ದೊಡ್ಡಬಳ್ಳಾಪುರ, (ಡಿ.11): ರಾಜಕಾರಣಿಗಳು, ಪೊಲೀಸರು ಹಾಗೂ ಅಧಿಕಾರಿಗಳಿಂದ ಅಂತರ ಕಾಯ್ದುಕೊಂಡರೆ ಮಾತ್ರ ಪತ್ರಕರ್ತರು ಸಮಾಜದ ಪರವಾಗಿ ವರದಿಗಳನ್ನು ಬರೆಯಲು ಸಾಧ್ಯ ಎನ್ನುವುದನ್ನು ಸದಾ ನೆನಪು ಮಾಡುತ್ತಿದ್ದವರು ಹಿರಿಯ ಲೇಖಕರಾಗಿದ್ದ ಎಂ.ಎಸ್.ಸಂಪತ್ತಯ್ಯಂಗಾರ್ ಎಂದು ಹಿರಿಯ ವಿಜ್ಞಾನ ಲೇಖಕ ಡಾ.ಎ.ಓ.ಆವಲಮೂರ್ತಿ ನೆನಪು ಮಾಡಿಕೊಂಡರು.
ನಗರದ ಕನ್ನಡ ಜಾಗೃತ ಭವನದಲ್ಲಿ ಭಾನುವಾರ ನಡೆದ ಹಿರಿಯ ಲೇಖಕ ಎಂ.ಎಸ್.ಸಂಪತ್ತಯ್ಯಂಗಾರ್ ಅವರ ‘ಒಡನಾಟದ ಒಳಬಲ, ನೆನಪುಗಳ ನುಡಿಹಾರ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕ ವೃತ್ತಿಯೊಂದಿಗೆ ಒಂದುವರೆ ದಶಕಗಳ ಕಾಲ ಪತ್ರಕರ್ತನಾಗಿ ಕೆಲಸ ಮಾಡುವಾಗ ಸದಾ ಎಚ್ಚರಿಕೆಯ ಮಾತುಗಳನ್ನು ಹೇಳುತ್ತ ಮಾರ್ಗದರ್ಶನ ಮಾಡುತ್ತಿದ್ದರು. 96 ವರ್ಷಗಳ ತುಂಬು ಬದುಕನ್ನು ನಡೆಸಿದ್ದ ಸಂಪತ್ತಯ್ಯಂಗಾರ್ ಅವರೊಂದಿಗೆ ಮಾತನಾಡುವುದೆಂದರೆ ಹತ್ತಾರು ಪುಸ್ತಕಗಳನ್ನು ಓದಿದ, ನಮ್ಮೂರಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ವಿಚಾರಗಳು ತಿಳಿಯುತ್ತಿದ್ದವು ಎಂದು ಸ್ಮರಿಸಿದರು.
ನಿವೃತ್ತ ಉಪನ್ಯಾಸಕ ಎಸ್.ನಾರಾಯಣ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಸಂಗೀತದ ಅಭಿರುಚಿಯನ್ನು ಕ್ರಮಬದ್ದವಾಗಿ ಬೆಳೆಸಿದ ಹಾಗೂ ಹತ್ತಾರು ಜನ ಹೆಸರಾಂತ ಸಂಗೀತ ವಿದ್ವಾಂಸರನ್ನು ಇಲ್ಲಿಗೆ ಕರೆತಂದು ಕಛೇರಿಗಳನ್ನು ನಡೆಸಿದ ಕೀರ್ತಿ ಸಂಪತ್ತಯ್ಯಂಗಾರ್ ಅವರಿಗೆ ಸಲ್ಲುತ್ತದೆ. ಸಂಗೀತವನ್ನು ಅಸ್ವಾಧಿಸುವ, ಕಲಿಯುವ ಪರಂಪರೆಯನ್ನು ಹುಟ್ಟುಹಾಕಿದ್ದಾರೆ ಎಂದರು.
ಲೇಖಕಿ ಕೆ.ಎಸ್.ಪ್ರಭಾ ಮಾತನಾಡಿ, ದೊಡ್ಡಬಳ್ಳಾಪುರದ ಎಲ್ಲಾ ವಿಚಾರಗಳನ್ನು ತಿಳಿದಿರುವ ವಿಶ್ವಕೋಶದಂತೆ 96 ವರ್ಷಗಳ ಇಳಿ ವಯಸ್ಸಿನಲ್ಲೂ ಹೇಳುತ್ತಿದ್ದರು. ನಗರದಲ್ಲಿ ಮಹಿಳಾ ಸಮಾಜ ಬೆಳೆಯಲು ಕಾರಣರಾಗಿದ್ದರು. ಅವರಲ್ಲಿನ ಅಗಾದವಾದ ನೆನಪಿನ ಶಕ್ತಿ ಹಾಗೂ ಅದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಶೈಲಿ ಅದ್ಬುತವಾಗಿತ್ತು ಎಂದರು.
ನಗರಸಭೆ ಹಿರಿಯ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಹಣವನ್ನೇ ಖರ್ಚು ಮಾಡದೇ ಇಲ್ಲಿನ ಪುರಸಭೆಗೆ ಐದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಸಂಪತ್ತಯ್ಯಂಗಾರ್ ಅವರು ನಗರದ ಹಾಗೂ ಜನರಪರವಾಗಿ ಸದಾ ಶ್ರಮಿಸಿದ್ದವರು ಎಂದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಎ.ಆರ್.ನಾಗರಾಜನ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ಕಲಾನಿಧಿ ಎಸ್.ಶಂಕರ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

