
ಭಾರತ ದೇಶದ ಮುಕುಟ ಮಣಿ “ರೈತ” ಎಂಬುದು ಸಾರ್ವಕಾಲಿಕ ಶ್ರೇಷ್ಠ ಸತ್ಯ.
ದೇಶಕ್ಕೆ ಗಡಿ ಕಾಯುವ ಸೈನಿಕನ ಸೇವೆಯ ಪಾಲು ಎಷ್ಟಿದೆಯೋ ಅಷ್ಟೇ ರೈತನ ಪಾಲೂ ಇದೆ. ಹಾಗಾಗಿಯೇ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು “ಜೈ ಜವಾನ್ ಜೈ ಕಿಸಾನ್” ಎಂಬ ಘೋಷ ಮೊಳಗಿಸಿದ್ದು. ಭಾರತದ ಮೂಲ ಕಸುಬು ಅವತ್ತಿಂದ ಇವತ್ತಿನವರೆಗೂ ಕೃಷಿಯೇ ಆಗಿರುವುದು ಒಬ್ಬ ರೈತನಾಗಿ ನನಗೂ ಸೇರಿದಂತೆ ಎಲ್ಲಾರಿಗೂ ಹೆಮ್ಮೆಯ ವಿಷಯ.
ಇಂತಹ ರೈತನ ಹೆಸರಿನಲ್ಲಿ ಆಳುವ ಸರ್ಕಾರಗಳಿಂದ ಹಿಡಿದು ಊರಿಗೊಂದು,ಕೇರಿಗೊಂದು ಎಂಬಂತೆ ಬಹುತೆಕರು “ಬಣ್ಣದ ಶಾಲು” ಗಳನ್ನು ಹೊದ್ದು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಹಲವಾರು ಷಡ್ಯಂತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ ಇನ್ನೂ ಕೆಲವರು ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ.
ಸ್ವಾತಂತ್ರಾ ನಂತರ ಭಾರತದ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಮೂಲ ಪದ್ಧತಿಯಂತೆ ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು ಅನ್ನ ಬೆಳೆದು ತಾವೂ ತಿಂದು, ಉಳಿದದ್ದನ್ನು ದುರಾಸೆಯಿಲ್ಲದೇ ಅನ್ಯರಿಗೆ ಉಣಬಡಿಸುತ್ತಿದ್ದ. ಆಗ ರೈತನ ಜೀವನ ನೆಮ್ಮದಿಯಿಂದ ಸಾಗುತ್ತಿತ್ತು.
ಯಾವಾಗ ಹಸಿರು ಕ್ರಾಂತಿ ಹೆಸರಿನಲ್ಲಿ ಕೃಷಿ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸಲಾಯ್ತೋ ಆಗ ರೈತನಿಗೆ ಹೆಚ್ಚು ಲಾಭದ (ಅಲ್ಲಿಯವರೆಗೂ ರೈತನಿಗೆ ಅಲ್ಪ ಆದಾಯ ಬಂದರೂ ಸಹ ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆದು ಸಂತೃಪ್ತ ಜೀವನ ನಡೆಸುತ್ತಿದ್ದ) ಆಮಿಷ ತೋರಿಸಲಾಯಿತು.
ಆಗ ರೈತನ ಕೃಷಿ ಪದ್ಧತಿಯೇ ಬದಲಾಗಿ ಹೋಯ್ತು. ಮನುಕುಲದ ಆರೋಗ್ಯ ಹಾಗೂ ಪರಿಸರದ ಸ್ವಾಸ್ಥಕ್ಕೆ ಪೂರಕವಾದ ಸಾವಯವ ಕ್ರಮದಲ್ಲಿ ಕಡಿಮೆ ಇಳುವರಿ ಬಂದರೂ ಸಹ ಅತ್ಯಲ್ಪ ಖರ್ಚಿನಲ್ಲಿ ಬೇಸಾಯ ಮಾಡಿ ನೆಮ್ಮದಿಯ ನಿಸ್ವಾರ್ಥ ಜೀವನ ನಡೆಸುತ್ತಿದ್ದ ರೈತನ ತಲೆಗೆ ಅಧಿಕ ಇಳುವರಿ ಹಾಗೂ ಅಧಿಕ ಲಾಭದ ಅಫೀಮು ತುಂಬಿ, ಭಾರತದಲ್ಲಿ ಬಂಡವಾಳ ಹೂಡಿದ್ದ ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಭಾರತದ ಕೃಷಿಯ ಮೂಲ ಪದ್ಧತಿಯನ್ನೆ ಬದಲಾಯಿಸಲಾಯಿತು.
