ದೊಡ್ಡಬಳ್ಳಾಪುರ, (ನ.03): ಲೋಕೋಪಯೋಗಿ ಇಲಾಖೆಯ ಎರಡು ಕೋಟಿ ಅನುದಾನದಲ್ಲಿ ನಿರ್ಮಾಣವಾದ ರಸ್ತೆಯೊಂದು, ವರ್ಷ ತುಂಬುವ ಮುನ್ನವೇ ಕುಸಿಯಲಾರಂಭಿಸಿದ್ದು, ಪ್ರಮುಖ ಗ್ರಾಮಗಳಿಗೆ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.
ತಾಲೂಕಿನ ಹೊಸಹಳ್ಳಿ ಗ್ರಾಮದಿಂದ ಕಲ್ಲುಕುಂಟೆ ಗ್ರಾಮದವರೆವಿಗೂ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಸ್ತೆಯಲ್ಲಿ ಸೇತುವೆ ಬಳಿ ಕುಸಿಯುತ್ತಿದ್ದು, ಗಮನ ಹರಿಸಬೇಕಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರ ಗಮನಹರಿಸದ ಕಾರಣ, ಪ್ರಮುಖ ಗ್ರಾಮಗಳಿಗೆ ಸಂಚರಿಸುವ ವಾಹನ ಸವಾರರು ಆತಂಕದಲ್ಲಿ ಪಯಣಿಸುವಂತಾಗಿದೆ.
ಕಾಮಗಾರಿ: ಸಂಪೂರ್ಣ ಪಾಳು ಬಿದ್ದಿದ್ದ ಹೊಸಹಳ್ಳಿ- ಕಲ್ಲುಕುಂಟೆ ಸಂಪರ್ಕ ರಸ್ತೆಗೆ ಶಾಸಕ ಟಿ.ವೆಂಕಟರಮಣಯ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಎರಡು ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಕಳೆದ 2021ರ ಜ.12 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಗುತ್ತಿಗೆದಾರನ ವಿಳಂಬ, ಅಧಿಕಾರಿಗಳ ಕರ್ತವ್ಯ ಲೋಪದಿಂದ ಶಂಕು ಸ್ಥಾಪನೆ ನಡೆದು ಎಂಟು ತಿಂಗಳು ಕಳೆದರು. ರಸ್ತೆ ಕಾಮಗಾರಿ ಆರಂಭವಾಗಿರಲಿಲ್ಲ. ನಂತರ ಕೋವಿಡ್ ಕಾರಣ, ಚಿಕ್ಕಬಳ್ಳಾಪುರದಲ್ಲಿ ಉಂಟಾದ ಬ್ಲಾಸ್ಟಿಂಗ್ ಸಾವಿನ ಪ್ರಮಾದದ ನೆಪದಲ್ಲಿ ಕಾಮಗಾರಿ ಮತ್ತಷ್ಟು ವಿಳಂಬವಾಗಿತ್ತು.
ಈ ಸಂದರ್ಭದಲ್ಲಿ ಹರಿತಲೇಖನಿ ಸೇರಿದಂತೆ ಪ್ರಮುಖ ಮಾಧ್ಯಮಗಳು ರಸ್ತೆ ಕಾಮಗಾರಿ ವಿಳಂಬದ ಕುರಿತು ವರದಿ ಪ್ರಕಟಿಸಿ, ಶಾಸಕ ಟಿ.ವೆಂಕಟರಮಣಯ್ಯ ಅವರ ಗಮನಕ್ಕೆ ತಂದಿದ್ದು, ಈ ನಿಟ್ಟಿನಲ್ಲಿ ತ್ವರಿತವಾಗಿ ರಸ್ತೆ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ನಂತರ ಎಚ್ಚೆತ್ತ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಳಿಸಿದ್ದ. ಆದರೆ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆಯುವ ಮುನ್ನವೇ ಜಕ್ಕೇನಹಳ್ಳಿ ಬಳಿಯ ಸೇತುವೆ ರಸ್ತೆ ಗುಂಡಿ ಬಿದ್ದಿದ್ದು, ಸಮೀಪದಲ್ಲಿಯೇ ಭೂಮಿ ಕುಸಿದು ಬೀಳುತ್ತಿದೆ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಈ ಕುರಿತಂತೆ ಗಮನಹರಿಸಿಲ್ಲ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.
ಸೇತುವೆಯ ಇಕ್ಕೆಲ ಸೇರಿದಂತೆ ರಸ್ತೆ ತೀವ್ರವಾಗಿರುತ್ತದೆ ಕುಸಿಯುತ್ತಿದ್ದು, ವಾಹನ ಸವಾರರು ಪ್ರಮಾದ ಸಂಭವಿಸದಂತೆ ಕಲ್ಲುಗಳನ್ನು ಜೋಡಿಸಿದ್ದಾರೆ.
ಅಲ್ಲದೆ ಇದೆ ರಸ್ತೆ ಉಜ್ಜನಿ ಕ್ರಾಸ್ ಬಳಿ ರಸ್ತೆ ಪಕ್ಕದಲ್ಲಿಯೇ ದೊಡ್ಡ ಪ್ರಮಾಣದ ಗುಂಡಿ ಬಿದ್ದಿದ್ದು, ಎರಡು ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ ರಸ್ತೆಯ ಗುಣಮಟ್ಟವನ್ನು ಕುಹಕವಾಡುತ್ತಿದೆ.
ಹೊಸಹಳ್ಳಿ – ಆರೂಢಿ – ಗೊರವನಹಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆ ಗುಣಮಟ್ಟದ ಕಾಮಗಾರಿ ನಡೆಸದ ಕಾರಣ ಸರ್ಕಾರದ ಎರಡು ಕೋಟಿ ಅನುದಾನ ವ್ಯರ್ಥವಾಗಿದೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.
ಈ ಕುರಿತಂತೆ ಅಧಿಕಾರಿಗಳು ತ್ವರಿತವಾಗಿ ಎಚ್ಚೆತ್ತುಕೊಳ್ಳಬೇಕಿದೆ. ಈಗಾಗಲೇ ಈ ವ್ಯಾಪ್ತಿಯ ಮಾಕಳಿ, ಬಂಕೇನಹಳ್ಳಿ ಬಳಿ ಸೇತುವೆ ಕುಸಿದಿದ್ದು, ಅಧಿಕಾರಿಗಳು ನಿರ್ಲಕ್ಷ ತೋರಿದಲ್ಲಿ, ಮತ್ತೊಂದು ಸೇತುವೆ ಕುಸಿದು ಬೀಳುವ ಆತಂಕ ಎದುರಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

