ಬೆಂಗಳೂರು, (ಆಗಸ್ಟ್.03); ಇಲ್ಲಿನ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತಗಳಲ್ಲಿ ಮೃತಪಟ್ಟವರ ಸಂಖ್ಯೆ 344ರ ಗಡಿ ದಾಟಿದೆ.
ಘಟನೆಯಲ್ಲಿ 300 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದರಿಂದ ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಗುರುವಾರ ಸಂಜೆ 4 ಗಂಟೆಯವರೆಗೆ ಮುಂದುವರೆಯಬೇಕಿದ್ದ ರಕ್ಷಣಾ ಕಾರ್ಯಾಚರಣೆಯನ್ನು ಮೊಟಕುಗೊಳಿಸಲಾಗಿತ್ತು. ಈಗ ಮತ್ತೆ ಆರಂಭಿಸಿದ್ದು, ಪರಿಹಾರ ಕಾರ್ಯಾಚರಣೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಾರ್ಯಾಚರಣೆಯನ್ನು ಮತ್ತಷ್ಟು ದಿನಕ್ಕೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದುಕುಳಿದವರನ್ನು ಹುಡುಕಲು ಡ್ರೋನ್; ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ಭೂಕುಸಿತಗೊಂಡ ಕಟ್ಟಡಗಳಲ್ಲಿ ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕಲು ನಿರಂತರ ಪ್ರಯತ್ನ ಮುಂದುವರಿದಿದ್ದು, ಡ್ರೋನ್ ಆಧಾರಿತ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಚಾಲಿಯಾರ್ ನದಿಯ ಸುತ್ತಮುತ್ತಲಿನ ಎಂಟು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಮತ್ತು ಈಜು ಪರಿಣಿತ ಸ್ಥಳೀಯರು ಕೂಡ ಶೋಧ ಕಾರ್ಯ ನಡೆಸುತ್ತಿದ್ದು, ಹೆಲಿಕಾಪ್ಟರ್ ಬಳಸಿ ಶೋಧ ನಡೆಸಲಾಗುತ್ತಿದೆ.
ಈ ಭೂಕುಸಿತವು ಮನುಷ್ಯರಷ್ಟೇ ಅಲ್ಲ, ಮೆಪ್ಪಾಡಿಯಲ್ಲಿ ಬದುಕುಳಿದಿರುವ ಸಾಕುಪ್ರಾಣಿಗಳನ್ನು ಕೂಡ ಸಂಕಷ್ಟಕ್ಕೆ ದೂಡಿದೆ. ಅವುಗಳಿಗೆ ಆಹಾರ ಒದಗಿಸುವುದು ಸಮಸ್ಯೆಯಾಗಿದೆ. ನಿನ್ನೆ ಚೂರಲ್ಮಲಾದಲ್ಲಿರುವ ವನರಾಣಿ ಎಸ್ಟೇಟ್ನಲ್ಲಿ ಪಶುಸಂಗೋಪನಾ ಇಲಾಖೆಯು ಜಾನುವಾರುಗಳಿಗೆ ಆಹಾರ ನೀಡಿದೆ.
ಕರ್ನಾಟಕದಿಂದ ನೂರು ಮನೆ ನಿರ್ಮಾಣ; ಪ್ರವಾಹ ಪೀಡಿತ ವಯನಾಡ್ ಗೆ ರಾಜ್ಯದ ನೆರವನ್ನು ಇನ್ನಷ್ಟು ವಿಸ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂರು ಮನೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಶಿರಾಡಿ ಘಾಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆ ಧೂರವಾಣಿ ಮೂಲಕ ಮಾತನಾಡಿದ್ದೇನೆ. ಅಗತ್ಯ ಇರುವ ನೆರವನ್ನು ವಿಸ್ತರಿಸುವುದಾಗಿ ಹೇಳಿದರು.
ಘಟನೆಯಲ್ಲಿ ನಾಪತ್ತೆಯಾಗಿರುವ ಒಟ್ಟು ಕನ್ನಡಿಗರ ಲೆಕ್ಕ ಸಿಗಲು ಇನ್ನಷ್ಟು ಸಮಯ ಬೇಕು. ರಕ್ಷಣಾ ಕಾರ್ಯಾಚರಣೆ ಪೂರ್ತಿ ಮುಗಿದ ಬಳಿಕ ತಿಳಿಯಲಿದೆ ಎಂದರು.
ವಯನಾಡಿನಲ್ಲಿ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ. ಯಾವ ಸ್ಥಳದಲ್ಲಿ ನಿರ್ಮಿಸಬೇಕು, ಯಾವ ವೆಚ್ಚದಲ್ಲಿ ನಿರ್ಮಿಸಬೇಕು ಎನ್ನುವುದನ್ನು ನಂತರ ತೀರ್ಮಾನಿಸಲಾಗುವುದು ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

