ದೊಡ್ಡಬಳ್ಳಾಪುರ, (ನ.17): ತಾಲೂಕುಪಂಚಾಯಿತಿ ಇಒ ಶ್ರೀನಾಥ್ ಗೌಡ ಅವರು ಗುರುವಾರ ತಾಲೂಕಿನ ವಿವಿಧ ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ, ಮತದಾರರ ನೋಂದಣಿ ಕುರಿತಂತೆ ವಿಶೇಷ ಸ್ವೀಪ್ ಚಟುವಟಿಕೆಗಳ ಮೂಲಕ ಆಂದೋಲನ ನಡೆಸಿದರು.
ಈ ವೇಳೆ ಮಾತನಾಡಿ ಅವರು, ಮತದಾನ ಮಾಡಲು ಅರ್ಹರಿರುವವರು ಯಾರು ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಆ ನಿಟ್ಟಿನಲ್ಲಿ ತಾಲೂಕಿನಾಧ್ಯಂತ ಜಾಗೃತಿ ಮೂಡಿಸಲು ವಿವಿಧ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಡಿಸೆಂಬರ್ 8ರವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹಲವು ಕಾರಣಗಳಿಂದ ತಮ್ಮ ಕುಟುಂಬದ ಸದಸ್ಯರು ಬಿಟ್ಟು ಹೋಗಿದ್ದಲ್ಲಿ ಅಥವಾ ಹೊಸದಾಗಿ ಸೇರ್ಪಡೆ ಆಗಿದ್ದರೆ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಮತ್ತು ತೆಗೆದುಹಾಕಲು ಅವಕಾಶವಿದೆ. ಅಂತಿಮ ಪಟ್ಟಿಯನ್ನು 2023ರ ಜನವರಿ 5 ರಂದು ಪ್ರಕಟಿಸಲಾಗುತ್ತದೆ. ನೊಂದಣಿ ಕಾರ್ಯವು ಪ್ರತಿನಿತ್ಯ ಚಾಲನೆಯಲ್ಲಿದ್ದು, ನವೆಂಬರ್ 12, 20 ಮತ್ತು ಡಿಸೆಂಬರ್ 3, 4 ರಂದು ಒಟ್ಟು 4 ದಿನ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆ ಮೂಲಕ ನವ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವುದು ಮತ್ತು ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಕಾರ್ಯಗಳನ್ನು ಮಾಡಲು ಕಾಲೇಜಿಗಳಿಗೆ ಯೋಜಿಸಲಾಗಿದೆ. ಅಲ್ಲದೆ ಆನ್ ಲೈನ್ ನಲ್ಲಿ VHA ಮತ್ತು www.nvsp.in ನಲ್ಲಿ ಅರ್ಜಿ ಸಲ್ಲಿಸಬಹುದು. ಜೊತೆಗೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ ನೀಡಿ ನೊಂದಾಯಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