ಇಷ್ಟೆಲ್ಲಾ ಬೆಳವಣಿಗೆಯ ನಡುವೆ ರೈತನ ಹೆಸರಿನಲ್ಲಿ ಸಂಘಟನೆಗಳು ರೂಪುಗೊಂಡವು.ಆಳುವ ಸರ್ಕಾರಗಳು, ರೈತಪರ ಸಂಘಟನೆಗಳು,ಹಾಗೂ ಕೃಷಿ ಸಂಬಂಧಿತ ವಾಣಿಜ್ಯ ಕಂಪನಿಗಳು ರೈತನ ರಕ್ತವನ್ನು ತಿಗಣೆ ಹೀರಿದಂತೆ ಹೀರಿಬಿಟ್ಟವು. ಕ್ರಮೇಣ ರೈತ ಸಾಲದ ಶೂಲಕ್ಕೆ ತಲೆ ಕೊಟ್ಟುಬಿಟ್ಟ.
ಇಷ್ಟೆಲ್ಲಾ ಪೀಠಿಕೆಗೆ ಕಾರಣ..
ಪ್ರಸ್ತುತ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ “ರೈತನ ಹೆಸರಿನಲ್ಲಿ ನಡೆಯುತ್ತಿರುವ ಚಳುವಳಿಗಳು”.
ಹೌದು……!!
ನೂತನ ಕೃಷಿ ಕಾಯಿದೆಯನ್ನು ವಿರೋಧಿಸಿ ಚಳುವಳಿ ನಡೆಸುತ್ತಿರುವ ರೈತರಿಗೆ(ಕೆಲವರು ದಾರಿ ತಪ್ಪಿರುವ ಮುಗ್ಧ ಅಸಲಿ ರೈತರಿದ್ದಾರೆ), ಇದರ ನೇತೃತ್ವ ವಹಿಸಿದ ಸಂಘಟನೆಗಳಿಗೆ, ಮೋದಿಯನ್ನು ವಿರೋಧಿಸುವ ಸಲುವಾಗಿಯೇ ರೈತರ ಪರ ಒಲವು ತೋರಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ, ರೈತರ ಸೋಗಿನಲ್ಲಿ ಹಿಂಸಾಚಾರ ನಡೆಸುತ್ತಿರುವ ಕಮ್ಯುನಿಸ್ಟರಿಗೆ, ಹಾಗೂ ನೇಗಿಲು,ನೊಗ,ಹಾರೆ,
ಗುದ್ದಲಿ,ಮುಂಗಾರು-ಹಿಂಗಾರು,ಬಿತ್ತನೆ,ಕಟಾವು ಇದಾವುದರ ಗಂಧ ಗಾಳಿಯೂ ಇಲ್ಲದಿದ್ದರೂ ಪ್ರಚಾರದ ತೆವಲಿಗೋ ಅಥವಾ ಯಾರದ್ದಾದರೂ ಮರ್ಜಿಗೋ, ಹೊಟ್ಟೆಪಾಡಿಗೋ ಅಥವಾ ತಮ್ಮ ಅಸ್ತಿತ್ವದ ಉಳಿವಿಗೋ ಬೀದಿಯಲ್ಲಿ ಹಸಿರು,ನೀಲಿ,ಕೆಂಪು, ಹೀಗೆ ತರಹೇವಾರಿ ಬಣ್ಣಗಳ ಬಾವುಟಗಳನ್ನು ಹಿಡಿದು ಬಾಯಿ ಬಡಿದುಕೊಳ್ಳುವ ಎಲ್ಲರಿಗೂ…,,,” ಮುಕ್ಕಾಲು ಎಕರೆ ಜಾಗದಲ್ಲಿ ಒಕ್ಕಲುತನ ಮಾಡಿ ತಲೆತಲಾಂತರದಿಂದಲೂ ಮಾಡಿಕೊಂಡು ಬರುತ್ತಿರುವ ವ್ಯವಸಾಯವನ್ನು ಹೆಮ್ಮೆಯಿಂದ ಮುಂದುವರೆಸುತ್ತಿರುವ ಒಬ್ಬ ರೈತನಾಗಿ” ನನ್ನ ಕೆಲವು ಪ್ರಶ್ನೆಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ.
