ದೊಡ್ಡಬಳ್ಳಾಪುರ, (ಜುಲೈ.29); ನಗರಸಭೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು.
ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಸ್ಥಳೀಯ ಸಂಸ್ಥೆಗಳಿರುವುದು ನಗರದ ನಾಗರೀಕರ ಅನುಕೂಲಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅದರ ಅದ್ಯಕರ್ತವ್ಯ, ಅದಕ್ಕಾಗಿಯೇ ನಾಗರೀಕರು ಕಂದಾಯ ತೆರಿಗೆ ಕಟ್ಟುತ್ತೇವೆ.
ರಸ್ತೆ, ನೀರು, ಚರಂಡಿ, ಬೀದಿ ದೀಪ, ನೈರ್ಮಲ್ಯದ ವ್ಯವಸ್ಥೆ ಮಾಡಬೇಕಾಗಿರುವುದು ನಗರಸಭೆಯ ಕೆಲಸ. ಒಂದು ವರ್ಷ ತೆರಿಗೆ ಕಟ್ಟದಿದ್ದರೆ ಅದಕ್ಕೆ ದಂಡ ಹಾಕುವ ನಗರಸಭೆಯವರಿಗೆ ಸರಿಯಾದ ಕೆಲಸ ಮಾಡದಿದ್ದರೆ ನಾವು ಅವರಿಗೆ ಏನು ಮಾಡಬೇಕು ಎಂಬ ಪ್ರಶ್ನೆ ನಮ್ಮ ಮುಂದಿದೆ.
ಈಗ ಮಳೆಯು ಆರಂಭವಾಗಿದೆ. ಆದರೆ ಚರಂಡಿಗಳು ಮಾತ್ರ ತ್ಯಾಜ್ಯದಿಂದ ಕಟ್ಟಿಕೊಂಡು ಚರಂಡಿ ನೀರು ರಸ್ತೆಗೆ ಬರುವಂತಾಗಿದೆ. ದೂರದೃಷ್ಟಿಯ ನಾಯಕತ್ವ ಇಲ್ಲದಿರುವುದು ನಗರಸಭೆ ಈ ಮಟ್ಟಿಗೆ ಎಲ್ಲಾ ವಿಭಾಗಗಳಲ್ಲೂ ಕಳಪೆಯಾಗಿರುವುದೇ ಕಾರಣ.
ಹಣ ಲೂಟಿಗೆ ನಿಂತ ಅಧಿಕಾರಿಗಳ ವರ್ತನೆ ಕೆಲ ಜನಪ್ರತಿನಿದಿಗಳಿಗೆ ಕಂಡು ಕಾಣದಂತೆ, ಕಿವಿ ಇದ್ದರೂ ಕೇಳದಂತೆ, ಬಾಯಿದ್ದರೂ ಮಾತನಾಡದಂತಾಗಿದೆ.
ಕಳೆದ 2 ವರ್ಷಗಳಿಂದಿಚೆಗೆ ನಗರದ ನಾಗರೀಕರನ್ನು ನಗರಸಭೆಯ ಆಡಳಿತ ಹೇಗಿದೆ ಎಂದು ಕೇಳಿದರೆ ಅವರೇ ಇವರ ಗುಣಗಾನ ಮಾಡುತ್ತಾರೆ. ಜನಸಾಮಾನ್ಯರ ಕೆಲಸ ಕಾರ್ಯಗಳು ಆಗುತ್ತಿಲ್ಲ, ಊರು ಗಬ್ಬೆದ್ದು ನಾರುತ್ತಿದೆ. ಯಾವ ಪುರಷಾರ್ಥಕ್ಕಾಗಿ ನಗರಸಭೆಗೆ ಸ್ವಚ್ಚ ದೊಡ್ಡಬಳ್ಳಾಪುರ ಪ್ರಶಸ್ತಿ ಕೊಟ್ಟರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಅಧಿಕಾರಿಗಳು ಆಡಿದ್ದೆ ಆಟವಾಗಿದೆ. ಆಡಳಿತದಲ್ಲಿ ಬಿಗಿ ಇಲ್ಲವಾಗಿದೆ. 