲೇಬೇಕೆಂಬ ಹಟಕ್ಕೆ ಬಿದ್ದಿರುವ ಮೋದಿ ವಿರೋಧಿಗಳು ಒಟ್ಟಾಗಿ ದಶದಿಕ್ಕುಗಳಿಂದಲೂ ಕುತಂತ್ರ ಹೆಣೆದು ರೈತರ ಹೆಸರಿನಲ್ಲಿ ಒಮ್ಮೆಲೇ ಪ್ರಯತ್ನಿಸಿದ್ದಾರೆ. ಹಾ… ಕೊನೆಯದಾಗಿ ಇನ್ನೊಂದು ಮಾತು.
ಬೆತ್ತಲೆಯಾಗಿರುವ ಸತ್ಯಕ್ಕೆ ಸುಳ್ಳಿನ ಸೆರಗನ್ನು ಮುಚ್ಚಿ, ಸುಳ್ಳನ್ನೇ ಸತ್ಯವಾಗಿಸುವ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರ ಎಷ್ಟೋ ವಿಫಲ ಯತ್ನಗಳ (CAA,ರಫೇಲ್) ಮುಂದುವರಿದ ಭಾಗವೇ ಇದು ಎಂಬುದು ಜಾಗತಿಕವಾಗಿ ಬೆತ್ತಲಾಗಿರುವ ಮತ್ತೊಂದು ಸತ್ಯ…….ಇಂತಿ ನಿಮ್ಮವ…ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಮೂಲಕ ನಮ್ಮೊಂದಿಗೆ ಜೊತೆಯಾಗಿ.