*ಆಧುನಿಕತೆಯ ಹೆಸರಿನಲ್ಲಿ ಅಧಿಕ ಇಳುವರಿ-ಲಾಭದ ಆಮಿಷ ತುಂಬಿ ರೈತನನ್ನು ದಾರಿ ತಪ್ಪಿಸಿ ಇಡೀ ದೇಶದ ಕೃಷಿ ಕ್ಷೇತ್ರವನ್ನೇ ಬಡವಾಗಿಸಿದ ಇಂದಿರಾ ಗಾಂಧಿಯವರ, ರಾಜೀವ್ ಗಾಂಧಿಯವರ, ನರಸಿಂಹ ರಾವ್ ಅವರ ಅಧಿಕಾರಾವಧಿಯ ರೈತವಿರೋಧಿ ಕೃಷಿನೀತಿಗಳನ್ನು ಒಮ್ಮೆಯಾದರೂ ಪ್ರಶ್ನಿಸಬೇಕು ಎನಿಸಲಿಲ್ಲವೇ ನಿಮಗೆ?
*ಮೋದಿ ಸರ್ಕಾರಕ್ಕೂ ಮುನ್ನ ಇದ್ದ ಕೃಷಿನೀತಿಗಳು ರೈತಪರ ಎಂಬುದು ನಿಜವೇ ಆಗಿದ್ದರೆ, ಅದೇ ಕಾಯ್ದೆಗಳು ಜಾರಿಗೆ ಬಂದಾಗಿನಿಂದ ಮಾತ್ರವೇ ರೈತನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಹಿಂದಿನ ಕಾರಣಗಳೇನು?
*ರೈತರ ಕೃಷಿ ಉತ್ಪನ್ನಗಳ ಮಾರುಕಟ್ಟೆ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳು ಅಥವಾ ರದ್ದತಿಗಳನ್ನು ಮಾಡದೆ, ಹೆಚ್ಚುವರಿಯಾಗಿ ದಲ್ಲಾಳಿಗಳ ಅವಶ್ಯಕತೆ ಇಲ್ಲದೇ ನೇರ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ರೈತಕುಲಕ್ಕೆ ಒಳಿತಲ್ಲದೇ ಮತ್ತೇನು?
*ಪ್ರಸ್ತುತ ಜಾರಿಗೆ ಬಂದಿರುವ ಕೃಷಿ ಕಾಯಿದೆಯಲ್ಲಿ ಮಧ್ಯವರ್ತಿ ಸಮೂಹವನ್ನೇ ಕಿತ್ತೆಸೆಯಲಾಗಿದೆ. ಹಾಗಾಗಿ ನೀವುಗಳು ರೈತರ ಹೆಸರಿನಲ್ಲಿ ಪ್ರತಿಭಟಿಸುತ್ತಿರುವುದು ನಿಜವಾಗಿಯೂ ಯಾರ ಪರವಾಗಿ..? ಅಥವಾ ಯಾರ ವಿರುದ್ಧವಾಗಿ..?
*ನೂತನ ಕೃಷಿ ಕಾಯಿದೆಯಲ್ಲಿ ರೈತರಿಗೆ ಅನ್ಯಾಯವಾಗುವುದೇ ನಿಜವಾಗಿದ್ದರೆ, 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವೇ ಈ ಕಾಯಿದೆ ಜಾರಿ ಮಾಡುವುದಾಗಿತ್ತು. ಹಾಗಾದರೆ ಇದೇ ಕಾನೂನನ್ನು ಕಾಂಗ್ರೆಸ್ ಜಾರಿಗೆ ತರುತ್ತೇನೆಂದಾಗ ಇಲ್ಲದ ನಿಮ್ಮ ಈ ಆಕ್ರಂದನಗಳು, ಮೋದಿವರು ಜಾರಿಗೆ ತಂದಾಗ ಮಾತ್ರ ಯಾಕೆ ಮುಗಿಲು ಮುಟ್ಟುತ್ತಿದೆ?
* ರೈತ ಸಂಘಟನೆಗಳಿಂದ, ರಾಜಕೀಯ ಪಕ್ಷದಿಂದ,ಕಮ್ಯುನಿಸ್ಟ್ ಹೋರಾಟಗಳಿಂದ , ಅಥವಾ ಇನ್ನಾವುದೇ ಸಂಘಟನೆಗಳಿಂದ ರೈತರ ಹಿತ ಕಾಯಲು ಸಾಧ್ಯವಾಗುವುದು ನಿಜವೇ ಆಗಿದ್ದರೆ ಅಷ್ಟೂ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದು ದಶಕಗಳೇ ಕಳೆದರೂ ಇನ್ನೂ ಯಾಕೆ ರೈತ ಆರ್ಥಿಕವಾಗಿ ಮೇಲೇರಲು ಸಾಧ್ಯವಾಗಲಿಲ್ಲ?