2005ರಲ್ಲಿ ಹಣ ಕಟ್ಟಿದವರಿಗೆ ನಿವೇಶನ ನೀಡಲು ಇನ್ನು ಇವರ ಕೈಲಿ ಆಗಿಲ್ಲ. ಊರೆಲ್ಲಾ ಡೆಂಗ್ಯೂ ಅಬ್ಬರಿಸುತ್ತಿದೆ. ಆದರೆ ಎಲ್ಲೂ ಫಾಗಿಂಗ್ ಹಾಕಿದ್ದು ಕಂಡಿಲ್ಲ. ಈ ಕರ್ಮಕಾಂಡಕ್ಕೆ ಯಾರಾದರೂ ಸತ್ತರೇ ಅದಕ್ಕೆ ನಗರಸಭೆಯವರೇ ನೇರಹೊಣೆ, ಹೋರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮನವಿ ಸ್ವೀಕರಿಸಿದ ಪೌರಾಯುಕ್ತ ಕಾರ್ತಿಕ್ ಈಶ್ವರ್, ಇತೀಚೆಗಷ್ಟೇ ವರ್ಗಾವಣೆಯಾಗಿ ಬಂದಿದ್ದು, ಪ್ರತಿ ದಿನ ವಾರ್ಡ್ ವಾರು ಭೇಟಿ ನೀಡಿ ಸಮಸ್ಯೆ ತಿಳಿದು, ಬಗೆ ಹರಿಸಲು ಶ್ರಮಿಸುತ್ತಿದ್ದೇನೆ. ಪತ್ರಕರ್ತರ ಸಂಘ ನೀಡಿರುವ ಮನವಿ, ಹಕ್ಕೊತ್ತಾಯಗಳನ್ನು ಪರಿಶೀಲಿಸಿ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ದೇವರಾಜ್, ರಾಜ್ಯ ಕಾರ್ಯದರ್ಶಿ ಸತೀಶ್, ಜಿಲ್ಲಾಧ್ಯಕ್ಷ ಎಚ್ಎಸ್ ಅಗ್ನಿ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಚೆನ್ನಿಗರಾಯಪ್ಪ, ಉಪಾಧ್ಯಕ್ಷರಾದ ಆನಂದ್.
ತಾಲೂಕು ಅಧ್ಯಕ್ಷ ರಾಜು ಸಣ್ಣಕ್ಕಿ, ತಾಲೂಕು ಉಪಾಧ್ಯಕ್ಷ ಡಿಸಿ ಚೌಡರಾಜ್ ಹಾಗೂ ನರಸಿಂಹರಾಜು ಪ್ರಧಾನ ಕಾರ್ಯದರ್ಶಿ ಜನಪರ ಮಂಜು, ಸಹ ಕಾರ್ಯದರ್ಶಿ ಮಹೇಶ್, ಖಜಾಂಚಿ ಹರಿಕುಮಾರ್, ನಿರ್ದೇಶಕ ಉಮೇಶ್, ಶಿವಾನಂದ್, ಜಿಲ್ಲಾ ಸಮಿತಿ ಸದಸ್ಯ ಗೋಪಾಲಪ್ಪ, ಸದಸ್ಯ ದೇವರಾಜ್.
ಹಿರಿಯ ಕನ್ನಡ ಪರ ಹೋರಾಟಗಾರ ಜಿ.ಸತ್ಯನಾರಾಯಣ್, ಕನ್ನಡ ಪರ ಸಂಘಟನೆಗಳು ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಂಜಪ್ಪ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜ್, ಕನ್ನಡ ಪರ ಹೋರಾಟಗಾರರಾದ ಮೋಹನ್ ಕುಮಾರ್, ನಯಾಜ್ ಖಾನ್, ಪ್ರಜಾ ವಿಮೋಚನ ಬಹುಜನ ಸಮಿತಿ ನಗರಾಧ್ಯಕ್ಷ ಮುತ್ತೂರು ಶ್ರೀನಿವಾಸ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕದ ಲಕ್ಷ್ಮೀ ಶ್ರೀನಿವಾಸ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷರಾದ ಶಿವಶಂಕರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….