ದೊಡ್ಡಬಳ್ಳಾಪುರ, (ಡಿ.06): ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡುವಂತೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಶಾಮರಾಜ್ ಹಾಗೂ ಕಾಲೇಜಿನ ಉಪನ್ಯಾಸಕರು ಮಂಗಳವಾರ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಜನತಾದರ್ಶನದಲ್ಲಿ ಉಪವಿಭಾಗಾಧಿಕಾರಿ ಎನ್.ತೇಜಸ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕಾಲೇಜು ಪ್ರಾರಂಭವಾಗಿ ಸುಮಾರು ಏಳು ವರ್ಷಗಳು ಕಳೆದಿದೆ. ಆದರೆ ಇಲ್ಲಿಯವರೆಗೂ ಸೂಕ್ತ ಕಟ್ಟಡ ಇಲ್ಲದೆ ಪ್ರೌಢ ಶಾಲೆಯಲ್ಲಿನ ಕೊಠಡಿಗಳಲ್ಲಿಯೇ ತರಗತಿಗಳನ್ನು ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಿಳಾ ಪದವಿ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡುವಂತೆ ಹಲವಾರು ಬಾರಿ ಮನವಿ ಮಾಡಲಾಗಿದೆ ಎಂದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಟಿ.ವೆಂಕಟರಮಣಯ್ಯ, ನಗರದ ಮಧ್ಯಭಾಗದಲ್ಲಿಯೇ ಇರುವ ತೋಟಗಾರಿಕೆ ಇಲಾಖೆಯ ಜಮೀನಿನಲ್ಲಿ ಕಾಲೇಜಿಗೆ ಅಗತ್ಯ ಇರುವ ಎರಡು ಎಕರೆ ಜಮೀನು ಮಂಜೂರು ಮಾಡುವಂತೆ ತೋಟಗಾರಿಕೆ ಇಲಾಖೆ ಸಚಿವರಿಗೆ ಹಲವಾರಿ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಗಮನವನ್ನೇ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸುವುದು ಮುಖ್ಯವಲ್ಲ. ಜನರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಪಂಧಿಸದೇ ಇದ್ದರೆ ಜನತಾದರ್ಶನದ ಬಗ್ಗೆ ನಂಬಿಕೆಯನ್ನು ಕಳೆದುಕೊಳ್ಳಲಿದ್ದಾರೆ. ತಾಲ್ಲೂಕಿನಲ್ಲಿ ಸರ್ವೇ ಇಲಾಖೆಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸರ್ವೇ ಅಧಿಕಾರಿಗಳಿದ್ದಾರೆ. ರೈತರು ಅರ್ಜಿ ಸಲ್ಲಿಸಿ ತಿಂಗಳು ಗಟ್ಟಲೆ ಕಳೆದರು ಸಹ ಸರ್ವೇ ಇಲಾಖೆ ವತಿಯಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ. ಕನಿಷ್ಠ ತಿಂಗಳಿಗೆ ಒಮ್ಮೆಯಾದರು ತಾಲ್ಲೂಕು ಕಚೇರಿಯಲ್ಲಿ ರೈತರ, ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸುವ ಅದಾಲತ್ ನಡೆಸಬೇಕು ಎಂದರು.
ರಾಗಿ ಖರೀದಿ ಮಿತಿಯನ್ನು ಸರ್ಕಾರ ಒಂದು ಎಕರೆಗೆ 10 ಕ್ವಿಂಟಾಲ್ ಹಾಗೂ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಮಾತ್ರ ಖರೀದಿಸಲು ಆದೇಶ ಹೊರಡಿಸಿದೆ. ಆದರೆ ಈ ಮಿತಿಯನ್ನು ಹೆಚ್ಚಿಸಲು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಷದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆಯೇ ಸಾರ್ವಜನಿಕರು ಹೆಚ್ಚಿನ ಸಮಸ್ಯೆಗಳನ್ನು ಜನತಾದರ್ಶನದಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು. ಸಭೆಯಲ್ಲಿ ತಹಶೀಲ್ದಾರ್ ಮೋಹನಕುಮಾರಿ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಬ್ಯಾನರ್ ತೆರವು ಮಾಡಿ: ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನತಾದರ್ಶನದ ವೇದಿಕೆ, ಅರ್ಜಿ ಸ್ವೀಕರಿತಿ ಕೇಂದ್ರ ಸೇರಿದಂತೆ ಎಲ್ಲೆಡೆ ಕಟ್ಟಲಾಗಿದ್ದ ಬ್ಯಾನರ್ಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಭಾವ ಚಿತ್ರ, ಹೆಸರು ಹಾಗೂ ಜನತಾದರ್ಶನ ಎಂದು ಬರೆಸಲಾಗಿತ್ತು. ಶಾಸಕರ ಹೆಸರು ಎಲ್ಲೂ ಸಹ ಇರಲಿಲ್ಲ. ಮಧ್ಯಾಹ್ನ 11 ಗಂಟೆಗೆ ಜನತಾದರ್ಶನ ಪ್ರಾರಂಭವಾಗಲಿದೆ ಎಂದು ಸಾರ್ವಜನಿಕರು, ವಿವಿಧ ಇಲಾಖೆಗಳು ಅಧಿಕಾರಿಗಳು ಸಚಿವರಿಗಾಗಿ ಕಾದುಕಳಿತಿದ್ದರು. ಆದರೆ ಮಧ್ಯಾಹ್ನ 01.30 ಗಂಟೆಗೆ ಸಚಿವರು ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬಾರದೇ ಇರುವ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ ಎಂದು ಜನರಿಗೆ ಮಾಹಿತಿ ನೀಡಲಾಯಿತು.
ಜನತಾದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಟಿ.ವೆಂಕಟರಮಣಯ್ಯ ಅವರು ‘ಬ್ಯಾನರ್ಗಳಲ್ಲಿ ನನ್ನ ಹೆಸರು ಇಲ್ಲದ ಮೇಲೆ, ಸಚಿವರು ಬಾರದೇ ಇರುವುದರಿಂದ ವೇದಿಕೆಯಲ್ಲಿ ಹಾಕಲಾಗಿರುವ ಬ್ಯಾನರ್ ತೆಗೆದರೆ ಮಾತ್ರ ನಾನು ಭಾಗವಹಿಸುತ್ತೇನೆ. ಕ್ಷೇತ್ರದ ಶಾಸಕರ ಹೆಸರೇ ಇಲ್ಲದ ವೇದಿಕೆಯಲ್ಲಿ ನಾನು ಯಾವ ರೀತಿ ಭಾಗವಹಿಸಿ ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಲಿ’ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಮನವಿಯ ನಂತರ ವೇದಿಕೆಗೆ ಬಂದ ಶಾಸಕರು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರ ಆಡಳಿದಲ್ಲಿ ತಾಲ್ಲೂಕಿನಲ್ಲಿ ಆಗಿರುವ ಕೆಲಸಗಳು ಹಾಗೂ ಬಿಜೆಪಿ ಸರ್ಕಾರದಲ್ಲಿ ತಾಲ್ಲೂಕಿನ ಅಭಿವೃದ್ಧಿಯ ತಾರತಮ್ಯದ ಕುರಿತಂತೆಯೇ ಮಾತನಾಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