*ಪ್ರಸ್ತುತ ದೇಶಾದ್ಯಂತ ರೈತರ ಹೆಸರಿನಲ್ಲಿ ನಡೆಯುತ್ತಿರುವ ಚಳುವಳಿಗಳಲ್ಲಿ ದೇಶವಿರೋಧಿ, ಮೋದಿ ವಿರೋಧಿ ಶಕ್ತಿಗಳು ಬಂದು ಸೇರಿಕೊಂಡಿದ್ದಾದರೂ ಹೇಗೆ!?!? ಇಷ್ಟೆಲ್ಲಾ ಪ್ರಶ್ನೆಗಳೊಂದಿಗೆ…ನನ್ನ ಕೃಷಿ ಅನುಭವಕ್ಕೆ ಸಂಬಂಧಿಸಿದಂತೆ ಕೆಲವು ವೈಯಕ್ತಿಕ ಅಭಿಪ್ರಾಯಗಳು….:
*ಮೊತ್ತಮೊದಲನೆಯದಾಗಿ ಸರ್ಕಾರಗಳು ರೈತರ ಬಗೆಗಿನ ಈ ಇಬ್ಬಗೆ ನೀತಿಗಳನ್ನು ಬಿಡಬೇಕು. ರಾಸಾಯನಿಕ ಮುಕ್ತ ಕೃಷಿಗಾಗಿ ಕರೆ ಕೊಡುವ ಸರ್ಕಾರಗಳೇ ರಾಸಾಯನಿಕ ಗೊಬ್ಬರಗಳಿಗೆ ಸಹಾಯಧನ ನೀಡುವುದೇಕೆ..? ಸಾವಯವ ಪದ್ಧತಿ ಜೀವಂತವಾಗಿರಬೇಕಾದರೆ ರಾಸಾಯನಿಕ ಕ್ರಮಗಳನ್ನು ನಾಶಪಡಿಸಲೇಬೇಕಲ್ಲವೇ..?
ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಸಲುವಾಗಿ ಲಕ್ಷಾಂತರ ಕೋಟಿಗಳಷ್ಟು ಹಣ ವ್ಯಯಿಸುವ ಬದಲು ಲಕ್ಷಾಂತರ ಮರಗಳನ್ನು ಬೆಳೆಸಿ ಪೋಷಿಸಿದರೆ ತಾಪಮಾನ ತನ್ನಷ್ಟಕ್ಕೆ ತಾನೇ ಕಡಿಮೆಯಾಗುವುದಿಲ್ಲವೇ? ನಂತರ ವಾತಾವರಣ ಸಮತೋಲನ ಇರುವುದಲ್ಲವೇ? ವಾತಾವರಣ ಸಮತೋಲನದಲ್ಲಿದ್ದರೆ ಕೃಷಿ ಕ್ಷೇತ್ರದಲ್ಲೂ ಸಹ ಅಪಾರ ಬದಲಾವಣೆ ಆಗುವುದಲ್ಲವೇ?
*ರಾಜ್ಯದಲ್ಲಿಯೇ ಆಗಲಿ, ರಾಷ್ಟ್ರದಲ್ಲಿಯೇ ಆಗಲಿ..ಯಾವುದೇ ಸರ್ಕಾರಗಳು ಬಂದರೂ ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ರೈತಪರ ಎಂದು ಹೇಳಿಕೊಳ್ಳುವ ನೀವುಗಳು ಮಾಡುವ ಮೊದಲನೇ ತಪ್ಪು ರೈತರಿಗೆ ಸಾಲ ನೀಡುವುದು ಹಾಗೂ ತುಷ್ಟೀಕರಣಕ್ಕಾಗಿ ಮನ್ನಾ ಮಾಡುವುದು.
*ರೈತರಿಗೆ ನೀವು ಸಾಲ ಕೊಡುವುದೂ ಬೇಡ, ನಂತರ ಮನ್ನಾ ಮಾಡುವುದೂ ಬೇಡ. ಎಲ್ಲಾ ಹಳ್ಳಿಗಳಲ್ಲಿರುವ ಗೋಮಾಳಗಳಲ್ಲಿ ಸಸಿ ನೆಟ್ಟು ಮರಗಳನ್ನಾಗಿಸಿ ಪರಿಸರ ಕಾಪಾಡಿ.
*ಸಮುದ್ರಕ್ಕೆ ವ್ಯರ್ಥವಾಗಿ ಹರಿಯುವ ನೀರನ್ನು ಕಾಲುವೆಗಳ ಮೂಲಕ ರಾಷ್ಟ್ರಾದ್ಯಂತ ಕಾಲುವೆ ಜೋಡಣೆ ಮಾಡಿ ಅಲ್ಲಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ ರೈತರಿಗೆ ನೀರು ಸಿಗುವ ಹಾಗೆ ನೋಡಿಕೊಳ್ಳಿ.
*ಪ್ರಪಂಚದಲ್ಲಿ ಎಲ್ಲಾ ವಸ್ತುಗಳಿಗೂ ಗರಿಷ್ಠ ಮಾರಾಟ ಬೆಲೆ ಇರುತ್ತದೆ. ಹಾಗೆಯೇ ಕೃಷಿ ಸಂಬಂಧಿತ ಉತ್ಪನ್ನಗಳಿಗೆ ಗರಿಷ್ಠ ಮಾರಾಟ ಬೆಲೆ ನಿಗದಿಪಡಿಸಿ.(ತಾಂತ್ರಿಕ ಅಡಚಣೆಗಳಾಗುವುದಾದರೆ ಸರ್ಕಾರವೇ ಕನಿಷ್ಠ ಬೆಂಬಲ ಬೆಲೆ ನೀಡಲಿ).
ಇವೆರಡೂ ಸಾಧ್ಯವಾಗದಿದ್ದರೆ,,,*ಮಧ್ಯವರ್ತಿ ಸಮೂಹವನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸುವ
(ಸ್ಪರ್ಧಾತ್ಮಕ) ವಾತಾವರಣ ಸೃಷ್ಟಿ ಮಾಡಿಕೊಡಿ.ಎಲ್ಲಕ್ಕಿಂತ ಮಿಗಿಲಾಗಿ ರೈತರ ಜೀವ ಹಿಂಡುತ್ತಿರುವ ಈ ಕ್ರಿಮಿನಾಶಕ ಕಂಪನಿಗಳಿಗೆ ಬೀಗ ಜಡಿಯಿರಿ.
ಇಷ್ಟೆಲ್ಲಾ ಸುಧಾರಣೆಗಳನ್ನು ಸರ್ಕಾರಗಳು ತರುವುದಾದರೆ, ಸರ್ಕಾರಗಳು ರೈತರಿಗೆ ಸಾಲ ಕೊಡುವುದಲ್ಲ. ಸರ್ಕಾರಗಳಿಗೇ ರೈತ ಸಾಲ ಕೊಡುತ್ತಾನೆ. ಅರ್ಥಾತ್ ಸರ್ಕಾರ ಕಷ್ಟದಲ್ಲಿದ್ದಾಗ ಕೃಷಿ ಕ್ಷೇತ್ರವೇ ಸರ್ಕಾರದ ಕೈ ಹಿಡಿದು ಎಬ್ಬಿಸುತ್ತದೆ. ಇದು ಮೊನ್ನೆಯ ಕೊರೋನಾ ಸಂಕಷ್ಟದ ಸಮಯದಲ್ಲಿ ಸಾಬೀತಾಗಿದೆ.
ಹಸಿರು ಶಾಲು ಹೊದ್ದು ಗೊಣ್ಣೆ ಒರೆಸಿಕೊಂಡು ಬೀದಿಯಲ್ಲಿ ಬಾಯಿ ಬಡಿದುಕೊಂಡರೆ ಮಾತ್ರ ರೈತರ ಬವಣೆಗಳು ನೀಗುವುದಿಲ್ಲ. ಬದಲಿಗೆ ರೈತರ ನಿಜವಾದ ಸಮಸ್ಯೆಗಳನ್ನು ಅರಿತು ತ್ವರಿತ ಪರಿಹಾರ ಕಂಡುಕೊಳ್ಳಬೇಕಿದೆ.
ಕೊನೆಯಲ್ಲಿ ಒಂದು ಮಾತು…ಸ್ವತಃ ತಾವುಗಳು ರೈತರಲ್ಲದಿದ್ದರೂ ತಮ್ಮ ಅಸ್ತಿತ್ವಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ, ಹೋರಾಟಗಳ ನೆಪಕ್ಕೆ ರೈತರ ಸಮಸ್ಯೆಗಳನ್ನು ಜೀವಂತವಾಗಿರಿಸಿ ರೈತರ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುವ ಕೆಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳನ್ನು ಬೆಂಕಿ ಇಟ್ಟು ಸುಟ್ಟುಬಿಡಿ ಎಂದು ವಿನಂತಿಸುತ್ತಾ…..
ಇಂತಿ ನಿಮ್ಮವ …ಜಿ.ಎನ್.ಪ್ರದೀಪ್.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ನಮ್ಮೊಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

